ತಡರಾತ್ರಿಯಿಂದಲೇ ಕರಾವಳಿಯಾದ್ಯಂತ ಉತ್ತಮ ಮಳೆ
Team Udayavani, Jun 26, 2017, 3:45 AM IST
ಮಂಗಳೂರು/ಉಡುಪಿ: ದ.ಕ., ಉಡುಪಿ ಜಿಲ್ಲೆಯಾದ್ಯಂತ ಶನಿವಾರ ತಡರಾತ್ರಿಯಿಂದಲೇ ಮಳೆಯಾಗಿದ್ದು, ರವಿವಾರ ದಿನವಿಡೀ ಸುರಿದಿದೆ. ಕೆಲವೆಡೆ ಗುಡು, ಗಾಳಿ ಸಹಿತ ಮಳೆ ಬಂದಿದೆ. ಮಂಗಳೂರಿನಲ್ಲಿ ಗುಡುಗು ಸಹಿತ ಆಗಾಗ ಉತ್ತಮ ವರುಣಾಗಮನವಾಗಿದೆ. ಇದರಿಂದಾಗಿ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಿದೆ.
ಬಜಪೆಯಲ್ಲಿ ಮಧ್ಯಾಹ್ನ ಭಾರೀ ಮಳೆಯಾಗಿದೆ. ಬಂಟ್ವಾಳ, ಮಚ್ಚಿನ, ಮಡಂತ್ಯಾರಿನಲ್ಲಿ ಗುಡುಗು ಸಹಿತ ಮಳೆ ಬಂದಿದೆ. ಪುತ್ತೂರು, ಕಟೀಲು, ಕಿನ್ನಿಗೋಳಿ, ಮೂಲ್ಕಿ, ಕಡಬದಲ್ಲಿ ಗಾಳಿ ಸಹಿತ ಧಾರಾಕಾರ ವರ್ಷಧಾರೆಯಾಗಿದೆ. ಪುಂಜಾಲಕಟ್ಟೆ, ಹಳೆಯಂಗಡಿಯಲ್ಲಿ ಉತ್ತಮ ವರುಣಾಗಮನವಾಗಿದೆ. ವೇಣೂರಿನಲ್ಲಿ ಶನಿವಾರ ರಾತ್ರಿಯಿಂದಲೇ ಭಾರೀ ಮಳೆ ಸುರಿದಿದೆ. ಕಡಬ, ವಿಟ್ಲದಲ್ಲಿ ಭಾರೀ ಮಳೆಯಾಗಿದೆ. ಸುಳ್ಯದಲ್ಲಿ ಬೆಳಗ್ಗೆ ಬಿಸಿಲಿದ್ದರೆ, ಮಧ್ಯಾಹ್ನದ ಆನಂತರ ಮಳೆ ಬಂದಿದೆ.
ಉಡುಪಿ, ಮಣಿಪಾಲ, ಬ್ರಹ್ಮಾವರ, ಕಾಪು, ಶಿರ್ವ, ಕಾರ್ಕಳ, ಹೆಬ್ರಿ ಭಾರೀ ಮಳೆಯಾಗಿದೆ. ಉಡುಪಿ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಸುರಿದ ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಉಡುಪಿ ತಾಲೂಕಿನಲ್ಲಿ ಒಂದು ಮನೆಗೆ ಹಾನಿಯಾಗಿದೆ.
ಕುಂದಾಪುರ ತಾಲೂಕಿನಾದ್ಯಂತ ಕೆಲವೊಮ್ಮೆ ಗಾಳಿ ಹಾಗೂ ಗುಡುಗು ಸಹಿತವಾದ ಮಳೆ ಸುರಿದಿದೆ. ಕೊಲ್ಲೂರು, ಬೈಂದೂರು, ನಾವುಂದ, ಮರವಂತೆ, ಗಂಗೊಳ್ಳಿ, ಪಡುಕೋಣೆ , ನಾಡ, ಹೆಮ್ಮಾಡಿ, ಕುಂದಾಪುರ, ಕೋಟೇಶ್ವರ, ಸಿದ್ದಾಪುರ, ಹಳ್ಳಿಹೊಳೆ, ಬೆಳ್ವೆ, ಹೊಸಂಗಡಿ, ತೆಕ್ಕಟ್ಟೆ, ಕುಂಭಾಶಿಯಲ್ಲಿ ನಿರಂತರ ಮಳೆಯಾಗಿದೆ.
ಕುಂದಾಪುರ -ಕಾರವಾರದ ನಡುವೆ ನಡೆಯುತ್ತಿರುವ ಚತುಷ್ಪಥ ಹೆದ್ದಾರಿಯ ಅರೆ ಬರೆ ಕಾಮಗಾರಿಯಿಂದಾಗಿ ಅಲ್ಲಲ್ಲಿ ನೀರು ನಿಂತು ಕೃತಕ ನೆರೆ ನಿರ್ಮಾಣವಾಗಿತ್ತು. ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ನದಿ ಪಾತ್ರದ ಕೃಷಿ ತೋಟಗಳು ಜಲಾವೃತಗೊಂಡಿದೆ. ಬೇಳೂರು, ಮೊಗೆಬೆಟ್ಟು, ಹಳ್ನಾಡುಗಳಲ್ಲಿ ಕೃಷಿ ಭೂಮಿಗಳಿಗೆ ನೀರು ನುಗ್ಗಿದೆ. ನಿರಂತರವಾಗಿ ಮಳೆ ಹೀಗೆಯೇ ಬಿದ್ದಲ್ಲಿ ಕೆಲವು ಕಡೆಗಳಲ್ಲಿ ನೆರೆಭೀತಿ ಎದುರಾಗಲಿದೆ. ಗಾಳಿ ಮಳೆ ಇರುವುದರಿಂದ ದಿನ ಪೂರ್ತಿ ವಿದ್ಯುತ್ ಕಣ್ಣು ಮುಚ್ಚಾಲೆ ನಿರಂತರವಾಗಿತ್ತು.