ಮೀನುಗಾರರ ಮನೆ ನಿರ್ಮಾಣ ಯೋಜನೆ ಇಲಾಖೆ ವ್ಯಾಪ್ತಿಗೆ: ಕೋಟ
Team Udayavani, Mar 29, 2020, 5:30 AM IST
ಮಂಗಳೂರು: “ಮತ್ಸ್ಯಾಶ್ರಯ’ ಯೋಜನೆಯಡಿ ಮೀನುಗಾರರ ಮನೆ ನಿರ್ಮಾಣ ಯೋಜನೆಯನ್ನು ಮೀನುಗಾರಿಕಾ ಇಲಾಖೆಗೆ ನೀಡುವ ತೀರ್ಮಾನವನ್ನು ಸಚಿವ ಸಂಪುಟ ಮೂಲಕ ಕೈಗೊಂಡಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಕ್ರಮ ಅಭಿನಂದನೀಯ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಇಲ್ಲಿವರೆಗೆ ನನೆಗುದಿಗೆ ಬಿದ್ದಿದ್ದ “ಮತ್ಸ್ಯಾಶ್ರಯ’ ಯೋಜನೆಯಡಿ ಮೀನುಗಾರರ ಮನೆ ಮಂಜೂರಾತಿ ಪ್ರಕರಣ ಇತ್ಯರ್ಥವಾಗಿದೆ. ಇನ್ನು ಮುಂದೆ ರಾಜೀವ್ ಗಾಂಧಿ ವಸತಿ ನಿಗಮದ ಬದಲು ಮೀನುಗಾರಿಕಾ ಇಲಾಖೆ ವ್ಯಾಪ್ತಿಗೆ ಈ ಯೋಜನೆ ಬರಲಿದೆ. ಇದರಿಂದ ಸುಮಾರು 4 ವರ್ಷಕ್ಕೂ ಹೆಚ್ಚು ಕಾಲ ಇದ್ದ ಗೊಂದಲ ಪರಿಹಾರವಾಗಲಿದೆ.
“ಮತ್ಸ್ಯಾಶ್ರಯ’ ಯೋಜನೆಯಡಿ 3 ಸಾವಿರ ಮೀನುಗಾರರ ಮನೆಗಳು ಮಂಜೂರಾಗಿದ್ದರೂ 2970ಕ್ಕೂ ಹೆಚ್ಚು ಮನೆಗಳು ಆರಂಭವಾಗದೆ ಉಳಿದಿದ್ದು, ಮೀನುಗಾರರು ಮನೆ ಕಟ್ಟಲಾಗದೆ ಸಂಕಷ್ಟ ಪಡುತ್ತಿದ್ದರು. ಇದೀಗ ಯೋಜನೆ ಅನುಷ್ಠಾನವು ಇಲಾಖೆಗೆ ಹಸ್ತಾಂತರವಾಗಿರುವುದರಿಂದ ಇಲಾಖೆ ನೇರವಾಗಿ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಳಿಸಿ ಮೀನುಗಾರರಿಗೆ ಹಂತ ಹಂತವಾಗಿ ಹಣ ಪಾವತಿ ಮಾಡುವ ಅವಕಾಶವಿದ್ದು, ಶೀಘ್ರ ಮನೆ ನಿರ್ಮಾಣ ಸಾಧ್ಯವಾಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾರವಾರ ಬಂದರಿಗೆ 19.5 ಕೋಟಿ ರೂ. ವೆಚ್ಚದಲ್ಲಿ ಅಗ್ನಿಶಾಮಕ ಘಟಕವನ್ನು ಸಚಿವ ಸಂಪುಟ ಮಂಜೂರು ಮಾಡಿರುವುದು ಶ್ಲಾಘನೀಯ ಎಂದು ವಿವರಿಸಿದ್ದಾರೆ.