ಸುಬ್ರಹ್ಮಣ್ಯದಲ್ಲಿ ಭಕ್ತರ ದಟ್ಟಣೆ
ಆಶ್ಲೇಷಾ ನಕ್ಷತ್ರ ವಿಶೇಷ
Team Udayavani, May 13, 2019, 6:10 AM IST
ಸುಬ್ರಹ್ಮಣ್ಯ: ಶಾಲೆಗಳಿಗೆ ಬೇಸಗೆ ರಜೆ, ರವಿವಾರ ಅಲ್ಲದೆ ಆಶ್ಲೇಷಾ ನಕ್ಷತ್ರವೂ ಜತೆಯಾಗಿ ಬಂದಿರುವುದರಿಂದ ನಾಗಾರಾಧನೆಯ ಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರವಿವಾರ ಒಂದು ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿ ದೇವರ ದರ್ಶನಗೈದು ವಿವಿಧ ಸೇವೆಗಳನ್ನು ಸಲ್ಲಿಸಿದರು.
ದೇವಸ್ಥಾನದ ಒಳಾಂಗಣ, ಹೊರಾಂಗಣ, ರಥಬೀದಿ ಮೊದಲಾದ ಕಡೆಗಳಲ್ಲಿ ಭಕ್ತರ ದಟ್ಟಣೆ ಕಂಡುಬಂತು. ರವಿವಾರ ಸಂಜೆಯ ವರೆಗೂ ಇದೇ ದೃಶ್ಯ ಕಂಡುಬಂತು. ವಾಹನಗಳ ದಟ್ಟಣೆಯಿಂದಾಗಿ ಕುಮಾರಧಾರೆಯಿಂದ ಪೇಟೆ ತನಕ ತಾಸುಗಟ್ಟಲೆ ಟ್ರಾಫಿಕ್ ಜಾಮ್ ಆಯಿತು.
ಧರ್ಮಸ್ಥಳದಲ್ಲೂ ಜನಸಂದಣಿ
ಬೆಳ್ತಂಗಡಿ: ಎರಡನೇ ಶನಿವಾರ ಹಾಗೂ ರವಿವಾರದ ರಜೆ ಪ್ರಯುಕ್ತ ಊರ ಪರವೂರ ಭಕ್ತರು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಭಕ್ತರ ದಟ್ಟಣೆ ಕಂಡುಬಂದಿತು.
ಮೇ 11ರಂದು 40ರಿಂದ 50 ಸಾವಿರ ಮಂಧಿ ಭೇಟಿ ನೀಡಿದ್ದು ರವಿವಾರ 50 ಸಾವಿರಕ್ಕೂ ಹೆಚ್ಚು ಮಂದಿ ದೇವರ ದರ್ಶನ ಪಡೆದರು. ದೇವಸ್ಥಾನ, ಪಾರ್ಕಿಂಗ್, ವಸತಿಗೃಹಗಳು ಬಹುತೇಕ ಭರ್ತಿಯಾಗಿದ್ದವು.
ಕೊಲ್ಲೂರು, ಕಟೀಲು ಮೊದವಾದ ದೇವಸ್ಥಾನಗಳಲ್ಲೂ ಭಕ್ತರ ಸಂಖ್ಯೆ ಮಾಮೂಲಿಗಿಂತ ಹೆಚ್ಚಾಗಿತ್ತು.