‘ಶಾಂತಿಯುತ ಜಿಲ್ಲೆ ನಮ್ಮ ಜವಾಬ್ದಾರಿ’
Team Udayavani, Sep 17, 2018, 11:58 AM IST
ವಿಟ್ಲ : ಭಾರತೀಯ ಸಂಸ್ಕೃತಿಯಲ್ಲಿ ನಾವೆಲ್ಲರೂ ಬೆಳೆದು ಬಂದಿದ್ದೇವೆ. ಪ್ರೀತಿ, ವಿಶ್ವಾಸದಿಂದ ನಾವು ಇಲ್ಲಿ ಬಾಳಿ ಬದುಕಬೇಕಾಗಿದೆ. ದ.ಕ. ಜಿಲ್ಲೆಯನ್ನು ಶಾಂತಿಯುತವಾಗಿ ಮುನ್ನಡೆಸುವುದಕ್ಕಾಗಿ ನಮಗೆ ಮತದಾರರು ಅವಕಾಶ ನೀಡಿದ್ದಾರೆ. ನಮಗೆ ಜವಾಬ್ದಾರಿಯಿದೆ. ಶಾಂತಿಗಾಗಿ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶಾಂತಿಯುತ ಜಿಲ್ಲೆಯು ಅಭಿವೃದ್ಧಿ ಕಾರ್ಯಗಳಿಗೆ ತಾನಾಗಿಯೇ ತೆರೆದು ಕೊಳ್ಳುತ್ತದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ರವಿವಾರ ವಿಟ್ಲ ಶೋಕಮಾತಾ ದೇವಾಲಯದಲ್ಲಿ ಪಾಲಕರ ಹಬ್ಬದ ಸಂಭ್ರಮದಂದು ಪಾಲನ ಸಮಿತಿ ಮತ್ತು ಕೆಥೋಲಿಕ್ ಸಭಾ ವಿಟ್ಲದ ಆಶ್ರಯದಲ್ಲಿ ನಡೆದ ಅಭಿನಂದನ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು. ಸಮ್ಮಾನ ಸ್ವೀಕರಿಸಿದ ಪುತ್ತೂರು ಶಾಸಕ ಸಂಜೀವ ಮಂಠಂದೂರು ಮಾತನಾಡಿ, ಮಾನವೀಯತೆ, ಮೌಲ್ಯಗಳನ್ನು ಉಳಿಸಿಕೊಳ್ಳಬೇಕಾಗಿದೆ. ಜಾತಿ-ಮತ ಬಿಟ್ಟು ದೇಶದ ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಗುರುಗಳ ಮಾರ್ಗದರ್ಶನ ಇದ್ದಾಗ ಆದರ್ಶ ಸಮಾಜ ನಿರ್ಮಾಣ ಸಾಧ್ಯ ಎಂದರು.
ವಿಟ್ಲ ಶೋಕಮಾತಾ ದೇವಾಲಯದ ಧರ್ಮಗುರು ವಂ| ಎರಿಕ್ ಕ್ರಾಸ್ತ ಅಧ್ಯಕ್ಷತೆ ವಹಿಸಿದ್ದರು. ಮೊಗರ್ನಾಡು ವಲಯ ಪ್ರ. ಧರ್ಮಗುರು ಡಾ| ಮಾರ್ಕ್ ಕ್ಯಾಸ್ತಲಿನೊ, ವಿಟ್ಲ ಶೋಕಮಾತಾ ದೇವಾಲಯದ ಸ. ಧರ್ಮಗುರು ಮೆಲ್ವಿನ್ ಡಿ’ಸೋಜಾ, ವಿಟ್ಲ ಪ.ಪಂ. ಅಧ್ಯಕ್ಷ ಅರುಣ ಎಂ. ವಿಟ್ಲ, ವಿಟ್ಲ ಕೆಥೋಲಿಕ್ ಸಭಾ ಕಾರ್ಯದರ್ಶಿ ಲೀಡಿಯಾ ಸಿಕ್ವೇರ ಮತ್ತಿತರರಿದ್ದರು.
ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ಲೂವಿಸ್ ಮಸ್ಕರೇನ್ಹಸ್ ಸ್ವಾಗತಿಸಿ, ವಿನ್ಸೆಂಟ್ ಪಾವ್ಲ್ ಸೊಸೈಟಿ ಅಧ್ಯಕ್ಷೆ ಜುಲಿಯಾನಾ ಮೇರಿ ಲೋಬೋ, ಚರ್ಚ್ ಪಾಲನ ಸಮಿತಿ ಕಾರ್ಯದರ್ಶಿ ಬಿ.ವಿ. ಮಾಡ್ತಾ ಸಮ್ಮಾನಿತರನ್ನು ಪರಿಚಯಿಸಿದರು. ಸಭಾ ಅಧ್ಯಕ್ಷ ಡೆನಿಸ್ ಡಿ’ಸೋಜಾ ವಂದಿಸಿದರು. ಜೇಸನ್ ಪಿಂಟೊ ನಿರೂಪಿಸಿದರು.