ಹೊಟೇಲ್ಗಳು ದರಪಟ್ಟಿ ಪರಿಷ್ಕರಿಸಿಲ್ಲ
Team Udayavani, Nov 22, 2017, 12:41 PM IST
ಮಹಾನಗರ : ಕೇಂದ್ರ ಸರಕಾರವು ಸಾರ್ವಜನಿಕರಿಗೆ ಹೊರೆಯಾಗಬಾರದು ಎಂಬ ಕಾರಣಕ್ಕೆ ಕಳೆದ ವಾರವಷ್ಟೇ ಹೊಟೇಲ್ಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ಟಿ) ಶೇ. 18ರಿಂದ ಶೇ. 12 (ಹವಾನಿಯಂತ್ರಿತ) ಹಾಗೂ ಶೇ. 12ರಿಂದ ಶೇ. 5ಕ್ಕೆ (ಸಾಮಾನ್ಯ ದರ್ಜೆ) ಇಳಿಸಿದೆ. ಆದರೆ, ಜಿಎಸ್ಟಿ ಹೇರಿಕೆ ಬೆನ್ನಲ್ಲೇ ಏರಿಕೆಯಾಗಿದ್ದ ಕಾಫಿ -ತಿಂಡಿಗಳ ದರ ಮಾತ್ರ ಬಹುತೇಕ ಕಡೆಗಳಲ್ಲಿ ಇನ್ನೂ ಯಥಾಸ್ಥಿತಿಯಲ್ಲಿದೆ. ಸರಕಾರ ಹೊಟೇಲ್ ಗಳ ಮೇಲಿನ ತೆರಿಗೆ ಪ್ರಮಾಣ ತಗ್ಗಿಸಿದ್ದರೂ ಸಾರ್ವಜನಿಕರಿಗೆ ಯಾವ ಲಾಭವೂ ಆಗಿಲ್ಲ.
ಹೊಟೇಲ್ಗಳ ಮೇಲೆ ವಿಧಿಸಲಾಗುತ್ತಿದ್ದ ಜಿಎಸ್ಟಿ ಪ್ರಮಾಣದಲ್ಲಿ ಇಳಿಕೆಯಾದ ಬಳಿಕ ಮಂಗಳೂರು ನಗರದಲ್ಲಿ ಗ್ರಾಹಕರಿಗೆ ಎಷ್ಟರಮಟ್ಟಿಗೆ ಪ್ರಯೋಜನವಾಗುತ್ತಿದೆ? ಹೊಟೇಲ್ಗಳು ಈಗ ಗ್ರಾಹಕರಿಂದ ಎಷ್ಟು ಹಣ ವಸೂಲಿ ಮಾಡುತ್ತಿವೆ ಎಂಬ ಬಗ್ಗೆ ಉದಯವಾಣಿ “ಸುದಿನ’ವು ರಿಯಾಲಿಟಿ ಚೆಕ್ ನಡೆಸಿದೆ. ಸರಕಾರವು ಜಿಎಸ್ಟಿ ದರ ಕಡಿಮೆ ಮಾಡಿದರೂ, ನಗರದ ಕೆಲ ಹೊಟೇಲ್ಗಳು ಇನ್ನೂ ಪಾಲನೆ ಮಾಡುತ್ತಿಲ್ಲ ಎಂಬ ವಾಸ್ತವಾಂಶ ಬೆಳಕಿಗೆ ಬಂದಿದೆ. ನಗರದ ಕೆಲವು ಹೊಟೇಲ್ಗಳಿಗೆ ಖುದ್ದು ಭೇಟಿ ನೀಡಿದಾಗ, ಶೇ. 18 ಹಾಗೂ ಶೇ. 12 ಜಿಎಸ್ಟಿ ಇದ್ದಾಗ ವಸೂಲಿ ಮಾಡುತ್ತಿದ್ದಷ್ಟೇ ದರವನ್ನು ಜಿಎಸ್ಟಿ ಇಳಿಕೆಯಾದ ಮೇಲೂ ವಸೂಲಿ ಮಾಡು ತ್ತಿದ್ದವು. ಬಿಲ್ನಲ್ಲಿ ಮಾತ್ರ ಜಿಎಸ್ಟಿ ಕ್ರಮ ವಾಗಿ ಶೇ. 12 ಹಾಗೂ ಶೇ. 5 ಎಂದು ನಮೂದಾಗುತ್ತಿದ್ದರೂ ಒಟ್ಟು ದರದಲ್ಲಿ ಯಾವುದೇ ಇಳಿಕೆಯಾಗಿಲ್ಲ.
ಜಿಎಸ್ಟಿ ಜಾರಿಗೆ ಮುನ್ನ ನಗರದ ಪ್ರತಿಷ್ಠಿತ ಹೊಟೇಲೊಂದರಲ್ಲಿ ಒಂದು ಕಾಫಿಗೆ 17 ರೂ. ಇತ್ತು. ಜಿಎಸ್ಟಿ ಜಾರಿಗೆ ಬರುತ್ತಿದ್ದಂತೆ ಅದು ಏಕಾಏಕಿ 20 ರೂ.ಗೆ ಏರಿಕೆಯಾಯಿತು.
