ಕರಾವಳಿ: ಗಾಳಿ-ಮಳೆ; ಕೆಲವೆಡೆ ಹಾನಿ
Team Udayavani, Jul 12, 2018, 4:50 PM IST
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಬುಧವಾರವೂ ಮಳೆ ಮುಂದುವರಿದಿದೆ.
ಮಂಗಳೂರು ನಗರದಲ್ಲಿ ಉತ್ತಮ ಮಳೆಯಾಗಿದೆ. ಕಿನ್ನಿಗೋಳಿ, ಕಟೀಲು, ಹಳೆಯಂಗಡಿ, ವೇಣೂರು, ಪುತ್ತೂರು, ಉಪ್ಪಿನಂಗಡಿ, ಪುಂಜಾಲಕಟ್ಟೆ, ಮಾಣಿ, ಕಾರ್ಕಳ, ಸುರತ್ಕಲ್, ಸುಳ್ಯ, ಬೆಳ್ತಂಗಡಿ, ಗುರುವಾಯನಕೆರೆ, ಬಂಟ್ವಾಳ ಸಹಿತ ಇತರೆಡೆ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಬುಧವಾರ ಆಗಾಗ್ಗೆ ಉತ್ತಮ ಮಳೆಯಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮುಂದಿನ ಎರಡು ದಿನಗಳ ಕಾಲ ಕರಾವಳಿ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ಮುದ್ರಾಡಿ: ಅಪಾರ ಹಾನಿ
ಹೆಬ್ರಿ: ಮುದ್ರಾಡಿ ಗ್ರಾ.ಪಂ. ವ್ಯಾಪ್ತಿಯ ಮುದ್ರಾಡಿ ಗೇರುಬೀಜ ಕಾರ್ಖಾನೆ ಸುತ್ತಮುತ್ತಲ ಪ್ರದೇಶಗಳಲ್ಲಿ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಬೀಸಿದ ಭಾರೀ ಗಾಳಿಗೆ ಮನೆ, ಅಂಗಡಿಗಳ ಚಾವಣಿ ಹಾರಿಹೋಗಿ ಅಪಾರ ಹಾನಿ ಸಂಭವಿಸಿದೆ. ಮರ ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ಬಸ್ಸು ತಂಗುದಾಣದ ಸಮೀಪ ಅಂಗವಾಡಿಗೆ ಹಾನಿಯಾಗಿದ್ದು ಇಂದಿರಾ ಅವರ ಮನೆ ಹೆಂಚು ಹಾರಿಹೋಗಿ 30 ಸಾವಿರ ರೂ. ನಷ್ಟವಾಗಿದೆ. ವಿದ್ಯುತ್ ಕಂಬಗಳು ಉರುಳಿ 1.5 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಗ್ರಾಮ ಲೆಕ್ಕಿಗರು ತಿಳಿಸಿದ್ದಾರೆ. ರಾಜೇಶ ಶೆಟ್ಟಿಗಾರ್ ಅವರ ಅಂಗಡಿ ಮತ್ತು ಸುಕುಮಾರ್ ಪೂಜಾರಿ ಅವರ ಮನೆಗೂ ಹಾನಿಯಾಗಿದೆ. ಮರ ಹಾಗೂ ವಿದ್ಯುತ್ ಕಂಬಗಳು ರಸ್ತೆಗೆ ಉರುಳಿ ಸಂಚಾರ ವ್ಯತ್ಯಯವಾಗಿದೆ.
ಸಹಾಯಕ್ಕೆ ನಿಂತ ಗ್ರಾ.ಪಂ.
ಘಟನೆ ನಡೆದ ಸ್ಥಳಕ್ಕೆ ಮುದ್ರಾಡಿ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ಡಿ. ಪೂಜಾರಿ, ಮಾಜಿ ಜಿ.ಪಂ. ಸದಸ್ಯ ಮಂಜುನಾಥ ಪೂಜಾರಿ, ಪಂ. ಸದಸ್ಯ ಶುಭೋದರ್ ಶೆಟ್ಟಿ ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದು ಹೆಂಚು ಹಾರಿ ಹೋದ ಮನೆಗಳಿಗೆ ಟಾರ್ಪಲು ಹಾಕಿ ತುರ್ತು ವ್ಯವಸ್ಥೆ ಮಾಡಿದ್ದಾರೆ.
