ಸಾಧನೆಗೆ ಅಡ್ಡಿಯಾಗದ ಅಂಧತ್ವ : ಸಮಾಜಕಾರ್ಯ ಪದವಿಯಲ್ಲಿ ಪ್ರಥಮ ರ್ಯಾಂಕ್
Team Udayavani, Feb 28, 2020, 7:15 AM IST
ತಾಯಿ ವಿನೋದಾ ಸಹಾಯದೊಂದಿಗೆ ಪದವಿ ಸ್ವೀಕರಿಸಿದ ನಿತ್ಯಾನಂದ.
ಉಳ್ಳಾಲ: ಬಿಎಸ್ಡಬ್ಲ್ಯೂ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಗಳಿಸಿರುವ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಕಾರ್ಕಳದ ಅತ್ತೂರಿನ ನಿತ್ಯಾನಂದ ಅವರ ಸಾಧನೆಗೆ ಅಂಧತ್ವ ಅಡ್ಡಿಯಾಗಿಲ್ಲ. ಜನ್ಮತಃ ಅಂಧರಾಗಿರುವ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಂಗಳೂರು, ಶಿವಮೊಗ್ಗದಲ್ಲಿ ಪೂರೈಸಿದರು. ಪ.ಪೂ. ಶಿಕ್ಷಣವನ್ನು ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಪೂರೈಸಿದ್ದರು. ಪ್ರಸ್ತುತ ಬೆಂಗಳೂರಿನ ಡಾ| ರೆಡ್ಡೀಸ್ ಫೌಂಡೇಶನ್ ಆಶ್ರಯದಲ್ಲಿ ಕಂಪ್ಯೂ ಟರ್ ಶಿಕ್ಷಣ ಪಡೆಯುತ್ತಿದ್ದಾರೆ.
ಆಳ್ವಾಸ್ ನೆರವು
ಗುರುರಾಜ್, ಪ್ರದೀಪ್ ನನ್ನ ಬಾಲ್ಯ ಸ್ನೇಹಿತರು. ಮೂವರೂ ಅಂಧರು. 1ರಿಂದ ಪದವಿ ಮುಗಿಸಿ ಇಂದು ಕಂಪ್ಯೂಟರ್ ತರಬೇತಿಯಲ್ಲೂ ಜತೆಗಿದ್ದೇವೆ. ನನಗೆ ಪ್ರಥಮ ರ್ಯಾಂಕ್ ಬಂದರೆ ಗುರುರಾಜ್ 2ನೇ ರ್ಯಾಂಕ್, ಪ್ರದೀಪ್ 3ನೇ ರ್ಯಾಂಕ್ ಗಳಿಸಿದ್ದಾರೆ. ಆಳ್ವಾಸ್ ಸಂಸ್ಥೆಯವರು ಮೂವರಿಗೂ
ಉಚಿತ ಶಿಕ್ಷಣ, ಊಟ ವಸತಿ ನೀಡಿರುವುದು ಈ ಸಾಧನೆಗೆ ಸಹಕಾರಿಯಾಯಿತು ಎಂದರು. ತಂದೆ ನಾರಾಯಣ ಪೂಜಾರಿ 10 ವರ್ಷಗಳ ಹಿಂದೆ ನಿಧನ ಹೊಂದಿದ್ದು, ತಾಯಿ ವಿನೋದಾ ಬೀಡಿ ಕಟ್ಟಿ, ಅಂಗನವಾಡಿಯಲ್ಲಿ ದುಡಿದು ನಿತ್ಯಾನಂದ ಸೇರಿದಂತೆ ಮೂವರು ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ.