ಹಿಂದೂ ಧರ್ಮ ಜಾಗೃತಿ ಸಭೆ
Team Udayavani, Jan 10, 2018, 4:11 PM IST
ಬೆಳ್ತಂಗಡಿ: ಇಂದಬೆಟ್ಟು ಗ್ರಾಮದ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ವಠಾರದಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮಸ್ತ ಹಿಂದೂ ಸಂಘಟನೆಗಳ ವತಿಯಿಂದ ಫೆ. 11ರಂದು ನಡೆಯಲಿರುವ ಹಿಂದೂ ಧರ್ಮ ಜಾಗೃತಿ ಸಭೆಯ ಪ್ರಯುಕ್ತ ಪೂರ್ವಭಾವಿ ಸಭೆಯನ್ನು ಇಂದಬೆಟ್ಟು ಶ್ರೀ ಅರ್ಧನಾರೀಶ್ವರ ದೇವಸ್ಥಾನದ ವಠಾರದಲ್ಲಿ ನಡೆಸಲಾಯಿತು.
ಹಿಂದೂ ಜನಜಾಗೃತಿ ಸಮಿತಿಯ ಚಂದ್ರ ಮೊಗೇರ ಮಾತನಾಡಿ, ಹಿಂದೂ ಧರ್ಮದ ಮೇಲೆ ನಡೆಯುತ್ತಿರುವ ಭೀಕರ ದೌರ್ಜನ್ಯಗಳನ್ನು ತಡೆಗಟ್ಟಲು ಸಭೆಯನ್ನು ಗ್ರಾಮ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಗೋ ಹತ್ಯೆ, ಲವ್ ಜೆಹಾದ್, ಮತಾಂತರ ಮುಂತಾದ ಭೀಕರ ಸಮಸ್ಯೆಗಳ ಕುರಿತಾಗಿ ಶಾಶ್ವತವಾದ ಪರಿಹಾರ ಯೋಜನೆ ಮಾಡಲು ಹಿಂದೂ ರಾಷ್ಟ್ರದ ಸ್ಥಾಪನೆಯೊಂದೇ ಏಕೈಕ ಮಾರ್ಗವಾಗಿದೆ. ಆದ್ದರಿಂದ ಹಿಂದೂ ಧರ್ಮ ಜಾಗೃತಿ ಸಭೆಯ ಮೂಲಕ ಸಮಾಜ ಜಾಗೃತಿ ಮಾಡುವ ಸಂಕಲ್ಪ ಮಾಡೋಣ ಎಂದರು.
ಊರಿನ ಧರ್ಮ ಪ್ರೇಮಿಗಳು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಇಂದಬೆಟ್ಟು ನವ ಭಾರತ ಗೆಳೆಯರ ಬಳಗದ ವಸಂತ ಗೌಡ ಕಲ್ಲಾಜೆ, ಅರ್ಧನಾರೀಶ್ವರ ದೇವಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಜಯಾನಂದ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.