ಡಿ.15ರ ಬಳಿಕ ಫಾಸ್ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ದರ
Team Udayavani, Dec 5, 2019, 5:04 AM IST
ಸುರತ್ಕಲ್: ಕೇಂದ್ರ ಸರಕಾರ ಡಿ. 15ರ ವರೆಗೆ ಫಾಸ್ಟ್ಯಾಗ್ ಅಳವಡಿಕೆಗೆ ಗಡುವು ನೀಡಿದ್ದು ಆ ಬಳಿಕ ಫಾಸ್ಟ್ಯಾಗ್ ಲೇನ್ ಪ್ರವೇಶಿಸುವ ವಾಹನಗಳು ಟೋಲ್ ಗೇಟ್ ದಾಟಲು ದುಪ್ಪಟ್ಟು ದರ ನೀಡುವುದು ಅನಿವಾರ್ಯವಾಗಲಿದೆ.
ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆ ಒದಗಿಸಲು ರಾಜ್ಯದ ಒಳಾಡಳಿತ ಇಲಾಖೆಯ ಅಪರ ಕಾರ್ಯದರ್ಶಿ ಡಾ| ರಜನೀಶ್ ಗೋಯಲ್ ದ.ಕ. ಜಿಲ್ಲಾ ಧಿಕಾರಿಯವರಿಗೆ ಸೂಚನೆ ನೀಡಿದ್ದಾರೆ. ಫಾಸ್ಟ್ಯಾಗ್ ಅಳವಡಿಕೆ ಆಗುತ್ತಿರುವುದಿಂದ ಟೋಲ್ಗೇಟ್ ಪ್ರವೇಶಿಸುವ ವಾಹನಗಳು ಗಂಟೆಗೆ 20 ಕಿ.ಮೀ ವೇಗದಲ್ಲಿ ಇರುವಂತೆ ನೋಡಿಕೊಳ್ಳಬೇಕು.ಇದಕ್ಕಾಗಿ ಪ್ರಾ ಧಿಕಾರವು ತನ್ನದೇ ಆದ ಸಿಸಿಟಿವಿ ಅಳವಡಿಕೆ ಕಾರ್ಯವನ್ನು ಪೂರ್ಣ ಗೊಳಿಸಲು ಸೂಚಿಸಲಾಗಿದೆ.
ಸ್ಥಳೀಯರಿಗೂ ಶುಲ್ಕ!
ಡಿ. 15ರ ಬಳಿಕ ಸ್ಥಳೀಯ ವಾಹನಗಳಿಗೆ ರಿಯಾಯಿತಿ ನೀಡಲು ಹೆದ್ದಾರಿ ಪ್ರಾ ಧಿಕಾರ ಸೂಚನೆ ನೀಡಿಲ್ಲ. ಆದ್ದರಿಂದ ಸ್ಥಳೀಯರು ಶುಲ್ಕ ಕಟ್ಟುವುದು ಅನಿವಾರ್ಯವಾಗಲಿದೆ. ಇದೇ ವೇಳೆ ಸ್ಪೀಡ್ ಬ್ರೇಕರ್, ಬ್ಯಾರಿಕೇಡ್ಗಳ ತೆರವಿಗೆ ಎನ್ಎಚ್ಎಐ ಸೂಚಿಸಿದೆ.