ಕಡಬ: ಹರತಾಳಕ್ಕೆ ಉತ್ತಮ ಪ್ರತಿಕ್ರಿಯೆ
Team Udayavani, Feb 26, 2017, 3:17 PM IST
ಕಡಬ : ಕೇರಳ ಮುಖ್ಯಮಂತ್ರಿ, ಸಿಪಿಎಂ ನೇತಾರ ಪಿಣರಾಯಿ ವಿಜಯನ್ ಅವರು ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕೋಮು ಸೌಹಾರ್ದ ರ್ಯಾಲಿಯಲ್ಲಿ ಭಾಗವಹಿಸುವುದನ್ನು ವಿರೋಧಿಸಿ ಸಂಘ ಪರಿವಾರ, ವಿವಿಧ ಸಂಘಟನೆಗಳು ಕರೆ ನೀಡಿರುವ ಶನಿವಾರದ ದ.ಕ. ಜಿಲ್ಲಾ ಹರತಾಳಕ್ಕೆ ಕಡಬದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರಕಾರಿ ಕಚೇರಿಗಳನ್ನು ಹೊರತುಪಡಿಸಿ ಕಡಬ ಸಂಪೂರ್ಣ ಮುಚ್ಚಿದ್ದವು.
ಪೇಟೆ ಹಾಗೂ ಪೇಟೆಯ ಹೊರವಲಯದ ಕೋಡಿಂಬಾಳ, ಮರ್ದಾಳ ಮುಂತಾದ ಪ್ರದೇಶಗಳಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ವರ್ತಕರು ಅಂಗಡಿಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಿ ಹರತಾಳಕ್ಕೆ ಬೆಂಬಲ ನೀಡಿದರು. ಕಡಬ ಪೇಟೆಯಲ್ಲಿ ಜನ ಸಂಖ್ಯೆ ವಿರಳವಾಗಿತ್ತು. ಅಲ್ಲೊಂದು ಇಲ್ಲೊಂದು ವಾಹನಗಳ ಓಡಾಟ, ಬೆರಳೆಣಿಕೆಯ ಸರಕಾರಿ ಬಸ್ಗಳು ಓಡಾಟ ನಡೆಸುತ್ತಿದ್ದವು. ಸರಕಾರಿ ಕಚೇರಿಗಳು ತೆರೆದಿದ್ದರೂ ಅಲ್ಲಿ ಕೆಲಸ ಕಾರ್ಯಗಳಿಗಾಗಿ ಆಗಮಿಸಿದ ಜನರು ಕಾಣಿಸುತ್ತಿರಲಿಲ್ಲ. ಶಾಲಾ ಕಾಲೇಜುಗಳು ಎಂದಿನಂತೆ ತೆರೆದಿದ್ದರೂ ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಇತ್ತು. ಕಡಬ ವ್ಯಾಪ್ತಿಯ ಕಲ್ಲುಗುಡ್ಡೆ, ನೆಟ್ಟಣ, ಸುಂಕದಕಟ್ಟೆ, ಪದವು, ರಾಮಕುಂಜ ಮುಂತಾದ ಪ್ರದೇಶದಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಅಲ್ಲಿ ಜನ ಜೀವನ ಎಂದಿನಂತೆ ಇತ್ತು. ಪೊಲೀಸರು ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.