ಕಡಬ: ಬಿಎಸ್ಎಫ್ ಯೋಧರಿಂದ ಪಥಸಂಚಲನ
Team Udayavani, May 4, 2018, 1:42 PM IST
ಕಡಬ: ರಾಜ್ಯ ವಿಧಾನಸಭಾ ಚುನಾವಣೆಯ ವೇಳೆ ಭಯಮುಕ್ತರಾಗಿ ಮತ ಚಲಾಯಿಸಲು ಮತದಾರರಿಗೆ ಧೈರ್ಯ ತುಂಬುವ ಸಲುವಾಗಿ ಬಿಎಸ್ ಎಫ್ ಯೋಧರು ಹಾಗೂ ಸ್ಥಳೀಯ ಪೊಲೀಸರು ಕಡಬ ಪೇಟೆಯ ಮುಖ್ಯರಸ್ತೆಯಲ್ಲಿ ಗುರುವಾರ ಪಥಸಂಚಲನ ನಡೆಸಿದರು.
ಬಿಎಸ್ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಭಗೀರಥ ಬಿಷ್ಣೋಯ್ ಹಾಗೂ ಕಡಬ ಠಾಣಾ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ ಅವರು ಪಥಸಂಚಲನದ ನೇತೃತ್ವ ವಹಿಸಿದ್ದರು. ಮತದಾರರು ಯಾವುದೇ ಭಯ ಅಥವಾ ಒತ್ತಡಗಳಿಲ್ಲದೆ ಮತ ಚಲಾಯಿಸುವಂತಾಗಬೇಕು ಮತ್ತು ಶಾಂತಿಯುತ ಮತದಾನ ನಡೆದು ಚುನಾವಣ ಪ್ರಕ್ರಿಯೆ ಸುಲಲಿತವಾಗಿ ನಡೆಯಬೇಕು ಎನ್ನುವ ನಿಟ್ಟಿನಲ್ಲಿ ಚುನಾವಣ ಆಯೋಗ ಎಲ್ಲ ವ್ಯವಸ್ಥೆಗಳನ್ನು ಮಾಡಿದೆ.
ಮತದಾರರಿಗೆ ರಕ್ಷಣೆ ಒದಗಿಸಲು ಪೊಲೀಸರು ಮತ್ತು ದೇಶದ ರಕ್ಷಣಾ ಪಡೆಗಳು ಸನ್ನದ್ಧವಾಗಿದೆ ಎಂದು ಜನರಿಗೆ ಮನದಟ್ಟು ಮಾಡಿ ಧೈರ್ಯ ತುಂಬುವುದರೊಂದಿಗೆ ಚುನಾವಣ ಅಕ್ರಮ ನಡೆಸಲು ಮುಂದಾಗುವ ಕಾನೂನು ವಿರೋಧಿಗಳಿಗೆ ಎಚ್ಚರಿಕೆ
ನೀಡುವ ಸಲುವಾಗಿ ಪಥಸಂಚಲನ ನಡೆಸಲಾಗುತ್ತಿದೆ.
ಕಡಬ ಠಾಣಾ ವ್ಯಾಪ್ತಿಯ ಕೊಂಬಾರು, ಸಿರಿಬಾಗಿಲು ಹಾಗೂ ಬಿಳಿನೆಲೆಯ ಕೆಲವು ಭಾಗಗಳನ್ನು ನಕ್ಸಲ್ ಪೀಡಿದ ಪ್ರದೇಶಗಳೆಂದು ಗುರುತಿಸಿರುವ ಹಿನ್ನೆಲೆಯಲ್ಲಿ, ಅಲ್ಲಿನ ಮತಗಟ್ಟೆಗಳಲ್ಲಿ ನಕ್ಸಲ್ ನಿಗ್ರಹ ಪಡೆಯೂ ರಕ್ಷಣೆಯ ಕರ್ತವ್ಯ ನಿರ್ವಹಿಸಲಿದೆ ಎಂದು ಪೊಲೀಸ್ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ ತಿಳಿಸಿದರು. ಕಡಬದಲ್ಲಿ ಬಿಎಸ್ಎಫ್ ಯೋಧರು ಹಾಗೂ ಪೊಲೀಸರು ಪಥಸಂಚಲನ ನಡೆಸಿದರು.