ಖಾತೆ ಸರಿಪಡಿಸಿದರೂ ಮನ್ನಾ ಹಣ ಜಮೆ ಆಗಿಲ್ಲ
26,574 ಫಲಾನುಭವಿಗಳ 196.34 ಕೋ.ರೂ. ಹಣ
Team Udayavani, Dec 8, 2019, 4:33 AM IST
ಸುಳ್ಯ: ಉಭಯ ಜಿಲ್ಲೆಗಳಲ್ಲಿ ಸಾಲಮನ್ನಾ ಹಣ ಬಿಡುಗಡೆಗೊಂಡು ಕಿಸಾನ್ ಕ್ರೆಡಿಟ್ ಕಾರ್ಡ್ ಉಳಿತಾಯ ಖಾತೆ ಸಂಖ್ಯೆ ಸಮರ್ಪಕವಾಗಿಲ್ಲದೆ ಹಣ ವಾಪಸಾಗಿದ್ದ ಫಲಾನು ಭವಿಗಳ ಖಾತೆ ಸರಿಪಡಿಸಿ ತಿಂಗಳು ಕಳೆದರೂ ಹಣ ಇನ್ನೂ ಜಮೆ ಆಗಿಲ್ಲ.
ದ.ಕ., ಉಡುಪಿಯಲ್ಲಿ 25 ಸಾವಿರಕ್ಕೂ ಅಧಿಕ ಮಂದಿಯ ಖಾತೆ ಸಮರ್ಪಕವಾಗಿಲ್ಲದೆ ಸಾಲಮನ್ನಾ ಹಣ ಡಿಸಿಸಿ ಬ್ಯಾಂಕ್ನಿಂದ ಅಪೆಕ್ಸ್ ಬ್ಯಾಂಕ್ಗೆ ವಾಪಸಾಗಿತ್ತು. ಎರಡು ಬಾರಿ ಅಪ್ಡೇಟ್ ಉಳಿತಾಯ ಖಾತೆಗೆ ಅಗತ್ಯ ಮಾಹಿತಿ ತುಂಬುವ ಸಲುವಾಗಿ ಆಯಾ ಸಹಕಾರ ಬ್ಯಾಂಕ್ ವ್ಯಾಪ್ತಿಯ ಡಿಸಿಸಿ ಬ್ಯಾಂಕ್ ಶಾಖೆಗಳಲ್ಲಿ ಮೊದಲ ಹಂತದಲ್ಲಿ ಅ. 23ರಿಂದ ಅ. 25ರ ತನಕ ಅಪ್ಡೇಟ್ಗೆ ಅವಕಾಶ ನೀಡಲಾಯಿತು. ನಿಗದಿತ 3 ದಿನಗಳಲ್ಲಿ ಅದು ಸಾಧ್ಯವಾಗದೆ ಮತ್ತೂಮ್ಮೆ ಅವಕಾಶ ನೀಡಲಾಗಿತ್ತು.
196.34 ಕೋ.ರೂ ಜಮೆಗೆ ಬಾಕಿ
ಸಾಫ್ಟ್ವೇರ್ನಲ್ಲಿ ಉಳಿತಾಯ ಖಾತೆ ಸರಿಪಡಿಸುವಿಕೆ ನಡೆದಿರುವ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆ ಗಳಲ್ಲಿ 26,574 ಫಲಾನುಭವಿ ಗಳ 196.34 ಕೋ.ರೂ. ಹಣ ಇನ್ನೂ ಬಿಡುಗಡೆ ಆಗಿಲ್ಲ. ಈ ಹಿಂದೆ ಈ ಎಲ್ಲರ ಉಳಿತಾಯ ಖಾತೆ ಸರಿಯಿಲ್ಲದೆ ಹಣ ವಾಪಸಾಗಿತ್ತು. ಹೀಗೆ ಹಿಂದೆ ಹೋದುದು ದಕ್ಷಿಣ ಕನ್ನಡದಲ್ಲಿ 21,659 ಮಂದಿಯ 163 ಕೋ.ರೂ., ಉಡುಪಿಯಲ್ಲಿ 4,915 ಮಂದಿಯ 33.44 ಕೋ.ರೂ. ಇದರಲ್ಲಿ ಶೇ.90 ಫಲಾನುಭವಿಗಳ ಖಾತೆ ಅಪ್ಡೇಟ್ ಆಗಿದೆ ಅನ್ನುತ್ತಿದೆ ಇಲಾಖೆ ಅಂಕಿ ಅಂಶ.
ಉಳಿತಾಯ ಖಾತೆ ಸರಿಯಿಲ್ಲದೆ ಹಣ ವಾಪಸಾಗಿರುವ ಫಲಾನುಭವಿಗಳ ಖಾತೆ ಸರಿಪಡಿಸುವಿಕೆ ಬಹುತೇಕ ಪೂರ್ಣಗೊಂಡಿದೆ. ಎರಡು ಬಾರಿ ಸಾಫ್ಟ್ವೇರ್ ಮೂಲಕ ಅವಕಾಶ ನೀಡಲಾಗಿತ್ತು. ಸರಿಯಾಗಿರುವ ಖಾತೆಗೆ ಮನ್ನಾ ಹಣ ಜಮೆ ಆಗಲಿದೆ.
– ಮಂಜುನಾಥ, ಉಪ ನಿಬಂಧನಾಧಿಕಾರಿ, ಮಂಗಳೂರು
ಎರಡು ಬಾರಿ ಅಪ್ಡೇಟ್ ಮಾಡಲಾಗಿದ್ದರೂ ಸಾಲ ಮನ್ನಾ ಹಣ ಬಂದಿಲ್ಲ. ಅಧಿಕಾರಿಗಳನ್ನು ಕೇಳಿದರೆ ಜಮೆ ಮಾಡುತ್ತೇವೆ ಎಂಬ ಉತ್ತರವಷ್ಟೇ ಸಿಗುತ್ತದೆ. ನಮಗೆ ದೊರೆತ ಮಾಹಿತಿ ಪ್ರಕಾರ ಶೇ. 40ರಷ್ಟು ಅಪ್ಡೇಟ್ ಇನ್ನೂ ಬಾಕಿ ಇದೆ. ಉಳಿದವುಗಳಿಗೆ ಹಣ ಪಾವತಿ ಏಕೆ ಮಾಡುತ್ತಿಲ್ಲ ಅನ್ನುವುದೇ ನಮ್ಮ ಪ್ರಶ್ನೆ.
– ತೀರ್ಥರಾಮ ಗೌಡ ನೆಡ್ಚಿಲು, ಪ್ರ. ಕಾರ್ಯದರ್ಶಿ, ರೈತ ಸಂಘ, ಸುಳ್ಯ