ಸ್ವಚ್ಛತೆಯಿಂದ ಉತ್ತಮ ಆರೋಗ್ಯ: ಅನುಸೂಯ
Team Udayavani, Aug 3, 2017, 8:10 AM IST
ಸುಳ್ಯ: ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರಿಂದ ಉತ್ತಮ ಆರೋಗ್ಯ ದೊರೆಯಲು ಸಾಧ್ಯ ಎಂದು ಪೆರುವಾಜೆ ಗ್ರಾ.ಪಂ. ಅಧ್ಯಕ್ಷೆ ಅನಸೂಯಾ ಹೇಳಿದರು.
ಡಾ. ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಸ್ವಚ್ಛ ಕ್ಯಾಂಪಸ್ ಅಭಿಯಾನ ಮತ್ತು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ನಮಗೆ ಕಾಳಜಿ ಇರಬೇಕು. ವಿದ್ಯಾರ್ಥಿ ಜೀವನದಲ್ಲಿ ಅಂತಹ ಮನೋಭಾವನೆ ಮೂಡಿದಾಗ ಸ್ವಚ್ಛ ಊರು, ಗ್ರಾಮದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಸ್ವಸ್ಥ ಆರೋಗ್ಯದಿಂದ ಸಮಾಜ
ಮುಖ್ಯ ಅತಿಥಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಾಸುದೇವ ಪೆರುವಾಜೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತದ ಪರಿಕಲ್ಪನೆಯ ಆಶಯ ಹೊಂದಿದ್ದಾರೆ. ಇದು ಗುರಿ ಮುಟ್ಟಲು ವಿದ್ಯಾರ್ಥಿ ಸಮುದಾಯದ ಪಾಲ್ಗೊಳ್ಳುವಿಕೆ ಮಹತ್ತರವಾದುದು ಎಂದರು.
ಸ್ವಸ್ಥ ಆರೋಗ್ಯ, ವಾತಾವರಣ, ಸಮಾ ಜದ ನಿರ್ಮಾಣದ ದಿಶೆಯಲ್ಲಿ ಸ್ವಚ್ಛತೆ ಬಹುಮುಖ್ಯವಾಗಿದ್ದು, ಅದರೊಂದಿಗೆ ಜಲಸಂರಕ್ಷಣೆಯ ಕಾರ್ಯವೂ ಆಗಬೇಕು ಎಂದು ಅವರು ಅಭಿಪ್ರಾಯಿಸಿದರು.
ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಮಾತನಾಡಿ, ಪ್ರಕೃತಿಗೆ ವಿರುದ್ಧವಾಗಿ ಪ್ರತಿಕ್ರಿಯಿಸಿದಾಗ, ಅದು ಮನುಷ್ಯನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಪರಿಸರವನ್ನು ಹಾಳಗೆಡಹದೆ, ಶುಚಿತ್ವದಿಂದ ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಆಂತರಿಕ ಸ್ವಚ್ಛತೆ, ಬಾಹ್ಯ ಸ್ವಚ್ಛತೆ
ಪ್ಲಾಸ್ಟಿಕ್, ತ್ಯಾಜ್ಯದಿಂದ ಪರಿಸರದಲ್ಲಿ ಅನೇಕ ರೋಗಗಳು ಸೃಷ್ಟಿಯಾಗುತ್ತಿವೆ. ಹಾಗಾಗಿ ಆಂತರಿಕ ಸ್ವಚ್ಛತೆ ಎಷ್ಟು ಮುಖ್ಯವೋ, ಬಾಹ್ಯ ಸ್ವಚ್ಛತೆಯು ಅಷ್ಟೆ ಮುಖ್ಯ. ಈ ಬಗ್ಗೆ ಪ್ರತಿಯೊಬ್ಬರು ಅರಿವು ಹೊಂದಿರಬೇಕು ಎಂದು ಅವರು ಹೇಳಿದರು.
ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕಾಂತಮಂಗಲ ಮಾತನಾಡಿ, ಕಸ, ತ್ಯಾಜ್ಯ ಕಂಡಾಗ ಅದನ್ನು ತೆರವುಗೊಳಿಸುವುದು ಅಧಿಕಾರಿಗಳ, ಜನಪ್ರತಿನಿಧಿಗಳ ಕೆಲಸ ಎಂದು ಭಾವಿಸಬಾರದು. ಬದಲಿಗೆ ನಮ್ಮ ಜವಾಬ್ದಾರಿಯು ಹೌದು. ಪ್ರತಿಯೊಬ್ಬರೂ ಸ್ವಚ್ಛತೆ ನಮ್ಮ ಕರ್ತವ್ಯ ಎಂದು ಪರಿಭಾವಿಸಬೇಕು ಎಂದು ಅವರು ಹೇಳಿದರು.ಸಮಾಜಕಾರ್ಯ ವಿಭಾಗ ಇಂತಹ ಪರಿಸರ ಸಂರಕ್ಷಣೆಯ ಕೆಲಸ ಜತೆಗೆ ಬಡವರಿಗೆ ಸರಕಾರದಿಂದ ದೊರೆಯುವ ಸೌಲಭ್ಯವನ್ನು ದೊರಕಿಸುವ ಕೊಡುವ ನಿಟ್ಟಿನಲ್ಲಿ ಕೈ ಜೋಡಿಸಬೇಕು ಎಂದರು.ಈ ಸಂದರ್ಭದಲ್ಲಿ ಪ್ರತಿ ತರಗತಿಗೆ, ಕ್ಯಾಂಟಿನ್ಗೆ ಡಸ್ಟ್ ಬಿನ್ ಅನ್ನು ಕೊಡುಗೆಯಾಗಿ ನೀಡಲಾಯಿತು.
ಉಪನ್ಯಾಸಕ ಈಶ್ವರ್ ಉಪಸ್ಥಿತರಿದ್ದರು. ಸಮಾಜಕಾರ್ಯ ಸಂಘದ ಅಧ್ಯಕ್ಷ ಅನಿಲ್ ಸ್ವಾಗತಿಸಿ, ಜತೆ ಕಾರ್ಯದರ್ಶಿ ಆಶಾ ವಂದಿಸಿದರು. ಸುಶ್ಮಿತಾ ಅವರು ಕಾರ್ಯಕ್ರಮ ನಿರೂಪಿಸಿದರು.