ಮುಂದಿನ ಚುನಾವಣೆಯಲ್ಲಿ ಸಮ್ಮಿಶ್ರ ಸರಕಾರ ಸಾಧ್ಯತೆ: ದೇವೇಗೌಡ
Team Udayavani, Feb 13, 2022, 6:52 AM IST
ಮಂಗಳೂರು: ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಕೆಲವರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಅಥವಾ ಬಿಜೆಪಿಗೆ ಅತೀ ಹೆಚ್ಚು ಸ್ಥಾನಗಳು ಬಂದು ಸ್ವಷ್ಪ ಬಹುಮತ ಬರದಿದ್ದರೆ ನೀವು ಯಾರ ಜತೆ ಹೋಗುತ್ತೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾವು ಜಾತ್ಯತೀತ ತತ್ತÌದಲ್ಲಿ ನಂಬಿಕೆಯಿರಿಸಿಕೊಂಡು ಬಂದವರು. ರಾಷ್ಟ್ರ ಮಟ್ಟದಲ್ಲೂ ಜಾತ್ಯತೀತ ಪಕ್ಷಗಳ ಜತೆ ಸೇರಿ ಆಡಳಿತ ನಡೆಸಿದ್ದೇವೆ ಎಂದು ದೇವೇಗೌಡ ಅವರು ತಿಳಿಸಿದರು.
“ಇಂದಿನ ಪರಿಸ್ಥಿತಿಯಲ್ಲಿ ಪ್ರಾದೇಶಿಕ ಪಕ್ಷಗಳನ್ನು ಬಿಟ್ಟು ದೇಶ ಆಳುವುದು ಕಷ್ಟ. ಇದು ನನ್ನ ಅನುಭವದ ಮಾತು. ಈ ನಡುವೆ ಪ್ರಾದೇಶಿಕ ಪಕ್ಷಗಳ ನಡುವೆಯೂ ಒಗ್ಗಟ್ಟಿಲ್ಲ. ನಾನು ನಮ್ಮ ರಾಜ್ಯದಲ್ಲೇ ದೇಶದ ವಿವಿಧ ಪ್ರಾದೇಶಿಕ ಪಕ್ಷಗಳ ನಾಯಕರನ್ನು ಆಹ್ವಾನಿಸಿ, ಒಂದೇ ವೇದಿಕೆಗೆ ತಂದು
ಈ ಬಗ್ಗೆ ಎರಡು ಬಾರಿ ಪ್ರಯತ್ನಗಳನ್ನು ನಡೆಸಿದೆ ಎಂದ ಅವರು, ಪಂಚರಾಜ್ಯಗಳ ಚುನಾವಣೆ ಗೆಲ್ಲಲು ನರೇಂದ್ರ ಮೋದಿ ಅವರು ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಅವರಿಗೂ ಪರಿಸ್ಥಿತಿ ಪೂರಕವಾಗಿಲ್ಲ. ಕಾಂಗ್ರೆಸ್ ಕೂಡ ಶಕ್ತಿಗುಂದಿದೆ. ಅದುದರಿಂದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊಸ ರಾಜಕೀಯ ಬೆಳವಣಿಗೆಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ ಎಂದರು.
