“ಕಾರ್ಪೊರೆಟ್ ತೆರಿಗೆ ಕಡಿತದಿಂದ ಆರ್ಥಿಕ ಚೇತರಿಕೆ ಕಷ್ಟ’
Team Udayavani, Sep 24, 2019, 5:15 AM IST
ಮಹಾನಗರ: ಪ್ರಸಕ್ತ ದೇಶದಲ್ಲಿ ಆರ್ಥಿಕ ಹಿಂಜರಿತ ಬಹುಮಟ್ಟದಲ್ಲಿ ಕಾಡುತ್ತಿದ್ದು, ಇದಕ್ಕಾಗಿ ಸರಕಾರ ಕಾರ್ಪೊರೇಟ್ ತೆರಿಗೆ ಕಡಿತ ಮಾರ್ಗ ಅನುಸರಿಸಿದರೂ ಅದು ಚೈತನ್ಯ ನೀಡಲು ಸಾಧ್ಯವಿಲ್ಲ. ಯಾಕೆಂದರೆ ದೇಶದಲ್ಲಿ ಒಟ್ಟು ಬೇಡಿಕೆ ಮಟ್ಟ ಕುಸಿಯುತ್ತಿರುವುದರಿಂದ ಹೊಸ ಹೂಡಿಕೆಗೆ ನಿರಾಸಕ್ತಿ ಬೆಳೆಯುತ್ತಿದೆ ಎಂದು ಮುಂಬಯಿನ ಇಂದಿರಾಗಾಂಧಿ ಇನ್ಸ್ಟಿಟ್ಯೂಟ್ ಆಫ್ ಡೆವೆಲಪ್ಮೆಂಟ್ ರಿಸರ್ಚ್ನ ಪ್ರೊಫೆಸರ್ ಡಾ| ನಾಗರಾಜ್ ರಾಯಪ್ರೋಲು ಅಭಿಪ್ರಾಯಪಟ್ಟರು.
ಸಂತ ಅಲೋಶಿಯಸ್ ಕಾಲೇಜಿನ ಆಶ್ರಯದಲ್ಲಿ ಅರ್ಥಶಾಸ್ತ್ರ ವಿಭಾಗದ ವತಿಯಿಂದ “ಆರ್ಥಿಕ ಹಿಂಜರಿತ’ ಎಂಬ ವಿಚಾರದಲ್ಲಿ ಸೋಮವಾರ ಕಾಲೇಜಿನ ಎಲ್ಸಿಆರ್ಐ ಸಭಾಂಗಣದಲ್ಲಿ ನಡೆದ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯಾವುದೇ ವಸ್ತು ಅಥವ ಖರೀದಿ ಮೇಲೆ ಬೇಡಿಕೆ ಕುಸಿಯುತ್ತಾ ಸಾಗಿದಾಗ ಆರ್ಥಿಕ ವ್ಯತ್ಯಾಸಗಳು ಕಾಣಲು ಶುರುವಾಗುತ್ತದೆ. ಸದ್ಯ ದೇಶದಲ್ಲಿ ಅಂತಹ ಮನೋಭೂಮಿಕೆ ಉಂಟಾಗಿದೆ. ಬೇಡಿಕೆಯೇ ಕುಸಿಯುತ್ತಿದೆ. ಹೀಗಿರುವಾಗ ಕಾರ್ಪೊರೆಟ್ ತೆರಿಗೆಯನ್ನು ಕಡಿತ ಮಾಡಿದರೆ ಆ ಮೂಲಕ ಹೊಸ ಉದ್ಯಮ, ಬಂಡವಾಳ ಹೂಡಿಕೆ ಆಗಲಿದೆ ಎಂಬುದಕ್ಕೆ ಯಾವ ಖಾತ್ರಿ ಇದೆ ಎಂದವರು ಪ್ರಶ್ನಿಸಿದರು.
ಹಲವು ಕಾರಣ
ಜಾಗತಿಕ ಆರ್ಥಿಕ ಪರಿಸ್ಥಿತಿ, ಉದ್ಯಮಿಗಳ ಬ್ಯಾಂಕ್ ಸಾಲ ಬಾಕಿ, ಹೂಡಿಕೆ ಕೊರತೆ, ರಫ್ತು ಕುಸಿತ, ಅಪನಗದೀಕರಣ, ಜಿಎಸ್ಟಿ ಸೇರಿದಂತೆ ಬೇರೆ ಬೇರೆ ಕಾರಣಗಳು ಹಾಗೂ ಪ್ರತ್ಯಕ್ಷ-ಪರೋಕ್ಷ ಆರ್ಥಿಕ ನೀತಿಯಿಂದಾಗಿ ಜಿಡಿಪಿಯಲ್ಲಿ ಭಾರೀ ಕುಸಿತ ಕಾಣುವಂತಾಗಿದೆ ಎಂದರು.
ಕಾಲೇಜಿನ ವಂ| ಡಾ| ಪ್ರವೀಣ್ ಮಾರ್ಟಿಸ್ ಎಸ್.ಜೆ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಡಾ| ನಾರ್ಬರ್ಟ್ ಲೋಬೋ ಸ್ವಾಗತಿಸಿದರು.
ನಿರುದ್ಯೋಗ ಸಮಸ್ಯೆ
ನಿರುದ್ಯೋಗ ಸಮಸ್ಯೆ ದೇಶದಲ್ಲಿ ಬಹುವಾಗಿ ಕಾಡುತ್ತಿದೆ. ಗ್ರಾಮಾಂತರ ಭಾಗದಲ್ಲಿ 2011-12ರಲ್ಲಿ ನಿರುದ್ಯೋಗ ಪ್ರಮಾಣದ ಸೂಚ್ಯಂಕ 1.7 ಇದ್ದರೆ ಈಗ ಅದು 5.7ರ ಗಡಿ ತಲುಪಿದೆ. ನಗರ ಭಾಗದಲ್ಲಿ 3ರಷ್ಟಿದ್ದ ಈ ಪ್ರಮಾಣ ಈಗ 6.9ಕ್ಕೆ ತಲುಪಿದೆ. 15 ವಯಸ್ಸಿಗಿಂತ 29ರ ಹರೆಯದಲ್ಲಿ ಕೆಲಸ ಮಾಡುತ್ತಿರುವ ಪ್ರಮಾಣ 2004ರಲ್ಲಿ ಶೇ.56ರಷ್ಟಿದ್ದರೆ, 2017ರಲ್ಲಿ ಅದು ಶೇ.38ಕ್ಕೆ ಕುಸಿದಿದೆ. 30 ವರ್ಷ ಮೇಲ್ಪಟ್ಟವರು ಹಿಂದೆ ಶೇ.68 ಇದ್ದರೆ ಈಗ ಶೇ.56ಕ್ಕೆ ಕುಸಿತ ಕಂಡಿದೆ ಎಂದು ನಾಗರಾಜ್ ರಾಯಪ್ರೋಲು ಹೇಳಿದರು.