‘ಜಿಲಾಮಟ್ಟದ ಅಧಿಕಾರಿಗಳಿಂದ ಸಮಸ್ಯೆ ಆಲಿಸುವ ಕೆಲಸ’
Team Udayavani, Feb 22, 2019, 6:27 AM IST
ಬೆಳ್ತಂಗಡಿ : ಸರಕಾರಿ ಸೌಲಭ್ಯಗಳನ್ನು ಜನರಿಗೆ ನೇರವಾಗಿ ತಲುಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಶೇಷ ಗಮನ ಹರಿಸುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ತಾಲೂಕು ಕೇಂದ್ರಕ್ಕೆ ಕರೆಸಿ ಜನರ ಸಮಸ್ಯೆ ಆಲಿಸುವ ಕೆಲಸ ಮಾಡಲಾಗುವುದು ಎಂದು ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.
ಅವರು ಗುರುವಾರ ಇಲ್ಲಿನ ಸಂತೆಕಟ್ಟೆ ಎಸ್ಡಿಎಂ ಸಭಾಭವನದಲ್ಲಿ ಹಕ್ಕುಪತ್ರ ವಿತರಣೆ ಹಾಗೂ ಜನರ ಅಹವಾಲು ಸ್ವೀಕರಿಸಿ ಮಾತನಾಡಿದರು. ಈ ಸಂದರ್ಭ ಸಚಿವರು ಜನರ ಮನವಿಗಳನ್ನು ಸ್ವೀಕರಿಸಿ, ಶೀಘ್ರದಲ್ಲಿ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ಸ್ಥಾಯೀ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿನ್, ಜಿ.ಪಂ. ಸದಸ್ಯರಾದ ಶೇಖರ್ ಕುಕ್ಕೇಡಿ, ಶಾಹುಲ್ ಹಮೀದ್, ಧರಣೇಂದ್ರಕುಮಾರ್, ನಮಿತಾ, ಪುತ್ತೂರು ಸಹಾಯಕ ಕಮಿಷನರ್ ಡಾ| ಎಚ್.ಕೆ. ಕೃಷ್ಣಮೂರ್ತಿ, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ., ಇಒ ಕುಸುಮಾಧರ್ ಬಿ. ಮೊದಲಾದವರು ಉಪಸ್ಥಿತರಿದ್ದರು.
ತಹಶೀಲ್ದಾರ್ ಗಣಪತಿ ಶಾಸ್ತ್ರಿ ಸ್ವಾಗತಿಸಿ, ತಾಲೂಕು ಸಂಯೋಜಕ ಜಯಾನಂದ ಲಾೖಲ ನಿರೂಪಿಸಿದರು.
ಸಹಕಾರ ಇದ್ದಾಗ ಅಭಿವೃದ್ಧಿ
ಬೆಂಗಳೂರು ಅಥವಾ ಜಿಲ್ಲಾ ಕೇಂದ್ರದಲ್ಲಿ ಕೂತು ಜನರ ಸಮಸ್ಯೆ ಕುರಿತು ಚರ್ಚಿಸಿದರೆ ಹೆಚ್ಚು ಪರಿಣಾಮಕಾರಿಯಾಗಿರುವುದಿಲ್ಲ. ಹೀಗಾಗಿ ತಾಲೂಕಿಗೆ ಭೇಟಿ ನೀಡಿ ಜನರ ಸಮಸ್ಯೆ ತಿಳಿಯಬೇಕು ಎನ್ನುವ ನಿಟ್ಟಿನಲ್ಲಿ ಬೆಳ್ತಂಗಡಿಗೆ ಆಗಮಿಸಿದ್ದೇನೆ. ಇಲ್ಲಿನ ಶಾಸಕರು, ಹಿಂದಿನ ಶಾಸಕರ, ಇತರ ಜನಪ್ರತಿನಿಧಿಗಳ ಸಹಕಾರ ಇದ್ದಾಗ ತಾಲೂಕನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲು ಸಾಧ್ಯ.
– ಯು.ಟಿ. ಖಾದರ್, ಸಚಿವರು