ಮುಂದಿನ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಚಾಮುಂಡೇಶ್ವರಿ, ಕೋಲಾರ, ಬಾದಾಮಿಯಿಂದ ಸ್ಪರ್ಧಿಸುತ್ತಾರೆ ಎನ್ನುವ ಹೇಳಿಕೆಗಳು ಬರುತ್ತಿವೆ. ಕುಮಾರಸ್ವಾಮಿ ಜೆಡಿಎಸ್ನ ಟಾಪ್ ಲೀಡರ್. ಮುಂದಿನ ವಿಧಾನಸಭಾ ಚುನಾವಣೆಗೆ ರಾಜ್ಯದ ಯಾವ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಬಹುದು. ಆದರೆ ರಾಮನಗರ ಜಿಲ್ಲೆ ಬಿಟ್ಟು ಎಲ್ಲೂ ಹೋಗುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಒಗ್ಗಟ್ಟಿನ ಕೊರತೆ ರಾಜ್ಯದ ಹಿತಕ್ಕೆ ಮಾರಕ :
ತಮಿಳುನಾಡಿನ ನೀರಾವರಿ ಯೋಜನೆಗಳು ಸೇರಿದಂತೆ ಅಲ್ಲಿನ ಅಭಿವೃದ್ಧಿ ಯೋಜನೆಗಳ ವಿಚಾರಕ್ಕೆ ಬಂದಾಗ ಅಲ್ಲಿನ ಸಂಸದರೆಲ್ಲರೂ ಪಕ್ಷ ಭೇದ ಮರೆತು ತತ್ಕ್ಷಣ ಒಗ್ಗಟ್ಟಾಗುತ್ತಾರೆ ಮತ್ತು ಸಂಸತ್ನಲ್ಲಿ ಪ್ರತಿಪಾದನೆ ಮಾಡುತ್ತಾರೆ. ಆದರೆ ನಮ್ಮ ರಾಜ್ಯದ ವಿಚಾರಕ್ಕೆ ಬಂದಾಗ ನಮ್ಮ ಸಂಸದರಲ್ಲಿ ಈ ರೀತಿಯ ಒಗ್ಗಟ್ಟು ಕಂಡುಬರುತ್ತಿಲ್ಲ. ಇದರಿಂದಾಗಿ ನಮ್ಮ ನೀರಾವರಿ ಯೋಜನೆಗಳು ವಿಳಂಬವಾಗುತ್ತಿವೆ. ಒಗ್ಗಟ್ಟಿನ ಕೊರತೆ ರಾಜ್ಯದ ಹಿತಕ್ಕೆ ಮಾರಕವಾದುದು ಎಂದು ದೇವೇ ಗೌಡ ಹೇಳಿದರು.
ಕಾಂಗ್ರೆಸ್ ನಾಯಕ ಸಿ.ಎಂ. ಇಬ್ರಾಹಿಂ ಅವರು ಜೆಡಿಎಸ್ಗೆ ಬರುವ ವಿಚಾರದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೇವೇಗೌಡರು, ಇಬ್ರಾಹಿಂ ಅವರು ನಮ್ಮ ಜತೆಯಲ್ಲೇ ಇದ್ದವರು. ಈಗ ಕಾಂಗ್ರೆಸ್ನಲ್ಲಿ ಎಂಎಲ್ಸಿ ಆಗಿದ್ದಾರೆ. ಜೆಡಿಎಸ್ ಸೇರುವುದಾದರೆ ಅವರ ಮನಸ್ಸಿನಲ್ಲಿ ಏನು ಇದೆ ಎಂಬುದು ಗೊತ್ತಾಗಬೇಕಲ್ಲ. ಅಲ್ಲಿ ಅವರನ್ನು ಲಘುವಾಗಿ ಪರಿಗಣಿಸಲು ಆರಂಭಿದ್ದು ಈಗ ಮತ್ತೆ ಸರಿಪಡಿಸಲು ಪ್ರಯತ್ನ ಅಲ್ಲೇ ನಡೆಯುತ್ತಿದೆ ಎಂದು ಕೇಳಿದ್ದೇನೆ ಅಂತಿಮವಾಗಿ ಏನಾಗುತ್ತದೋ ಗೊತ್ತಿಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ, ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ, ಜಿಲ್ಲಾ ಯುವ ಜನತಾದಳ ಅಧ್ಯಕ್ಷ ಅಕ್ಷಿತ್ ಸುವರ್ಣ, ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಮುಖಂಡರಾದ ಮಹಮ್ಮದ್ ಕುಂಞಿ, ವಸಂತ ಪೂಜಾರಿ, ಧನ್ರಾಜ್ ಉಪಸ್ಥಿತರಿದ್ದರು.
