ಕುಕ್ಕೆ: ಭಾರೀ ಮಳೆಗೆ ಉಕ್ಕಿಹರಿದ ದರ್ಪಣತೀರ್ಥ
Team Udayavani, Sep 24, 2019, 5:00 AM IST
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಸೋಮವಾರ ಸಂಜೆ ದಿಢೀರನೆ ಭಾರೀ ಮಳೆ ಸುರಿದಿದೆ. ಕ್ಷೇತ್ರದ ದರ್ಪಣ ತೀರ್ಥ ನದಿಯಲ್ಲಿ ಹಠಾತ್ತಾಗಿ ಪ್ರವಾಹ ಉಕ್ಕಿ ಹರಿದು ಸ್ವಲ್ಪ ಕಾಲ ಆತಂಕ ಸೃಷ್ಟಿಸಿತು.
ಕುಮಾರಪರ್ವತದ ತಪ್ಪಲು ಪ್ರದೇಶ ಮತ್ತು ಸ್ಥಳೀಯವಾಗಿ ಸತತ ನಾಲ್ಕು ತಾಸು ಮಳೆ ಸುರಿಯಿತು. ದರ್ಪಣ ತೀರ್ಥ ತುಂಬಿ ಹರಿದ ಪರಿಣಾಮ ಆದಿಸುಬ್ರಹ್ಮಣ್ಯ ದೇಗುಲದ ಹೊರಾಂಗಣಕ್ಕೆ ನೀರು ನುಗ್ಗಿದೆ. ಆದಿ ದೇಗುಲದ ಅಶ್ವತ್ಥಕಟ್ಟೆ ಮುಳುಗಡೆಗೊಂಡಿತ್ತು. ದೇಗುಲದ ಆವರಣದೊಳಕ್ಕೆ ನೆರೆ ನೀರು ಹರಿದಿದೆ. ತೀರ್ಥ ಸ್ನಾನ ನೆರವೇರಿಸುವಲ್ಲಿ ಮೆಟ್ಟಿಲ ತನಕ ನೀರು ಹರಿದಿದೆ. ಪಕ್ಕದಲ್ಲೇ ಇರುವ ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಹಿಂಭಾಗದ ಕೆಲವು ಪ್ರದೇಶಗಳು ಮುಳುಗಡೆಗೊಂಡವು.
ಕಿರು ಸೇತುವೆ ಮುಳುಗಡೆ
ಇದೇ ಮೊದಲ ಬಾರಿಗೆ ದೇವರಗದ್ದೆಗೆ ತೆರಳುವ ಕಿರು ಸೇತುವೆ ಪೂರ್ಣ ಪ್ರಮಾಣದಲ್ಲಿ ಮುಳುಗಿತ್ತು. ಪರಿಸರದ ಹಲವು ವಸತಿಗೃಹಗಳಿಗೆ, ಸ್ಥಳೀಯ ನಾರಾಯಣ ಅವರ ಮನೆಗೆ ನೀರು ನುಗ್ಗಿದೆ. ದೇವರಗ¨ªೆ ಭಾಗಕ್ಕೆ ಸಂಪರ್ಕ ಕಡಿತಗೊಂಡಿತು. ದರ್ಪಣ ತೀರ್ಥ ನದಿ ಪಾತ್ರದ ಕೃಷಿ ಭೂಮಿ ಜಲಾವೃತಗೊಂಡವು. ಇಂತಹ ಮಳೆ ಈ ಹಿಂದೆ ಬಂದಿದ್ದರೂ ದರ್ಪಣ ತೀರ್ಥ ನದಿಯಲ್ಲಿ ಈ ಬಾರಿ ಇಷ್ಟೊಂದು ಪ್ರಮಾಣದಲ್ಲಿ ನೆರೆ ಹರಿದಿರುವುದು ಸ್ಥಳೀಯರಲ್ಲಿ ಅಚ್ಚರಿಗೆ ಕಾರಣವಾಗಿದೆ. ಮಳೆ ನಿಂತ ಅರ್ಧ ತಾಸಿನಲ್ಲಿ ಪ್ರವಾಹ ಕೂಡ ಇಳಿಯಿತು.
ಕ್ಷೇತ್ರದಲ್ಲಿ ಹರಿಯುವ ಕುಮಾರಧಾರಾ ನದಿಯಲ್ಲಿ ಅಷ್ಟೇನೂ ಪ್ರವಾಹ ಕಂಡು ಬಂದಿಲ್ಲ. ಗುತ್ತಿಗಾರು, ಪಂಜ, ಬಳ್ಪ ಐನಕಿದು, ಬಾಳುಗೋಡು ಕಲ್ಮಕಾರು, ಯೇನೆಕಲ್ ಕಡೆಗಳಲ್ಲಿ ಸಾಮಾನ್ಯ ಮಳೆಯಾಗಿದೆ.
ಭಕ್ತರಲ್ಲಿ ಆತಂಕ ಬೇಡ
ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಯಾವುದೇ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ದರ್ಪಣ ತೀರ್ಥ ನದಿಯಲ್ಲಿ ನೆರೆ ಹರಿದರೂ ಯಾವುದೇ ರೀತಿಯ ಸಮಸ್ಯೆಗಳಾಗಿಲ್ಲ. ಭಕ್ತರಿಗೂ ತೊಂದರೆಯಾಗಿಲ್ಲ ಎಂದು ದೇಗುಲದ ಪ್ರಕಟನೆ ತಿಳಿಸಿದೆ.
ಜಲಸ್ಫೋಟ ನೆನಪಿಸಿತು
ಕುಮಾರಧಾರಾ ನದಿಯಲ್ಲಿ ಅಷ್ಟೇನೂ ಹರಿವಿಲ್ಲದೆ ದರ್ಪಣ ತೀರ್ಥದಲ್ಲಿ ಮಾತ್ರ ಭಾರೀ ಪ್ರಮಾಣದಲ್ಲಿ ಕೆಂಬಣ್ಣದ ನೆರೆ ನೀರು ಹರಿದುಬಂದಿರುವುದು ಅಚ್ಚರಿ ಮತ್ತು ಆತಂಕ ಮೂಡಿಸಿತು. ದರ್ಪಣ ತೀರ್ಥ ಹುಟ್ಟುವ ಕುಮಾರ ಪರ್ವತ, ಪಶ್ಚಿಮ ಘಟ್ಟದ ಭಾಗದಲ್ಲಿ ಭಾರೀ ಮಳೆ ಆಗಿರುವ ಕಾರಣ ಇಷ್ಟು ನೆರೆ ಬಂದಿದೆ ಎನ್ನಲಾಗಿದೆ. ಕೆಲವೇ ತಿಂಗಳುಗಳ ಹಿಂದೆ ಬೆಳ್ತಂಗಡಿ ತಾಲೂಕಿನಲ್ಲಿ ಇದೇ ರೀತಿ ಒಮ್ಮೆಲೆ ಹೊಳೆ, ನದಿಗಳಲ್ಲಿ ದಿಢೀರ್ ನೆರೆ ಉಕ್ಕಿಬಂದು ಹಾನಿ ಉಂಟು ಮಾಡಿತ್ತು. ಆದರೆ ಅಲ್ಲಿ ನಡೆದಂತೆ ದರ್ಪಣ ತೀರ್ಥದಲ್ಲಿ ಮರ, ಬಂಡೆ ಇತ್ಯಾದಿಗಳು ಕೊಚ್ಚಿಕೊಂಡು ಬಂದಿಲ್ಲ ಎನ್ನುವುದು ಸಮಾಧಾನದ ಸಂಗತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