“ವೈಜ್ಞಾನಿಕ ಅನ್ವೇಷಣೆಗೆ ಇಸ್ರೋದಿಂದಲೂ ನೆರವು’
Team Udayavani, Feb 20, 2021, 4:40 AM IST
ಪಿಲಿಕುಳ : ಯಾವುದೇ ಬಗೆಯ ಹೊಸ ವೈಜ್ಞಾನಿಕ ಅನ್ವೇಷಣೆಗೆ ಇಸ್ರೋ ಸಹಿತ ದೇಶದ ವೈಜ್ಞಾನಿಕ ಸಂಸ್ಥೆಗಳು ಪೂರಕ ನೆರವನ್ನು ನೀಡಲಿದ್ದು, ಈ ದಿಸೆಯಲ್ಲಿ ನವ ವಿಜ್ಞಾನಿಗಳು ಅನ್ವೇಷಣೆಯತ್ತ ಮನಸ್ಸು ಮಾಡಬೇಕು ಎಂದು ಹಿರಿಯ ಲೇಖಕ ಡಾ| ಟಿ.ಆರ್. ಅನಂತರಾಮು ತಿಳಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಹಾಗೂ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಮಂಗಳೂರು ವತಿಯಿಂದ ಫೆ. 21ರ ವರೆಗೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿರುವ “ವಿಜ್ಞಾನ ಸಾಹಿತ್ಯ ಕಮ್ಮಟ’ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ ಸಾಕ್ಷ ರ ಅಗ ತ್ಯ
ವಿಜ್ಞಾನದ ಕುರಿತಂತೆ ಎಲ್ಲರಲ್ಲಿಯೂ ಸಾಕ್ಷರತೆ ಬೇಕು. ಇದಕ್ಕಾಗಿ ವಿಜ್ಞಾನ ಸಂಬಂಧಿತ ವಿಚಾರ ಗಳನ್ನು ಓದುವ, ಆ ಕುರಿತಂತೆ ವಿಶ್ಲೇಷಿಸುವ ಮನೋಭಾವ ಹೊಂದಿರಬೇಕು. ಜತೆಗೆ ಸಮಾಜದಲ್ಲಿ ನಡೆಯುವ ಯಾವುದೇ ಸಂಗತಿಗಳನ್ನು ವಿಜ್ಞಾನದ ಕೋನದಿಂದ ಅವಲೋಕಿಸಿ ಅದಕ್ಕೆ ಬರಹ ರೂಪ ನೀಡಬೇಕು. ಈ ಮೂಲಕ ಸಮಾಜದಲ್ಲಿ ವಿಜ್ಞಾನ ಕುರಿತ ಜಾಗೃತಿ ಮೂಡಿಸಬೇಕು ಎಂದರು.
ಹಿಂದೆ ರೇಬಿಸ್ ಲಸಿಕೆ ಬರಲು ಹಲವು ವರ್ಷ ಬೇಕಾಗಿತ್ತು. ಆದರೆ ಕೊರೊನಾ ಬಂದು ಒಂದು ವರ್ಷದೊಳಗೆ ಭಾರತದಲ್ಲಿ ಲಸಿಕೆ ಬಂದಿದೆ. ಈ ಮೂಲಕ ಭಾರತದ ವಿಜ್ಞಾನ ಕ್ಷೇತ್ರ ಯಾವ ಮಟ್ಟದಲ್ಲಿ ಬದಲಾವಣೆ ಕಾಣುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ| ಬಿ.ವಿ. ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ| ಕೆ.ವಿ. ರಾವ್, ಕಮ್ಮಟದ ನಿರ್ದೇಶಕ ಎಂ.ಎಸ್. ಚೈತ್ರಾ, ಅಕಾಡೆಮಿ ಸದಸ್ಯ ಸಂಚಾಲಕ ಡಾ| ಬಿ.ಎಂ. ಶರಭೇಂದ್ರಸ್ವಾಮಿ ಉಪಸ್ಥಿತರಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್. ಸ್ವಾಗತಿಸಿದರು.
ಇಂದು, ನಾಳೆ ಗೋಷ್ಠಿ, ತರಬೇತಿ ;
ಸಾಹಿತ್ಯ ಕಮ್ಮಟದ ಎರಡನೇ ದಿನ ಶನಿವಾರ ಯೋಗ ಮತ್ತು ಧ್ಯಾನ ಎಂಬ ವಿಷಯದಲ್ಲಿ ತರಬೇತಿ, ವಿಜ್ಞಾನ ಮತ್ತು ಶ್ರೀಸಾಮಾನ್ಯರ ಜನಜೀವನ ಗೋಷ್ಠಿ, ಆಧ್ಯಾತ್ಮಿಕ ಆರೋಗ್ಯ ದರ್ಶನ: ವೈಜ್ಞಾನಿಕ ನೋಟ ಗೋಷ್ಠಿ, ವಿಜ್ಞಾನ, ಮೌಡ್ಯ ಮತ್ತು ವೈಜ್ಞಾನಿಕ ದೃಷ್ಟಿ ಬಗ್ಗೆ ಗೋಷ್ಠಿ, ವಿಜ್ಞಾನ ಮತ್ತು ಭಾಷೆ-ಸಾಹಿತ್ಯ-ಸಂಸ್ಕೃತಿ ಕುರಿತು ವಿಷಯ ಮಂಡನೆಯಾಗಲಿದೆ. ವಿಜ್ಞಾನ ಸಾಹಿತ್ಯದ ರಚನ ವಿನ್ಯಾಸಗಳ ಬಗ್ಗೆ ಗೋಷ್ಠಿ ನಡೆಯಲಿದೆ. ಮೂರನೇ ದಿನ ಶನಿವಾರ ಶಿಬಿರಾರ್ಥಿಗಳಿಗೆ ಯೋಗ ಮತ್ತು ಧ್ಯಾನ ಕುರಿತು ಸಂಗೀತಲಕ್ಷ್ಮೀ ತರಬೇತಿ ನೀಡಲಿದ್ದಾರೆ. ವಿಜ್ಞಾನ ಮತ್ತು ಆರೋಗ್ಯ: ವಿಭಿನ್ನ ಜ್ಞಾನ ಶಾಖೆಗಳ ಸಮನ್ವಯ ಗೋಷ್ಠಿ, ಕನ್ನಡ ವಿಜ್ಞಾನ ಸಾಹಿತಿಗಳು ಮತ್ತು ಅವರ ಕೊಡುಗೆ ಗೋಷ್ಠಿ ನಡೆಯಲಿದ್ದು, ಕಮ್ಮಟದ ನಿರ್ದೇಶಕರು ಶಿಬಿರಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳನ್ನು ನಡೆಸಲಿದ್ದಾರೆ. ಬಳಿಕ ಸಮಾರೋಪ ನಡೆಯಲಿದೆ.