ಕೆಂಪಿಮಜಲು: ನದಿ ನೀರು ತಡೆದಿದ್ದ ಮರಳು ಚೀಲಗಳ ತೆರವು
Team Udayavani, May 9, 2019, 5:50 AM IST
ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಗಡಿ ಗ್ರಾಮವಾದ ಇಳಂತಿಲ – ಉಪ್ಪಿನಂಗಡಿ ನಡುವೆ ನೇತ್ರಾವತಿ ನದಿಯಲ್ಲಿ ಕೆಂಪಿಮಜಲು ಎಂಬಲ್ಲಿ ನೀರಿನ ಹರಿವನ್ನು ತಡೆಯಲು ಇರಿಸಿದ್ದ ಮರಳು ಹಾಗೂ ಚರಳಿನ ಗೋಣಿ ಚೀಲಗಳನ್ನು ಕಾಮಗಾರಿ ಮೂಲಕ ತೆರವುಗೊಳಿಸಲಾಗಿದೆ.
ನದಿಯಲ್ಲಿ ಹರಿಯುವ ನೀರಿಗೆ ಖಾಸಗಿ ವ್ಯಕ್ತಿಗಳು ತಡೆಯೊಡ್ಡಿದ್ದರಿಂದ ಇಳಂತಿಲ ಗ್ರಾಮದ ಕಡವಿನಬಾಗಿಲು ಬಳಿ ಪಂಚಾಯತ್ ನಿರ್ಮಿಸಿದ ಭಾರೀ ಗಾತ್ರದ ಬಾವಿ ಬತ್ತಿ ಹೋಗುವ ಆತಂಕ ಎದುರಾಗಿತ್ತು. ಇದರಿಂದ ಎಚ್ಚೆತ್ತ ಇಳಂತಿಲ ಗ್ರಾ.ಪಂ. ಅಧ್ಯಕ್ಷ ಇಸುಬು ಪೆದಮಲೆ ಹಾಗೂ ಸದಸ್ಯ ಯು.ಟಿ. ಫಯಾಜ್ ಅಹಮ್ಮದ್ ಅವರು ನದಿ ನೀರಿನ ಹರಿವಿಗೆ ತಡೆಯಾಗಿರುವ ಕಾರಣವನ್ನು ಪತ್ತೆಹಚ್ಚಿದರು. ಕೆಂಪಿಮಜಲು ಎಂಬಲ್ಲಿ ಮರಳಿನ ಹಾಗೂ ಚರಳಿನ ಚೀಲವನ್ನು ನೀರಿಗೆ ಅಡ್ಡಲಾಗಿ ಇರಿಸಿದ್ದನ್ನು ಗಮನಿಸಿ, ತತ್ಕ್ಷಣವೇ ಜೆಸಿಬಿ ಹಾಗೂ ಕಾರ್ಮಿಕರನ್ನು ಕರೆಸಿ, ಸತತ ಆರು ಗಂಟೆಗಳ ಕಾಲ ಕೆಲಸ ನಿರ್ವಹಿಸಿ, ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾರೆ. ಈ ಪ್ರಯತ್ನದಿಂದಾಗಿ ನದಿ ಪಕ್ಕದಲ್ಲಿ ಗ್ರಾ.ಪಂ. ನಿರ್ಮಿಸಿರುವ ಕಾಂಕ್ರೀಟ್ ಬಾವಿಗೆ ನೀರು ಹರಿದಿದೆ.
ಸುಮಾರು 200ಕ್ಕೂ ಹೆಚ್ಚು ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಆಗುವುದನ್ನು ಮನಗಂಡು ಈ ಕಾರ್ಯಾಚರಣೆ ನಡೆಸಿದ್ದಾಗಿ ಅಧ್ಯಕ್ಷರು ತಿಳಿಸಿದ್ದಾರೆ.