ಕೊರಿಂಗಿಲ-ನುಳಿಯಾಲು ರಸ್ತೆ ಅಭಿವೃದ್ಧಿಯಾಗಲಿ
Team Udayavani, May 23, 2018, 3:48 PM IST
ನಿಡ್ಪಳ್ಳಿ: ಬೆಟ್ಟಂಪಾಡಿ ಗ್ರಾಮದ ಕೊರಿಂಗಿಲದಿಂದ ಕಕ್ಕೂರು ಆನಡ್ಕ ಮಾರ್ಗವಾಗಿ ನಿಡ್ಪಳ್ಳಿ ಗ್ರಾಮದ ನುಳಿಯಾಲುವರೆಗಿನ ಜಿ.ಪಂ. ರಸ್ತೆಯನ್ನು ದುರಸ್ತಿ ಮಾಡಿ ಡಾಮರ್ ಅಥವಾ ಕಾಂಕ್ರೀಟ್ ಅಳವಡಿ ಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಸುಮಾರು 2.5 ಕಿ.ಮೀ. ಉದ್ದದ ಈ ಕಚ್ಚಾ ರಸ್ತೆಯಲ್ಲಿ ವಾಹನ ಸವಾರರು ಮತ್ತು ಪಾದಚಾರಿಗಳು ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಮಳೆಗಾಲದಲ್ಲಿ ಕೆಸರಿನಿಂದ, ಬೇಸಿಗೆ ಕಾಲದಲ್ಲಿ ಧೂಳಿನಿಂದ ಕೂಡಿರುವುದರಿಂದ ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸುತ್ತದೆ. ಇಷ್ಟಾದರೂ ಕಳೆದ ಐದು ವರ್ಷಗಳಲ್ಲಿ ಶಾಸಕರು, ಸಂಸದರು ಅಥವಾ ಜಿ.ಪಂ.ನಿಂದ ಯಾವುದೇ ಅನುದಾನ ನೀಡದೆ ಕಡೆಗಣಿಸಲಾಗಿದೆ ಎಂದು ಗ್ರಾಮಸ್ಥರು ಬೇಸರದಿಂದಲೇ ಹೇಳುತ್ತಿದ್ದಾರೆ. ಚುನಾವಣೆ ಸಂದರ್ಭ ಮಾತ್ರ ಜನರ ನೆನಪಾಗುತ್ತದೆ ಎಂದು ಸ್ಥಳೀಯರು ದೂರುತ್ತಾರೆ. ರಸ್ತೆ ಇಳಿ ಜಾರಿನಲ್ಲಿ ಜಾರುವುದರಿಂದ ದ್ವಿಚಕ್ರ ಸವಾರರು ಜಾರಿ ಬಿದ್ದ ಪ್ರಸಂಗಗಳು ನಡೆದಿವೆ.
ಪ್ರಯತ್ನಿಸುತ್ತೇವೆ
ಶಾಸಕರೊಂದಿಗೆ ಮಾತನಾಡಿ ರಸ್ತೆ ದುರಸ್ತಿ ಮಾಡಲು ಪ್ರಯತ್ನಿಸಲಾಗುವುದು. ಜನರ ಬೇಡಿಕೆಗನುಸಾರವಾಗಿ ಈ ರಸ್ತೆ ದುರಸ್ತಿಗೆ ಅನುದಾನಕ್ಕಾಗಿ ಅನೇಕ ಬಾರಿ ಪ್ರಯತ್ನಿಸಿದ್ದೆವು. ಆದರೆ ಯಾವುದೇ ರೀತಿಯ ಸ್ಪಂದನೆ ಯಾರಿಂದಲೂ ನಮಗೆ ಸಿಕ್ಕಿಲ್ಲ. ನೂತನವಾಗಿ ಆಯ್ಕೆಯಾದ
ಶಾಸಕರ ಗಮನಕ್ಕೆ ತಂದು ಕಾಂಕ್ರೀಟ್ ಹಾಕಿಸಲು ಮೊದಲ ಆದ್ಯತೆ ನೀಡಲಾಗುವುದು.
– ರಮೇಶ್ ಶೆಟ್ಟಿ ಕೊಮ್ಮಂಡ
ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯ
ಮಣ್ಣು ಹಾಕಿ ದುರಸ್ತಿ
ಈ ರಸ್ತೆಗೆ ಕಳೆದ ಸಲ ಗ್ರಾಮ ಪಂಚಾಯತ್ನಿಂದ ಕೇವಲ 40 ಸಾವಿರ ರೂ.ನಲ್ಲಿ ಹೊಂಡಕ್ಕೆ ಮಣ್ಣು ಹಾಕಿ ದುರಸ್ತಿ ಮಾತ್ರ ಮಾಡಲಾಗಿದೆ. ಅದು ಬಿಟ್ಟರೆ ಬೇರೆ ಯಾವ ಅನುದಾನವೂ ಲಭ್ಯವಾಗಿಲ್ಲ. ಮಳೆಗಾಲ ಕಡಿಮೆಯಾಗಿ ಬೇಸಗೆ ಕಾಲ ಬಂದ ತತ್ಕ್ಷಣ ಸ್ಥಳೀಯರು ಸೇರಿ ಶ್ರಮದಾನದ ಮೂಲಕ ಮಣ್ಣು ಹಾಕಿ ದುರಸ್ತಿ ಮಾಡುತ್ತೇವೆ.
-ರವಿಕುಮಾರ್ ಟೈಲರ್ ಆನಡ್ಕ
ಗಂಗಾಧರ ನಿಡ್ಪಳ್ಳಿ