ಕೋನಡ್ಕ-ನೀರುಕ್ಕು – ಚೂರಿಪದವು ರಸ್ತೆ ಅಭಿವೃದ್ಧಿಗೆ ಆಗ್ರಹ
Team Udayavani, Aug 9, 2018, 10:58 AM IST
ನಿಡ್ಪಳ್ಳಿ : ಬೆಟ್ಟಂಪಾಡಿ ಗ್ರಾ.ಪಂ. ವ್ಯಾಪ್ತಿಯ ರೆಂಜ ಮಸೀದಿ ಮೂಲಕ ಕೋನಡ್ಕ – ನೀರುಕ್ಕು – ಚೂರಿಪದವುಗೆ ತೆರಳುವ ರಸ್ತೆ ತೀರಾ ಹದಗೆಟ್ಟಿದ್ದು, ಅಭಿವೃದ್ಧಿಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಎರಡು ಕಿ.ಮೀ. ಉದ್ದದ ಈ ರಸ್ತೆಯಲ್ಲಿ ಮಳೆಗಾಲದಲ್ಲಂತೂ ಪಾದಚಾರಿಗಳು ನಡೆದಾಡಲು, ವಾಹನ ಸವಾರರು ಸಂಚರಿಸಲು ಕಷ್ಟ. ಈ ರಸ್ತೆಯ ಅರ್ಧಭಾಗ ಬೆಟ್ಟಂಪಾಡಿ ಹಾಗೂ ಉಳಿದ ಅರ್ಧ ಭಾಗ ನಿಡ್ಪಳ್ಳಿ ಗ್ರಾ.ಪಂ. ವ್ಯಾಪ್ತಿಗೆ ಸೇರಿದೆ. ಬೆಟ್ಟಂಪಾಡಿ ಗ್ರಾಮ ವ್ಯಾಪ್ತಿಯ ರಸ್ತೆ ಕೋನಡ್ಕದ ವರೆಗೆ ಡಾಮರು ಕಾಮಗಾರಿ ನಡೆಸಲಾಗಿದೆ.
ಕೆಲ ವರ್ಷಗಳ ಹಿಂದೆ ಸುವರ್ಣ ಗ್ರಾಮ ಯೋಜನೆಯಲ್ಲಿ ನಿಡ್ಪಳ್ಳಿ ಗ್ರಾಮ ವ್ಯಾಪ್ತಿಯ ರಸ್ತೆಗೆ ಒಂದಿಷ್ಟು ಡಾಮರು ಕಾಮಗಾರಿ ನಡೆಸಲಾಗಿತ್ತು. ಅದೂ ಕಿತ್ತು ಹೋಗಿದ್ದು, ರಸ್ತೆ ತೀರಾ ನಾದುರಸ್ತಿಯಲ್ಲಿದೆ. ಈ ರಸ್ತೆ 2 ಗ್ರಾ.ಪಂ. ವ್ಯಾಪ್ತಿಯಲ್ಲಿರುವುದರಿಂದ ಅಭಿವೃದ್ಧಿ ಕುಂಠಿತವಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಚೂರಿಪದವು ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರ ಮತ್ತು ಅನೇಕ ಮನೆಗಳಿಗೆ ಹೋಗಲು ಈ ರಸ್ತೆಯನ್ನು ಬಳಸಲಾಗುತ್ತದೆ.
ಅಭಿವೃದ್ಧಿಯಾದರೆ ಬಸ್
ಚೂರಿಪದವು ರಸ್ತೆಯು ಕುದುರೆ ಕುಮೇರು ಅಜಲಡ್ಕ ಮೂಲಕ ದರ್ಬೆತ್ತಡ್ಕ, ಶೇಖಮಲೆಗೆ ಸಂಪರ್ಕ ಕಲ್ಪಿಸುತ್ತದೆ. ಶೇಖಮಲೆಯಿಂದ ಜನರಿಗೆ ಸುಳ್ಯ, ಕುಂಬ್ರ, ಬೆಳ್ಳಾರೆ ಕಡೆಗೆ ಹೋಗಲು ಬಹಳ ಸಮೀಪದ ದಾರಿ ಇದೆ. ಈ ರಸ್ತೆ ಅಭಿವೃದ್ಧಿಯಾದರೆ ಬಸ್ಸು ಸಂಚಾರ ಆರಂಭವಾಗಬಹುದು.