ಬಿಲ್ನಲ್ಲಿ ಶೇ. 12 ಜಿಎಸ್ಟಿ ನಮೂದಾಗತೊಡಗಿತು. ಈಗ ಅದೇ ಹೊಟೇಲ್ನಲ್ಲಿ ಕಾಫಿ ಕುಡಿದರೆ ಜಿಎಸ್ಟಿ ದರ ಶೇ. 12ರಿಂದ ಶೇ.5ಕ್ಕೆ ಇಳಿಕೆಯಾಗಿದೆ. ಆದರೆ, ಕಾಫಿ ರೇಟ್ ಮಾತ್ರ 20 ರೂ. ಇದ್ದು, ಅದರಲ್ಲಿ ಯಾವುದೇ ಇಳಿಕೆಯಾಗಿಲ್ಲ. ಜಿಎಸ್ಟಿ ಹೆಸರಿನಲ್ಲಿ ಏರಿಕೆಯಾಗಿದ್ದ ಕಾಫಿ -ತಿಂಡಿಗಳ ದರ ಬಹುತೇಕ ಹೊಟೇಲ್ ಗಳಲ್ಲಿ ಕಡಿಮೆಯಾಗಿಲ್ಲ. ಕೆಲವು ಹೊಟೇಲ್ ಮಾಲಕರು ಮಾತ್ರ ತೆರಿಗೆ ಇಳಿಕೆ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿದ್ದಾರೆ.
ಚೇತರಿಕೆಯಾಗಿಲ್ಲ
ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ ಕುಡ್ಪಿ ಜಗದೀಶ ಶೆಣೈ ಈ ಬಗ್ಗೆ ‘ಸುದಿನ’ಕ್ಕೆ ಪ್ರತಿಕ್ರಿಯಿಸಿ, ‘ಜಿಎಸ್ಟಿ ಹೇರಿಕೆಯಾದಾಗಿನಿಂದ ಹೊಟೇಲ್ ವಹಿವಾಟು ಶೇ. 25ರಷ್ಟು ಕಡಿಮೆಯಾಗಿದೆ. ವ್ಯಾಪಾರ ಇನ್ನೂ ಸಮತೋಲನಕ್ಕೆ ಬಂದಿಲ್ಲ. ಈ ಹಿಂದೆ ಜಿಎಸ್ಟಿ ಜಾರಿಯಿಂದ ಉಂಟಾಗಿರುವ ನಷ್ಟವನ್ನು ಸರಿದೂಗಿಸಲು ಕೆಲವು ಹೊಟೇಲ್ಗಳಲ್ಲಿ ಹಳೇ ಜಿಎಸ್ಟಿ ಮಾದರಿಯಲ್ಲೇ ಗ್ರಾಹಕರಿಂದ ದರ ವಸೂಲಿ ಮಾಡುತ್ತಿರಬಹುದು. ಆದರೆ, ಜಿಎಸ್ಟಿ ಇಳಿಕೆಯಾಗಿರಬೇಕಾದರೆ, ಕಾಫಿ -ತಿಂಡಿ ಹಾಗೂ ಎಲ್ಲ ಆಹಾರ ಪದಾರ್ಥಗಳ ದರಗಳಲ್ಲೂ ಸ್ವಲ್ಪ ವ್ಯತ್ಯಾಸವಾಗುತ್ತದೆ. ಹೀಗಿರುವಾಗ, ಹೊಸ ಜಿಎಸ್ಟಿ ಪ್ರಮಾಣದ ಆಧಾರದಲ್ಲೇ ಹೊಟೇಲ್ ಮಾಲಕರು ದರ ಪಟ್ಟಿಯನ್ನು ಪರಿಷ್ಕರಿಸಬೇಕು’ ಎಂದರು.
ಸುದಿನ ಕಾಳಜಿ
ಗ್ರಾಹಕರು ಯಾವುದೇ ಹೊಟೇಲ್ಗಳಿಗೆ ಹೋದರೂ ಹಣ ಪಾವತಿಸುವ ಮೊದಲು ತಮ್ಮ ಬಿಲ್ನಲ್ಲಿ ನಮೂದಿಸಿರುವ ಜಿಎಸ್ಟಿ ಪ್ರಮಾಣ ಮತ್ತು ಅದಕ್ಕೆ ವಸೂಲಿ ಮಾಡುವ ಮೊತ್ತವನ್ನು ಪರಿಶೀಲಿಸಬೇಕು. ಒಂದುವೇಳೆ, ಜಿಎಸ್ಟಿ ಪ್ರಮಾಣದಲ್ಲಿ ಇಳಿಕೆ ತೋರಿಸಿದ್ದರೂ ಬಿಲ್ ಮೊತ್ತದಲ್ಲಿ ಎಷ್ಟು ಪ್ರಮಾಣ ಕಡಿಮೆಯಾಗಿದೆ ಎಂಬುದನ್ನು ಕೂಡ ಪರಿಶೀಲಿಸಬೇಕು. ಆ ಮೂಲಕ, ಜಿಎಸ್ಟಿ ಹೆಸರಿನಲ್ಲಿ ಮೋಸ ಹೋಗದಂತೆ ಮುನ್ನೆಚ್ಚರಿಕೆ ವಹಿಸಿದರೆ ಉತ್ತಮ.