ಧರ್ಮದ ಹೆಸರಿನಲ್ಲಿ ವೈಷಮ್ಯ ದೊಡ್ಡ ದುರಂತ :
ಇಂದು ಧರ್ಮದ ಹೆಸರಿನಲ್ಲಿ ವೈಷಮ್ಯ ಸೃಷ್ಟಿಸಿ, ಸಮಾಜದ ಶಾಂತಿ ಕದಡಿ ರಾಜಕೀಯ ಲಾಭ ಪಡೆಯುವ ಪ್ರವೃತ್ತಿ ಹೆಚ್ಚಾಗುತ್ತಿದ್ದು ಇದೊಂದು ದೊಡ್ಡ ದುರಂತವಾಗಿದೆ. ಇದು ಆಗಬಾರದು. ಕರಾವಳಿಯಲ್ಲಿ ದಕ್ಷಿಣ ಕನ್ನಡದಿಂದ ಉತ್ತರ ಕನ್ನಡದವರೆಗೆ ಒಂದಲ್ಲ ಒಂದು ಸಮಸ್ಯೆಗಳನ್ನು ಸೃಷ್ಟಿಸಿ ಇದರ ರಾಜಕೀಯ ಪಡೆಯಲು ಎರಡು ಪ್ರಮುಖ ರಾಜಕೀಯ ಪಕ್ಷಗಳು ಪ್ರಯತ್ನಿಸುತ್ತಾ ಬಂದಿರುವುದನ್ನು ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಕಂಡಿದ್ದೇನೆ. ಇದರ ಜತೆಗೆ ಇದೀಗ ಈ ಭಾಗದ ಒಂದು ಸಣ್ಣ ರಾಜಕೀಯ ಪಕ್ಷವೂ ಸೇರಿಕೊಂಡಿದೆ ಎಂದು ದೇವೇಗೌಡ ಅವರು ಹಿಜಾಬ್ ವಿವಾದ ಕುರಿತಂತೆ ಪರೋಕ್ಷವಾಗಿ ಪ್ರತಿಕ್ರಿಯಿಸಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಭೇಟಿಯ ಸಂಕಲ್ಪ :
ನನಗೆ ಕೊರೊನಾ ಸೋಂಕು ಬಂದ ಸಂದರ್ಭದಲ್ಲಿ ಚೇತರಿಸಿಕೊಂಡ ಬಳಿಕ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ಸೇವೆ ಮಾಡುವುದಾಗಿ ಸಂಕಲ್ಪ ಮಾಡಿದ್ದೆ. ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ದೇವರ ದರುಶನಕ್ಕೆ ಬಂದಿದ್ದೇನೆ. ಇದೇ ಸಂದರ್ಭದಲ್ಲಿ ಪಕ್ಷದ ಸಂಘಟನೆಗಾಗಿ ಜಿಲ್ಲಾ ಪ್ರವಾಸ
ಆರಂಭಿಸಿದ್ದು ಮಂಗಳೂರಿನಲ್ಲಿ ಕಾರ್ಯಕರ್ತರ ಸಮಾವೇಶಕ್ಕೆ ಚಾಲನೆ ನೀಡುತ್ತಿದ್ದೇನೆ ಎಂದು ಎಚ್.ಡಿ. ದೇವೇಗೌಡ ಹೇಳಿದರು.
ಕುಕ್ಕೆ: ಗೌಡರಿಂದ ತುಲಾಭಾರ ಸೇವೆ :
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ ಹಾಗೂ ಪತ್ನಿ ಚೆನ್ನಮ್ಮ ದೇವೇಗೌಡ ಶನಿವಾರ ಭೇಟಿ ನೀಡಿದರು.
ಮೊದಲಿಗೆ ಕ್ಷೇತ್ರದ ಬಳಿ ಗಿಡ ನೆಟ್ಟು ನೀರೆರೆದ ಅವರು ಬಳಿಕ ದೇವಸ್ಥಾನಕ್ಕೆ ಆಗಮಿಸಿ ಶ್ರೀ ಸುಬ್ರಹ್ಮಣ್ಯನ ದರ್ಶನ ಪಡೆದು ಮಹಾಪೂಜೆ ಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ಹೊಸಳಿಗಮ್ಮನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಡಾ| ನಿಂಗಯ್ಯ ಅವರು ಮಾಜಿ ಪ್ರಧಾನಿಯನ್ನು ಬರಮಾಡಿಕೊಂಡರು. ಶುಕ್ರವಾರ ರಾತ್ರಿ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ದೇವೇಗೌಡ ದಂಪತಿ ಕ್ಷೇತ್ರದ ವಸತಿಗೃಹದಲ್ಲಿ ವಾಸ್ತವ್ಯ ಹೂಡಿದ್ದರು.
