ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ: ರೋಕ್ ಡಿ’ಸೋಜಾ
Team Udayavani, Jun 7, 2019, 6:00 AM IST
ಮಹಾನಗರ: ಪಣಂಬೂರಿನ ಕೆಐಒಸಿಎಲ್ ಸಂಸ್ಥೆಯಲ್ಲಿ ವಿಶ್ವಪರಿಸರ ದಿನವನ್ನು ಸಂಸ್ಥೆಯ ಬ್ಲಾಸ್ಟ್ ಫರ್ನೆಸ್ ಯು ನಿಟ್ ಆವರಣದಲ್ಲಿ ಆಚರಿಸಲಾಯಿತು.
ಸಂಸ್ಥೆಯ ಸಂಪನ್ಮೂಲ ಕೇಂದ್ರ (ತರಬೇತಿ ಕೇಂದ್ರ )ದಲ್ಲಿ ಯೋಜನ ವಿಭಾಗ ಆಯೋಜಿಸಿದ್ದ ಸಭಾ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ| ಸ್ಮಿತಾ ಹೆಗ್ಡೆ ಅವರು “ಕುದುರೆಮುಖ ಪರಿಸರದಲ್ಲಿ ಬೆಳೆಯುವ ಝರಿ ಗಿಡಗಳಿಂದ ಪ್ರಾಣಿಗಳು ಹಾಗೂ ಪರಿಸರದ ಮೇಲಾಗುವ ಪರಿಣಾಮ’ಗಳ ಬಗ್ಗೆ ಉಪನ್ಯಾಸ ನೀಡಿದರು.
ಕೆಐಒಸಿಎಲ್ ಸಂಸ್ಥೆ ಮಂಗಳೂರು ಶಾಖೆಯ ಜನರಲ್ ಮ್ಯಾನೇಜರ್ ರೋಕ್ ಡಿ’ಸೋಜಾ ಮಾತನಾಡಿ, ಮುಂದಿನ ಪೀಳಿಗೆ ಪರಿಸರವನ್ನು ರಕ್ಷಿಸುವುದು ಜವಾಬ್ದಾರಿಯುತರಾದ ಪ್ರಜೆಗಳ ಕರ್ತವ್ಯ. ಹವಾಮಾನ ಕಲುಷಿತವಾಗುವುದರಿಂದ ಪ್ರತೀ ವರ್ಷ ಮರಣಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚು ಗಿಡಗಳನ್ನು ಬೆಳೆಸುವುದರ ಮೂಲಕ ನಾವು ಪರಿಸರವನ್ನು ಕಾಪಾಡಬೇಕು ಎಂದರು.
ಜನರಲ್ ಮ್ಯಾನೇಜರ್ (ಪ್ರೊಡಕ್ಷನ್) ದೇವಾನಂದ ಪೈ, ಜನರಲ್ ಮ್ಯಾನೇಜರ್ (ಎಲೆಕ್ಟ್ರಿಕಲ್ ಆ್ಯಂಡ್ ಮೆಕ್ಯಾನಿಕಲ್) ಎ.ವಿ. ಶ್ರೀನಿವಾಸ ಭಟ್, ಜಾಯಿಂಟ್ ಜನರಲ್ ಮ್ಯಾನೇಜರ್ ಅರುಣ್ ಭಟ್ ಉಪಸ್ಥಿತರಿದ್ದರು. ಅಧಿಕಾರಿಗಳು, ಕಾರ್ಮಿಕರು ಪಾಲ್ಗೊಂಡಿದ್ದರು.
ಕಿರುಚಿತ್ರ ಪ್ರದರ್ಶನ
ಕಾರ್ಯಕ್ರಮವನ್ನು ಜಾಯಿಂಟ್ ಜನರಲ್ ಮ್ಯಾನೇಜರ್ ಟಿ.ಗಜಾನನ ಪೈ ಆಯೋಜಿಸಿದ್ದರು. ಪರಿಸರ ಸಂರಕ್ಷಣೆಯ ಪ್ರಾಮುಖ್ಯ, ಸಂರಕ್ಷಣೆಯ ಆವಶ್ಯಕ ಬಗ್ಗೆ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಅರುಣ್ ಭಟ್ ಸ್ವಾಗತಿಸಿದರು. ಮಾಧುರಿ ನಿರೂಪಿಸಿ, ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಪ್ಪ ವಂದಿಸಿದರು.