ಉಢಾಪೆ ಉತ್ತರ
ಕೇಂದ್ರ ಸರಕಾರವು ಜಿಎಸ್ಟಿ ಶೇಕಡದಲ್ಲಿ ಕಡಿಮೆ ಮಾಡಿದರೂ, ತಿಂಡಿ ತಿನಿಸುಗಳಿಗೆ ನೀಡುವ ಬೆಲೆಯಲ್ಲಿ ಇಳಿಕೆಯಾಗಲಿಲ್ಲ. ಈ ಬಗ್ಗೆ ಹೊಟೇಲ್ ಮಾಲಕರಲ್ಲಿ ಕೇಳುವಾಗ, ಈ ಹಿಂದೆ ಜಿಎಸ್ಟಿ ಆಧರಿತ ಬಿಲ್ ನೀಡುತ್ತಿರಲಿಲ್ಲ. ಗ್ರಾಹಕರಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡುತ್ತಿದ್ದೆವು ಎಂಬ ಉಢಾಪೆ ಮಾತನಾಡುತ್ತಾರೆ.
– ಪ್ರದೀಪ್ ಕುಮಾರ್, ಹೊಟೇಲ್ ಗ್ರಾಹಕ
ವಂಚನೆ ಸರಿಯಲ್ಲ
ನಗರದಲ್ಲಿರುವ ಎಲ್ಲ ಹೊಟೇಲ್ಗಳು ಸಾರ್ವಜನಿಕರಿಗೆ ಸೇವೆ ನೀಡಬೇಕೇ ವಿನಃ ವಂಚಿಸಬಾರದು. ಕೇಂದ್ರ ಸರಕಾರವು
ಜಿಎಸ್ಟಿ ದರ ಪರಿಷ್ಕರಣೆ ಮಾಡಿದ ಬಳಿಕ ಯಾವುದೇ ಹೊಟೇಲ್ಗಳು ಗ್ರಾಹಕರಿಗೆ ವಂಚಿಸುತ್ತಿದ್ದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಸದ್ಯದಲ್ಲೇ ಈ ಬಗ್ಗೆ ಹೊಟೇಲ್ ಮಾಲಕರಿಗೆ ಮನವರಿಕೆ ಮಾಡಿಕೊಡುವೆ.
– ಕುಡ್ಪಿ ಜಗದೀಶ ಶೆಣೈ, ಹೊಟೇಲ್
ಮಾಲಕರ ಸಂಘದ ಅಧ್ಯಕ್ಷ, ಮಂಗಳೂರು
ಅನುಕೂಲ ಮಾಡಿಕೊಡಿ
ಹೊಟೇಲ್ಗಳ ತಿಂಡಿ-ತಿನಿಸುಗಳಲ್ಲಿ ಹೆಚ್ಚಿನ ಏರಿಕೆಯಾಗಿದೆ. ಜಿಎಸ್ಟಿ ಬರುವುದಕ್ಕೂ ಮೊದಲು 10 ರೂಪಾಯಿಗೆ ಸಿಗುತ್ತಿದ್ದ ಟೀ, ಕಾಫಿ ಏಕಾಏಕಿ 12ರಿಂದ 25 ರೂ.ವರೆಗೆ ಏರಿದೆ. ಇದೀಗ ಕೇಂದ್ರ ಸರಕಾರ ಜಿಎಸ್ಟಿ ದರ ಇಳಿಸಿದ್ದರೂ ಕೆಲವು ಹೊಟೇಲ್ಗಳಲ್ಲಿ ದರ ವ್ಯತ್ಯಾಸ ಮಾಡಲಿಲ್ಲ. ಕೆಲ ಹೊಟೇಲ್ಗಳಲ್ಲಿ ಖಾದ್ಯಗಳಿಗೆ ನಾಮ ಫಲಕಗಳಲ್ಲಿ ನಮೂದಿಸಿದ್ದಕ್ಕಿಂತ ಜಾಸ್ತಿ ಹಣ ವಸೂಲಿ ಮಾಡುತ್ತಿದ್ದಾರೆ. ಜಿಎಸ್ಟಿ ಹೆಸರಿನಲ್ಲೂ ಕೆಲವು ಹೊಟೇಲ್ಗಳಲ್ಲಿ ಹೆಚ್ಚಿನ ದರವಿದ್ದು, ಕೂಡಲೇ ಹೊಟೇಲ್ಗಳು ಹೊಸ ಜಿಎಸ್ಟಿ ಪ್ರಮಾಣಕ್ಕೆ ತಕ್ಕಂತೆ ತಮ್ಮ ದರ ಪಟ್ಟಿಯನ್ನು ಪರಿಷ್ಕರಿಸಿ ಜನರಿಗೆ ಅನುಕೂಲ ಮಾಡಬೇಕು.
– ಚಂದ್ರಶೇಖರ ಪೂಜಾರಿ, ಗ್ರಾಹಕ
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