ಎಸ್ಡಿಎಂ ಶಿಕ್ಷಣ ಸಂಸ್ಥೆಗಳಿಂದ ಗಾಂಧಿ ಜಯಂತಿ
Team Udayavani, Oct 3, 2018, 11:41 AM IST
ಬೆಳ್ತಂಗಡಿ: ಉಜಿರೆ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ವತಿಯಿಂದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸಹಿತ ಸುಮಾರು 10 ಸಾವಿರ ಮಂದಿಯ ಪಾಲ್ಗೊಳ್ಳುವಿಕೆಯಲ್ಲಿ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನವನ್ನು ಮಂಗಳವಾರ ಉಜಿರೆಯ ಡಿ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಆಚರಿಸಲಾಯಿತು.
ಎಸ್ಡಿಎಂ ಶಿಕ್ಷಣ ಸಂಸ್ಥೆಯು ಗಾಂಧಿ 150ನೇ ಜನ್ಮವರ್ಷವನ್ನು ಇಡೀ ವರ್ಷದ ಕಾರ್ಯಕ್ರಮವಾಗಿ ಆಚರಿ ಸಲಿದ್ದು, ಸಂಸ್ಥೆಯ ಅಧ್ಯಕ್ಷ, . ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿ ಗಳಿಗೆ ಸಂದೇಶ ನೀಡಿದರು. ಆರಂಭದಲ್ಲಿ ಉಜಿರೆ ಪರಿಸರದ ಎಸ್ಡಿಎಂ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿಗಳು, ಪ್ರಾಧ್ಯಾಕರು, ಸಿಬಂದಿ ಜಾಥಾ ಮೂಲಕ ಆಗಮಿಸಿ, ಕ್ರೀಡಾಂಗಣದಲ್ಲಿ ಸೇರಿದರು.
‘ಸ್ವಸ್ಥ ಮನಸ್ಸು, ಸ್ವತ್ಛ ಪರಿಸರ, ಗಾಂಧಿ ಮಾರ್ಗ’ ಎಂಬ ಧ್ಯೇಯವಾಕ್ಯದಲ್ಲಿ ಈ ಕಾರ್ಯಕ್ರಮ ವರ್ಷಪೂರ್ತಿ ನಡೆಯಲಿದ್ದು, ಫಲಕವನ್ನು ಹೇಮಾವತಿ ಹೆಗ್ಗಡೆ ಬಿಡುಗಡೆಗೊಳಿಸಿದರು. ಜತೆಗೆ ಎಸ್ ಡಿಎಂ ಪತ್ರಿಕೋದ್ಯಮ ವಿಭಾಗದ ವತಿಯಿಂದ ನಿರ್ಮಾಣ ಮಾಡಲಾದ ಬಾಪು-ಸತ್ಯಾನ್ವೇಷಣೆ ವೆಬ್ ಸರಣಿಯ ಪ್ರೊಮೊವನ್ನು ಡಿ. ಹರ್ಷೇನ್ದ್ರ ಕುಮಾರ್ ಅನಾವರಣಗೊಳಿಸಿದರು. ವಿದ್ಯಾರ್ಥಿಗಳು ಜಾಥಾದ ಸಂದರ್ಭ ಗಾಂಧೀಜಿಯವರ ವಿಚಾರಧಾರೆಗಳ ಸಂದೇಶಗಳನ್ನು ಪ್ರದರ್ಶಿಸಿದರು.
ಗಾಂಧಿ ಕಾರು ಆಕರ್ಷಣೆ
ಗಾಂಧೀಜಿಯವರು ಕರ್ನಾಟಕ ಹಾಗೂ ತಮಿಳುನಾಡು ಪ್ರವಾಸದ ಸಂದರ್ಭದಲ್ಲಿ ಉಪಯೋಗಿಸಿದ್ದ ಸ್ಟುಡಿಬೇಕರ್ ಪ್ರಸಿಡೆಂಟ್ ಕಾರನ್ನು ಕ್ರೀಡಾಂಗಣದಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಈ ಕಾರನ್ನು ವೀಕ್ಷಿಸಿದ ವಿದ್ಯಾರ್ಥಿಗಳು-ಪ್ರಾಧ್ಯಾಪಕರು ಅದರ ಬಳಿ ನಿಂತು ಫೋಟೋ ತೆಗೆಸಿಕೊಂಡರು.