ಇಚ್ಲಂಪಾಡಿಯ ಕರ್ತಡ್ಕದಲ್ಲಿ ಸೇತುವೆ ಕಾಮಗಾರಿ ಪೂರ್ಣ
ಅಡಿಕೆ ಮರದ ಪಾಲದ ಮೇಲಿನ ನಡಿಗೆಗೆ ಮುಕ್ತಿ
Team Udayavani, Jan 9, 2023, 6:10 AM IST
ಸುಬ್ರಹ್ಮಣ್ಯ: ಹಲವಾರು ವರ್ಷಗಳಿಂದ ಮಳೆಗಾಲದಲ್ಲಿ ಅಡಿಕೆ ಮರದ ಪಾಲದ ಮೇಲೆ ಭಯದಿಂದ ಸಂಚರಿಸುತ್ತಿದ್ದ ಇಚ್ಲಂಪಾಡಿಯ ಕರ್ತಡ್ಕದ ಜನತೆಯ ಸಂಕಷ್ಟಕ್ಕೆ ಮುಕ್ತಿ ಸಿಕ್ಕಿದ್ದು, ಸೇತುವೆ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧಗೊಂಡಿದೆ.
ಇಚ್ಲಂಪಾಡಿ ಗ್ರಾಮದ 2ನೇ ವಾರ್ಡ್ನ ಕರ್ತಡ್ಕ ಎಂಬಲ್ಲಿ ತೋಡಿಗೆ ಸಂಪರ್ಕ ಸೇತುವೆ ಇಲ್ಲದೇ ಜನತೆ ಮಳೆಗಾಲದಲ್ಲಿ ಅಡಿಕೆ ಮರದ ಪಾಲ ನಿರ್ಮಿಸಿ ಸಂಚರಿಸುತ್ತಿದ್ದರು. ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಸಂಬಂಧಿಸಿದವರು ಸ್ಪಂದಿಸದ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಸೇತುವೆ ಪೂರ್ಣಗೊಂಡಿರುವುದು ಅವರಲ್ಲಿ ಸಂತಸ ಮೂಡಿಸಿದೆ.
ಸೇತುವೆ ನಿರ್ಮಾಣ
ಸ್ಥಳೀಯರ ಬೇಡಿಕೆಯಂತೆ ಸರಕಾರ ಅನುದಾನ ಒದಗಿಸಿ ಸೇತುವೆ ನಿರ್ಮಾಣಕ್ಕೆ ಮುಂದಾಗಿತ್ತು. ಲೋಕೋಪಯೋಗಿ ಇಲಾಖೆಯ ಗ್ರಾಮ ಬಂಧು ಸೇತು ಯೋಜನೆಯಡಿ ಸರ್ವಋತು ಸೇತುವೆ ನಿರ್ಮಾಣಕ್ಕೆ 18 ಲಕ್ಷ ರೂ. ಅನುದಾನ ಮಂಜೂರುಗೊಂಡಿತ್ತು. ಕಳೆದ ಮಾರ್ಚ್ ನಲ್ಲಿ ಸಚಿವ ಎಸ್. ಅಂಗಾರ ಅವರು ಸೇತುವೆ ಕಾಮಗಾರಿಗೆ ಚಾಲನೆ ನೀಡಿದ್ದರು. ಇದೀಗ ಕಾಮಗಾರಿ ಪೂರ್ಣಗೊಂಡು ಇಕ್ಕೆಲಗಳಲ್ಲಿ ಸಂಪರ್ಕ ರಸ್ತೆಯೂ ಪೂರ್ಣಗೊಂಡಿದೆ.
ಸುದಿನ ವರದಿ
ಕರ್ತಡ್ಕದಲ್ಲಿ ಸೇತುವೆ ಇಲ್ಲದೇ ಜನತೆ ಮರದ ಪಾಲದಲ್ಲಿ ಸಂಚರಿಸುವ ಸಮಸ್ಯೆ ಬಗ್ಗೆ ಉದಯವಾಣಿ ಸುದಿನದಲ್ಲಿ 2021ರ ಮಾರ್ಚ್ನಲ್ಲಿ ಸಚಿತ್ರ ವರದಿ ಪ್ರಕಟಿಸಿ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿತ್ತು.