‘ಪಾಕಿಸ್ಥಾನದಿಂದ ಬಂದ ಹಿಂದೂಗಳಿಗೆ ಭಾರತದ ನಾಗರಿಕತ್ವ ನೀಡಿ’
Team Udayavani, May 6, 2018, 12:44 PM IST
ಮಹಾನಗರ: ಪಾಕಿಸ್ಥಾನದಿಂದ ಭಾರತಕ್ಕೆ ಆಗಮಿಸುವ ಅಲ್ಲಿನ ಹಿಂದೂಗಳಿಗೆ ಭಾರತದ ನಾಗರಿಕತ್ವ ನೀಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.
ಈ ಕುರಿತಂತೆ ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರಿಗೆ ಮನವಿ ನೀಡಿದ ಸಮಿತಿ, ಪಾಕಿಸ್ಥಾನದ ಹಿಂದೂಗಳ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿದೆ. ಬಲವಂತದಿಂದ ಮತಾಂತರ, ಆಕ್ರಮಣಗಳು, ಹಿಂದೂ ಹುಡುಗಿಯರನ್ನು ಅಪಹರಿಸಿ ಅವರೊಂದಿಗೆ ನಿಕಾಹ, ಅತ್ಯಾಚಾರ ಸೇರಿದಂತೆ ಪಾಕಿಸ್ಥಾನದಲ್ಲಿರುವ ಹಿಂದೂಗಳಿಗೆ ಅಲ್ಲಿನ ಜನ ಹಿಂಸೆ ನೀಡುತ್ತಿದ್ದಾರೆ. ಇದರಿಂದ ಬೇಸತ್ತು ಭಾರತಕ್ಕೆ ಬಂದ ಅಲ್ಲಿನ ಹಿಂದೂಗಳನ್ನು ಆಡಳಿತದವರು ಹೊರದಬ್ಬುವ ಪ್ರಯತ್ನದಲ್ಲಿದ್ದಾರೆ. ಇತ್ತೀಚೆಗೆ ಇಂತಹ ನಿರಾಶ್ರಿತರಿಗೆ ದೀರ್ಘಕಾಲದ ಪಾಸ್ಪೋರ್ಟ್ನೀಡದ ಕಾರಣ
ಪಾಕಿಸ್ಥಾನಕ್ಕೆ ಹಿಂದಿರುಗಿದ 500 ಹಿಂದೂಗಳನ್ನು ಬಲವಂತದಿಂದ ಮತಾಂತರಗೊಳಿಸಲಾಗಿದೆ ಎಂದು ಸಮಿತಿ ಆರೋಪಿಸಿದೆ.
ಭಾರತ ಸರಕಾರ ನಿರಾಶ್ರಿತ ಹಿಂದೂಗಳಿಗೆ ಅವರ ಮೂಲ ಆವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸೌಲಭ್ಯಗಳನ್ನು ಒದಗಿಸಬೇಕು. ಅವರಿಗೆ ಭಾರತದ ನಾಗರಿಕತ್ವವನ್ನು ಪಡೆದುಕೊಳ್ಳಲು ಸಹಾಯ ಮಾಡಬೇಕು. ನಿರಾಶ್ರಿತ ಹಿಂದೂಗಳಿಗೆ ಅವರ ಪಾಸ್ಪೋರ್ಟ್ ಮುಗಿದಾಗ ಅಥವಾ ಇತರ ಕಾರಣಗಳಿಂದ ಬಲವಂತದಿಂದ ಪಾಕಿಸ್ಥಾನಕ್ಕೆ ಕಳುಹಿಸಬಾರದು ಎಂದು ಆಗ್ರಹಿಸಿದೆ. ಸಮಿತಿಯ ಮಂಗಳೂರು ಸಮನ್ವಯಕ ಪ್ರಭಾಕರ ನಾಯ್ಕ, ಮಧು ಸೂದನ ಅಯಾರ ಉಪಸ್ಥಿತರಿದ್ದರು.