ದ.ಕ.: 28 ಮಂದಿ ನಿಗಾದಲ್ಲಿ ದಿಲ್ಲಿ ಸಮಾವೇಶದಲ್ಲಿ ಭಾಗವಹಿಸಿದ್ದ 7 ಮಂದಿ ಆಸ್ಪತ್ರೆಗೆ
Team Udayavani, Apr 4, 2020, 11:06 AM IST
ಮಂಗಳೂರು: ದಿಲ್ಲಿಯ ನಿಜಾಮುದ್ದೀನ್ನಲ್ಲಿ ನಡೆದ ತಬ್ಲಿಫ್- ಎ-ಜಮಾತ್ ಧಾರ್ಮಿಕ ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಭಾಗವಹಿಸಿದವರ ಸಂಖ್ಯೆ 21ರಿಂದ 28ಕ್ಕೆ ಏರಿಕೆಯಾಗಿದೆ. ಕಳೆದೆರಡು ದಿನಗಳಲ್ಲಿ ಮತ್ತೆ ಏಳು ಮಂದಿಯನ್ನು ನಿಗಾ ಕೇಂದ್ರದಲ್ಲಿ ಇರಿಸಲಾಗಿದೆ.
ಸಮಾವೇಶದಲ್ಲಿ ಭಾಗವಹಿಸಿದ್ದ 21 ಮಂದಿ ಯನ್ನು ಬುಧವಾರ ಸಂಪರ್ಕಿಸಿ ಅವರನ್ನು ಆಸ್ಪತ್ರೆ
ನಿಗಾವಣೆ ಕೇಂದ್ರದಲ್ಲಿ ದಾಖಲು ಮಾಡಿಕೊಳ್ಳ ಲಾಗಿತ್ತು. ಇದೀಗ ಗುರುವಾರದ ಬಳಿಕ ಮತ್ತೆ ಏಳು ಮಂದಿಯನ್ನು ಸಂಪರ್ಕಿಸಿ ಅವರನ್ನೂ ನಿಗಾದಲ್ಲಿಡಲಾಗಿದೆ. ಒಟ್ಟು 28 ಮಂದಿಯ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿ ಇನ್ನಷ್ಟೇ ಕೈ ಸೇರಬೇಕಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ “ಉದಯವಾಣಿ’ಗೆ ತಿಳಿಸಿದ್ದಾರೆ.
ದ.ಕ.: ಪಾಸಿಟಿವ್ ಪ್ರಕರಣ ಇಲ್ಲ
ದ.ಕ. ಜಿಲ್ಲೆಯಲ್ಲಿ ಶುಕ್ರವಾರವೂ ಯಾವುದೇ ಕೋವಿಡ್ 19 ಪಾಸಿಟಿವ್ ಪ್ರಕರಣ ಇಲ್ಲ. 4,727
ಮಂದಿ ಗೃಹ ನಿಗಾವಣೆಯಲ್ಲಿದ್ದು, 630 ಮಂದಿ 28 ದಿನಗಳ ಗೃಹ ನಿಗಾವಣೆ ಪೂರೈಸಿದ್ದಾರೆ. ಇಎಸ್ಐ ಆಸ್ಪತ್ರೆಯಲ್ಲಿ 21 ಮಂದಿ ನಿಗಾದಲ್ಲಿ ದ್ದಾರೆ. 43 ಮಂದಿಯ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬರಲು ಬಾಕಿ ಇದೆ. ಶುಕ್ರವಾರ 16 ಮಾದರಿ ಸ್ವೀಕೃತವಾಗಿದ್ದು, ಎಲ್ಲವೂ ನೆಗೆಟಿವ್ ಆಗಿವೆ. ಹೊಸದಾಗಿ ಯಾರೂ ಆಸ್ಪತ್ರೆಗಳಲ್ಲಿ ದಾಖಲಾಗಿಲ್ಲ.ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲ ಎಂಟು ಮಂದಿಯ ಆರೋಗ್ಯ ಸುಧಾರಿಸುತ್ತಿದೆ. ಹತ್ತು ತಿಂಗಳ ಶಿಶುವಿನ ಆರೋಗ್ಯ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಹಾರ ನೀಡಲು ಸಂಪರ್ಕಿಸಿ
ಆಹಾರ ಧಾನ್ಯವನ್ನು ವಲಸೆ ಕಾರ್ಮಿಕರಿಗೆ ನೀಡುವ ಸಂಬಂಧ ಯಾರಾದರೂ ದೇಣಿಗೆ ನೀಡಲು ಇಚ್ಛಿಸಿದ್ದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಿನೇಶ್ ಕುಮಾರ್ ಜಿ. ಟಿ. (9739577979) ಅವರನ್ನು ಸಂಪರ್ಕಿಸಬಹುದು.
ಕಾನೂನು ಕ್ರಮ
ಆಶಾ ಕಾರ್ಯಕರ್ತರು ತಮ್ಮ ಜೀವದ ಹಂಗು ತೊರೆದು ತಮ್ಮ ಹಾಗೂ ಸಮಾಜದ ಆರೋಗ್ಯದ ಸಲುವಾಗಿ ಮನೆಮನೆಗೆ ಭೇಟಿ ನೀಡುತ್ತಿದ್ದು, ಅವರೊಂದಿಗೆ ಸೌಜನ್ಯ ಹಾಗೂ ಗೌರವದಿಂದ ವರ್ತಿಸಬೇಕು. ಯಾವುದೇ ಕಾರಣಕ್ಕೆ ಬೆದರಿಕೆ ಹಾಕುವುದಾಗಲೀ ಹಲ್ಲೆ ಮಾಡುವುದಾಗಲೀ ನಡೆದಲ್ಲಿ ಅಂತಹವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಎಚ್ಚರಿಸಿದ್ದಾರೆ.
ಉಚಿತ ಹಾಲು ವಿತರಣೆ
ಕೊಳಚೆ ಪ್ರದೇಶದ ನಿವಾಸಿಗಳು ಮತ್ತು ಕೂಲಿ ಕಾರ್ಮಿಕರ ಕುಟುಂಬಕ್ಕೆ ಉಚಿತ ಹಾಲು ವಿತರಿಸಲು ಈಗಾಗಲೇ ಪ್ರಾರಂಭಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಶುಕ್ರವಾರ ಹಾಲು ಸರಬರಾಜು ಮಾಡಲಾಗುತ್ತದೆ. ಆಯಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಕೆಎಂಎಫ್ ಅಧಿಕಾರಿಗಳ ಸಮನ್ವಯದೊಂದಿಗೆ ಹಂಚಿಕೆ ಮಾಡಲಾಗಿದೆ. ಅದರಂತೆ ದ.ಕ. ಜಿಲ್ಲೆಗೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಪ್ರತಿದಿನ 5,000 ಲೀ. ಹಾಲು ಪೂರೈಕೆ ಮಾಡಲಿದೆ. ಎ. 14ರ ವರೆಗೂ ಪೂರೈಕೆ ಇರುತ್ತದೆ.