ದೇಗುಲದ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಪುಷ್ಪಲತಾ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಶ್ರೀವತ್ಸ, ವನಜಾ ವಿ. ಭಟ್, ಮಾಸ್ಟರ್ ಪ್ಲಾನ್ ಸದಸ್ಯ ಮನೋಜ್, ಜೆಡಿಎಸ್ ಮುಖಂಡರಾದ ಎಂ.ಬಿ. ಸದಾಶಿವ, ಜೆಡಿಎಸ್ ಕಡಬ ತಾಲೂಕು ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್, ಸಿ.ಪಿ. ಸೈಮನ್, ತಿಲಕ್ ಅಯೆಟ್ಟಿ, ಸೋಮಸುಂದರ ಕೂಜುಗೋಡು, ಜ್ಯೋತಿ ಪ್ರೇಮಾನಂದ ಮೆಟ್ಟಿನಡ್ಕ, ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯ ಹರೀಶ್ ಇಂಜಾಡಿ ಉಪಸ್ಥಿತರಿದ್ದರು.
ತುಲಾಭಾರ ಸೇವೆ
ದೇವೇಗೌಡ ಮತ್ತು ಚೆನ್ನಮ್ಮ ದೇವೆಗೌಡರು ಅಕ್ಕಿ, ಕಾಯಿ, ಬೆಲ್ಲದಲ್ಲಿ ತುಲಾಭಾರ ಸೇವೆ ಸಲ್ಲಿಸಿದರು. ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಅವರು ಪೂಜೆ ನೆರವೇರಿಸಿ, ಪ್ರಸಾದ ನೀಡಿದರು. ಕ್ಷೇತ್ರದಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು ಹಾಗೂ ಗೌಡರಿಗೆ ಝಡ್ ಪ್ಲಸ್ ಭದ್ರತೆ ಒದಗಿಸಲಾಗಿತ್ತು.
ದೇವರ ದರ್ಶನವಷ್ಟೇ ಉದ್ದೇಶ :
ಈ ಸಂದರ್ಭ ಮಾಧ್ಯಮ ದವರೊಂದಿಗೆ ಮಾತನಾಡಿದ ಗೌಡರು, ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕ್ಷೇತ್ರದ ವಸತಿಗೃಹ (ವಿವಿಐಪಿ) ಶಂಕುಸ್ಥಾಪನೆ ಸಂದರ್ಭ ಕುಕ್ಕೆಗೆ ಆಗಮಿಸಿದ್ದೇನೆ. ಬಳಿಕ ಇಂದೇ ಆಗಮಿಸಿರುವುದು. ಶನಿವಾರ ವಿಶೇಷ ದಿನ ಎಂದು ಕುಕ್ಕೆ ಸ್ವಾಮಿಗೆ ಪೂಜೆ, ಕೈಂಕರ್ಯ ಸಲ್ಲಿಸಿದ್ದೇನೆ. ದೇವರ ದರ್ಶನದ ಹೊರತು ಬೇರಾವುದೇ ಉದ್ದೇಶ ಇದರ ಹಿಂದೆ ಇಲ್ಲ ಎಂದರು. ರಾಜ್ಯರಾಜಕಾರಣ ಹಾಗೂ ಇತರ ವಿಷಯಗಳ ಕುರಿತ ಪತ್ರಕರ್ತರ ಪ್ರಶ್ನೆಗಳಿಗೆ, ಈ ಸಂದರ್ಭದಲ್ಲಿ ಅದೆಲ್ಲ ಬೇಡ ಎಂದು ಪ್ರತಿಕ್ರಿಯೆಗೆ ನಿರಾಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
ಮತದಾರರ ಚೀಟಿಯಲ್ಲಿ ಕ್ಯುಆರ್ ಕೋಡ್! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ
Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