ಬಡ ವಿದ್ಯಾರ್ಥಿ ವೈದ್ಯಕೀಯ ಸೀಟಿಗೆ ಮುಖ್ಯಮಂತ್ರಿ ಕಚೇರಿಯಿಂದ ಸ್ಪಂದನೆ
Team Udayavani, Oct 24, 2018, 12:45 PM IST
ಮಂಜನಾಡಿ: ಬಡತನದ ನಡುವೆಯೂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿ, ನೀಟ್ ಪರೀಕ್ಷೆ ಬರೆದು ಅರ್ಹತೆ ಹೊಂದಿದರೂ ಯಾವುದೇ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ದೊರಕದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆದುದ್ದು, ಈಗ ಸೀಟು ದೊರಕುವ ಭರವಸೆ ಸಿಕ್ಕಿದೆ.
ಮಂಜನಾಡಿ ಗ್ರಾಮದ ಕಲ್ಕಟ್ಟ ನಿವಾಸಿ ಸಾಧುಕುಂಞಿ ಎಂಬವರ ಪುತ್ರ ಅಬ್ದುಲ್ ನಾಸಿರ್ ಎಂಬವರ ಕೈಗೆ ಪತ್ರ ಸೇರಿದೆ. ಕಲ್ಕಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ, ಹೈಸ್ಕೂಲ್ ಶಿಕ್ಷಣ ಪೂರೈಸಿದ ಅಬ್ದುಲ್ ನಾಸಿರ್ ಕಲಿಕೆಯಲ್ಲಿ ಮುಂದಿದ್ದರು. ಎಸೆಸೆಲ್ಸಿ ಪರೀಕ್ಷೆಯಲ್ಲೂ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಇವರು ವೈದ್ಯನಾಗುವ ಕನಸು ಹೊಂದಿದ್ದರು.
ಮುಖ್ಯಮಂತ್ರಿಗಳಿಗೆ ಪತ್ರ
ಸಾಧುಕುಂಞಿ ದಂಪತಿಗೆ ಇರುವ ಏಳು ಮಕ್ಕಳಲ್ಲಿ ನಾಸಿರ್ ಕಿರಿಯ ಮಗ. ಮನೆಯಲ್ಲಿ ಹೆಚ್ಚಿನ ಶಿಕ್ಷಣ ಹೊಂದಿದವರು ಯಾರೂ ಇಲ್ಲ. ನಾಸೀರ್ ಓರ್ವನೇ ಹೆಚ್ಚಿನ ಶಿಕ್ಷಣ ಪಡೆಯುತ್ತಿದ್ದವರು. ತಂದೆಯ ಕ್ಯಾಂಟೀನ್ ವ್ಯಾಪಾರ ಹಾಗೂ ನಾಸೀರ್ ಸಹೋದರರು ಕೆಲಸ ನಿರ್ವಹಣೆಯಿಂದ ಕುಟುಂಬದ ನಿರ್ವಹಣೆಯಾಗುತ್ತಿದ್ದರೂ, ವೈದ್ಯಕೀಯ ಸೀಟಿಗೆ ಹಣ ಹೊಂದಿಸುವಷ್ಟು ಶಕ್ತರಲ್ಲ.
ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಪಿಯು ಕಾಲೇಜಿನಲ್ಲಿ 2017 ರಲ್ಲಿ ದ್ವಿತೀಯ ಪಿಯುಸಿ ಪೂರೈಸಿದ ಅಬ್ದುಲ್ ನಾಸೀರ್, ವೈದ್ಯಕೀಯ ಶಿಕ್ಷಣವನ್ನೇ ಪಡೆಯಬೇಕು ಅನ್ನುವ ಉದ್ದೇಶದಿಂದ 2018ರ ಮೇ 6ರಂದು ನೀಟ್ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದುಕೊಂಡಿದ್ದಾರೆ. ಆದರೆ ವೈದ್ಯಕೀಯ ಸೀಟಿಗಾಗಿ ಕಾದು ಕುಳಿತರೂ ಯಾವುದೇ ಕಾಲೇಜಿನಲ್ಲಿ ಸೀಟು ದೊರೆಯಲಿಲ್ಲ. ಇದರಿಂದ ನೊಂದ ವಿದ್ಯಾರ್ಥಿ ಅಬ್ದುಲ್ ನಾಸೀರ್ ರಾಜ್ಯದ ಮುಖ್ಯಮಂತ್ರಿ ಗಳಿಗೆ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿ ಪತ್ರ ರವಾನಿಸಿದ್ದರು. ವಾರದೊಳಗೆ ಸ್ಪಂದನೆ ಅ.12 ರಂದು ಬರೆದಿರುವ ಪತ್ರಕ್ಕೆ ಬೆಂಗಳೂರು, ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಸಚಿವಾಲಯದಿಂದ ಅ.17 ರಂದು ಸ್ಪಂದನೆಯ ಪತ್ರ ವಿದ್ಯಾರ್ಥಿ ಕೈ ಸೇರಿದೆ. ವೈದ್ಯಕೀಯ ಸೀಟಿನ ಮನವಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರಕಾರದ ಪ್ರಧಾನ ಕಾರ್ಯದರ್ಶಿ, ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಬೆಂಗಳೂರು ಇವರಿಗೆ ಪತ್ರದ ಮೂಲಕ ಸೂಚಿಸಲಾಗಿದೆ.
ಪ್ರವೇಶದ ಭರವಸೆ ವೈದ್ಯನಾಗಬೇಕೆಂಬ ಮಹದಾಸೆ ಇತ್ತು. ಅದಕ್ಕಾಗಿ ಪಿಯುಸಿ ಮುಗಿಸಿ ಒಂದು ವರ್ಷ ಕಾದು ನೀಟ್ ಪರೀಕ್ಷೆ ಬರೆದಿದ್ದು, ಕೌನ್ಸಿಲಿಂಗೂ ತೆರಳಿದ್ದೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಸೀಟು ಒದಗಿಸುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದೇನೆ. ಸ್ಪಂದನೆಯೂ ಸಿಕ್ಕಿದೆ. ಪ್ರವೇಶ ಸಿಗಬಹುದೆಂಬ ಭರವಸೆ ಇದೆ.
– ಅಬ್ದುಲ್ ನಾಸೀರ್,
ವೈದ್ಯಕೀಯ ಸೀಟಿಗೆ ಪತ್ರ ಬರೆದವರು