ಬೋಳಂಬಳ್ಳಿ : ಮನೆ ಕುಸಿತ
ಉಪ್ಪುಂದ: ಕಾಲೊ¤àಡು ಗ್ರಾ.ಪಂ. ವ್ಯಾಪಿಯ ಬೋಳಂಬಳ್ಳಿ ಎಂಬಲ್ಲಿ ಬುಧವಾರ ಗಾಳಿಯ ಜತೆ ಸುರಿದ ಭಾರೀ ಮಳೆಯಿಂದಾಗಿ ದೇವರಾಜ ಜೈನ್ ಎಂಬವರ ಮಹಡಿ ಮನೆ ಸಂಪೂರ್ಣ ಕುಸಿದಿದೆ.
ಬುಧವಾರ ಬೆಳಗ್ಗೆ 9 ಗಂಟೆಗೆ ಬಿರುಸಿನ ಮಳೆ ಸಂದರ್ಭ ಭಾರೀ ಶಬ್ದ ಕೇಳಿಸಿತು. ಮನೆಯಲ್ಲಿದ್ದ ದೇವರಾಜ ಜೈನ್, ಮಗ ವಜ್ರಕುಮಾರ್ ಜೈನ್ ಮತ್ತು ಮಡದಿ ತನ್ನ ಮೂರು ತಿಂಗಳ ಮಗುವನ್ನು ಎತ್ತಿಕೊಂಡು ಹೊರಗೆ ಓಡಿದ್ದರಿಂದ ಪಾರಾಗಿದ್ದಾರೆ. ಮಹಡಿ ಮನೆ ಒಂದೇ ಕ್ಷಣಕ್ಕೆ ಕುಸಿದು ಎಲೆಕ್ಟ್ರಾನಿಕ್ ವಸ್ತು, ಅಡಿಗೆ ಪಾತ್ರೆ ಬಟ್ಟೆ ಬರೆ ನಾಶವಾಗಿದ್ದು, ಐದು ಲಕ್ಷ ರೂ. ನಷ್ಟವಾಗಿದೆ. ಕಾಲೊ¤àಡು ಗ್ರಾ.ಪಂ. ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ಸ್ಥಳಕ್ಕೆ ಭೇಟಿನೀಡಿದ್ದಾರೆ. ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ, ಪರಿಹಾರ ನೀಡುವಂತೆ ಸೂಚಿಸಿದ್ದಾರೆ.
ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿ
ಕಬಕ: ಬುಧವಾರ ಸಂಜೆ ಬೀಸಿದ ಗಾಳಿ ಸಹಿತ ಮಳೆಗೆ ಕಬಕ ಗ್ರಾಮದ ಪೋಳ್ಯ ನಿವಾಸಿ ಶರೀಫ್ ಎಂಬವರ ಮನೆಯ ಮೇಲೆ ತೆಂಗಿನ ಮರ ಬಿದ್ದಿದೆ.
ಎನ್ಡಿಆರ್ಎಫ್ ಶೋಧ
ಮಂಗಳೂರು: ಮೂಡುಶೆಡ್ಡೆ ಡ್ಯಾಂ ಬಳಿ ರವಿವಾರ ಸಂಜೆ ಫಲ್ಗುಣಿ ನದಿಯ ನೆರೆ ನೀರು ನೋಡಲು ಹೋಗಿದ್ದಾಗ ಕಾಲು ಜಾರಿ ನದಿಗೆ ಬಿದ್ದು ನಾಪತ್ತೆಯಾಗಿರುವ ವಾಮಂಜೂರು ಅಂಬೇಡ್ಕರ್ ನಗರದ ಯುವಕ ಸುಶಾಂತ್ (20) ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ ಬುಧವಾರ ಎನ್ಡಿಆರ್ಎಫ್ ಸಿಬಂದಿ ಫಲ್ಗುಣಿ ನದಿಯ ಮೂಡುಶೆಡ್ಡೆ, ಕೂಳೂರು ಮತ್ತು ತಣ್ಣೀರುಬಾವಿ ಪ್ರದೇಶದಲ್ಲಿ ಹುಡುಕಾಟ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