ತತ್ಕ್ಷಣ ಅಭಿವೃದ್ಧಿಗೊಳಿಸಲಿ
ರೆಂಜದಿಂದ ಚೂರಿಪದವು ರಸ್ತೆಯಲ್ಲಿ ಸಂಚಾರ ಬಹಳ ಕಷ್ಟವಾಗಿದೆ. ಮಳೆಗಾಲದಲ್ಲಿ ಕೆಸರು ನೀರು ತುಂಬಿ ಶಾಲಾ ಮಕ್ಕಳು ನಡೆದಾಡಲು ಸಾಧ್ಯವಿಲ್ಲ. ಅನೇಕ ವರ್ಷಗಳ ಈ ಭಾಗದ ಜನರ ಬೇಡಿಕೆ ಈಡೇರಿಲ್ಲ. ಇನ್ನಾದರೂ ಸಂಬಂಧಪಟ್ಟವರು ಕ್ರಮ ಕೈಗೊಳ್ಳಲಿ ಎಂದು ಸ್ಥಳೀಯ ನಿವಾಸಿ ಅರವಿಂದ ಮಂಜಲ್ಕುಂಜ ಹೇಳಿದ್ದಾರೆ.
ಶಾಸಕರಿಗೆ ಮನವಿ
ಬೆಟ್ಟಂಪಾಡಿ ಗ್ರಾಮ ವ್ಯಾಪ್ತಿಯಲ್ಲಿ ಮಂಜಲ್ಕುಂಜದ ವರೆಗೆ ಬಾಕಿ ಉಳಿದಿರುವ ರಸ್ತೆ ಕಾಂಕ್ರೀಟ್ ಕಾಮಗಾರಿ ನಡೆಸಲು ಶಾಸಕರಿಗೆ ಮನವಿ ಮಾಡಲಾಗುವುದು. ರಸ್ತೆಯ ಎರಡೂ ಬದಿ ಚರಂಡಿ ನಿರ್ವಹಣೆಗೆ ಗ್ರಾ.ಪಂ.ನ ಕ್ರಿಯಾ ಯೋಜನೆಯಲ್ಲಿ ಸೇರಿಸಲಾಗಿದೆ. ಹಂತ ಹಂತವಾಗಿ ರಸ್ತೆ ದುರಸ್ತಿಯಾಗಲಿದೆ.
– ರಮೇಶ್ ಶೆಟ್ಟಿ ಕೊಮ್ಮಂಡ,
ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯರು
ಮನವರಿಕೆ ಮಾಡಲಾಗಿದೆ
ಈ ರಸ್ತೆ ಅಭಿವೃದ್ಧಿಯಾದರೆ ಹಿಂದುಳಿದಿರುವ ಗ್ರಾಮೀಣ ಪ್ರದೇಶ ಅಭಿವೃದ್ಧಿಯಾಗಬಹುದು. ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಇಲಾಖೆ ಮತ್ತು ಜನಪ್ರತಿನಿ ಗಳಿಗೆ ಮನವರಿಕೆ ಮಾಡಿ ವಿನಂತಿಸಲಾಗಿದೆ. ಇನ್ನೂ ಮುಂದೆಯೂ ಸಂಬಂಧಪಟ್ಟ ಇಲಾಖೆ ಹಾಗೂ ಶಾಸಕರಿಗೆ ಮನವಿ ಮಾಡಿ ದುರಸ್ತಿಗೆ ಪ್ರಯತ್ನಿಸಲಾಗುವುದು.
– ಬಾಲಚಂದ್ರ ರೈ ಆನಾಜೆ
ಸದಸ್ಯರು, ಗ್ರಾ.ಪಂ.ನಿಡ್ಪಳ್ಳಿ.