ಮಿಥುನ್ ರೈ ಬಗ್ಗೆ ಜನಾರ್ಧನ ಪೂಜಾರಿಯವರು ನಿಜಕ್ಕೂ ಹೇಳಿದ್ದೇನು?
Team Udayavani, Mar 25, 2019, 6:10 PM IST
ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಆಭ್ಯರ್ಥಿ ಮಿಥುನ್ ರೈ ಅವರು ಸೋತರೆ ನಾನೆಂದೂ ಕುದ್ರೋಳಿ ದೇವಸ್ಥಾನಕ್ಕೆ ಕಾಲಿಡುವುದಿಲ್ಲ ಎಂದು ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಬಿ.ಜನಾರ್ಧನ ಪೂಜಾರಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ನಾಮಪತ್ರ ಸಲ್ಲಿಸಿದರು. ಈ ವೇಳೆ ನಡೆದ ಮೆರವಣಿಗೆಯಲ್ಲಿ ಮಾತನಾಡಿದ ಜನಾರ್ಧನ ಪೂಜಾರಿ ಅವರು, ಈ ಚುನಾವಣೆಯಲ್ಲಿ ಒಂದು ವೇಳೆ ಮಿಥುನ್ ರೈ ಸೋತರೆ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಉಲ್ಲಾಳ ಮಸೀದಿಗೆ ನಾನೆಂದೂ ಕಾಲಿಡುವುದಿಲ್ಲ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಯವರು ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಹಾಲಿ ಸಂಸದ ನಳೀನ್ ಕುಮಾರ್ ಕಟೀಲ್ ಅವರು ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದು, ಅವರು ಕೂಡಾ ಸೋಮವಾರ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ಯುವ ನಾಯಕ, ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಏತನ್ಮಧ್ಯೆ ಮಿಥುನ್ ರೈ ಸೋಲುತ್ತಾರೆ ಎಂದು ಜನಾರ್ದನ ಪೂಜಾರಿ ಅವರು ಶಾಪ ಕೊಟ್ಟಿರುವುದಾಗಿ ನಮ್ಮಲ್ಲಿ ವರದಿಯಾಗಿತ್ತು. ಆದರೆ ಇದು ಸತ್ಯಕ್ಕೆ ದೂರವಾದ ವರದಿ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರರಾದ ವಿನಯ್ ರಾಜ್ ಅವರು ಸ್ಪಷ್ಟಪಡಿಸಿದ್ದಾರೆ. ಕಣ್ತಪ್ಪಿನಿಂದ ಆದ ನಮ್ಮ ವರದಿ ಬಗ್ಗೆ ಈ ಮೂಲಕ ಸ್ಪಷ್ಟನೆ ನೀಡುತ್ತಿದ್ದೇವೆ. ಜನಾರ್ದನ ಪೂಜಾರಿಯವರು ಮಿಥುನ್ ರೈ ಅವರ ಬಗ್ಗೆ ಹೇಳಿದ ಯಥಾವತ್ ವರದಿಯನ್ನು ಇಲ್ಲಿ ನೀಡಲಾಗಿದೆ.