ಸತತ ಮಳೆ: ಮೈದುಂಬಿದ ನೇತ್ರಾವತಿ ನದಿ
Team Udayavani, Jun 29, 2018, 3:00 AM IST
ಉಪ್ಪಿನಂಗಡಿ: ಎಡೆಬಿಡದೆ ಮಳೆ ಸುರಿಯುತ್ತಿರುವ ಕಾರಣ, ದ.ಕ. ಜಿಲ್ಲೆಯ ಜೀವನದಿಗಳಾದ ನೇತ್ರಾವತಿ – ಕುಮಾರಧಾರಾ ನದಿಗಳು ಮೈದುಂಬಿ ಹರಿದಿವೆ. ಬುಧವಾರ ಬೆಳಗ್ಗಿನಿಂದ ಗುರುವಾರ ಬೆಳಗ್ಗಿನ ತನಕ ಉಪ್ಪಿನಂಗಡಿಯಲ್ಲಿ 134.6 ಮೀ.ಮೀ. ಮಳೆ ದಾಖಲಾಗಿದೆ. ಗುರುವಾರ ಪೂರ್ವಾಹ್ನದ ಬಳಿಕ ಮಳೆ ಬಿಡುವು ಪಡೆದುಕೊಂಡಿದೆ. 26.5 ಮೀ. ನೇತ್ರಾವತಿ ನದಿ ನೀರಿನ ಅಪಾಯದ ಮಟ್ಟವಾಗಿದೆ. ಈಗ ನದಿ ಪಾತ್ರ ಅಗಲವಾಗಿದೆ. ಹೀಗಾಗಿ, ಅಪಾಯದ ಮಟ್ಟ ತಲುಪಲು 30 ಮೀ. ನೀರು ಬರಬೇಕು. ಗುರುವಾರ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ 23 ಮೀ. ತಲುಪಿತ್ತು.
ಬುಧವಾರ ಮಧ್ಯಾಹ್ನ 19 ಮೀ. ಇದ್ದ ನೀರಿನ ಮಟ್ಟ ಸಂಜೆಯಾಗುತ್ತಲೇ 18 ಮೀ.ಗೆ ಇಳಿದಿತ್ತು. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ರಾತ್ರಿಯಾಗುತ್ತಲೇ ಉಭಯ ನದಿಗಳಲ್ಲಿ ನೀರಿನ ಹರಿವು ಹೆಚ್ಚತೊಡಗಿದ್ದು, ಮುಂಜಾನೆ 5:45ಕ್ಕೆ 21 ಮೀ. ತಲುಪಿತ್ತು. ಬೆಳಗ್ಗೆ ನದಿ ನೀರಿನ ಮಟ್ಟ 23 ಮೀ.ಗೆ ಏರಿಕೆಯಾಗಿದ್ದು, ನೀರು ಹೆಚ್ಚಳವಾಗುತ್ತ ನೆರೆ ಭೀತಿ ಕಾಣಿಸಿಕೊಂಡಿತ್ತು. ಪೂರ್ವಾಹ್ನ 11 ಗಂಟೆ ಬಳಿಕ ಮಳೆ ಕೊಂಚ ಬಿಡುವು ಪಡೆದುಕೊಂಡಿದ್ದು, ನೀರಿನ ಪ್ರಮಾಣವೂ ಇಳಿದಿದೆ. ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಯಿಂದ ನದಿಗಿಳಿಯಲು ಮಾಡಿದ್ದ 40 ಮೆಟ್ಟಿಲುಗಳಲ್ಲಿ ಬೆಳಗ್ಗೆ 30 ಮುಳುಗಿದ್ದರೆ, ಮಧ್ಯಾಹ್ನದ ಬಳಿಕ 29 ಮೆಟ್ಟಿಲು ಮುಳುಗಿದ್ದವು.
ಗುರುವಾರ ಬೆಳಗ್ಗೆ ಕುಮಾರಧಾರಾ ಹಾಗೂ ನೇತ್ರಾವತಿ ನದಿಗಳ ನೀರ ಹರಿವು ರಭಸದಿಂದ ಕೂಡಿದ್ದು, ಇದರಿಂದ ದೇವಾಲಯದ ಬಳಿಯ ಸಂಗಮ ತಾಣದಲ್ಲಿ ನೇರ ಹಾದಿಯಲ್ಲಿ ಹರಿದು ಬರುವ ನೇತ್ರಾವತಿ ನದಿ ನೀರಿನ ರಭಸದ ಹರಿಯುವಿಕೆಯಿಂದ ಇನ್ನೊಂದು ದಿಕ್ಕಿನಿಂದ ಹರಿದು ಬಂದು ನೇತ್ರಾವತಿಯೊಂದಿಗೆ ಸಂಗಮಗೊಳ್ಳುವ ಕುಮಾರಧಾರ ನೀರಿನ ಹರಿಯುವಿಕೆಗೆ ತಡೆಯಾಗಿತ್ತು. ಆದ್ದರಿಂದ ಕುಮಾರಧಾರ ನದಿಯಲ್ಲಿ ನೀರಿನ ಪ್ರಮಾಣದಲ್ಲಿ ಹೆಚ್ಚಳ ಕಾಣುತ್ತಿತ್ತು. ದೇವಾಲಯದ ಬಳಿ ಗೃಹ ರಕ್ಷಕದಳದ ಘಟಕಾಧಿಕಾರಿ ದಿನೇಶ್ ಅವರ ನೇತೃತ್ವದ ವಿಪತ್ತು ನಿರ್ವಹಣ ಪಡೆಯವರು, ಗ್ರಾಮ ಕರಣಿಕ ಚಂದ್ರ ನಾಯ್ಕ, ಗ್ರಾಮ ಸಹಾಯಕ ಯತೀಶ್, ಉಪ್ಪಿನಂಗಡಿ ಪೊಲೀಸ್ ಠಾಣೆ ಉಪನಿರೀಕ್ಷಕ ನಂದಕುಮಾರ್ ನೇತೃತ್ವದ ಪೊಲೀಸರ ತಂಡ, ದೋಣಿ ಮುನ್ನಡೆಸುವ ಚೆನ್ನಪ್ಪ, ಈಜುಗಾರರಾದ ಮುಹಮ್ಮದ್ ಬಂದಾರು ಹಾಗೂ ಇಸ್ಮಾಯಿಲ್ ಹಾಜಿ ಮತ್ತು ಪೊಲೀಸ್ ಸಿಬಂದಿ ಬೀಡು ಬಿಟ್ಟಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!