ಕುಕ್ಕೆ: ನೀರಿನಲ್ಲಿ ಬಂಡಿ ಉತ್ಸವ ಜಾತ್ರೆ ಸಂಪನ್ನ
Team Udayavani, Dec 22, 2018, 11:52 AM IST
ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ಗುರುವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಮುಕ್ತಾಯಗೊಂಡಿತು. ಬೆಳಗ್ಗೆ ಕೊಪ್ಪರಿಗೆಯನ್ನು ಇಳಿಸಲಾಯಿತು. ಜಾತ್ರೆಯ ಕೊನೆಯ ಉತ್ಸವವಾಗಿ ರಾತ್ರಿ ನೀರಿನಲ್ಲಿ ಶ್ರೀ ದೇವರ ಬಂಡಿ ಉತ್ಸವ ನೆರವೇರಿತು.
ಶ್ರೀ ದೇಗುಲದ ಹೊರಾಂಗಣದ ಸುತ್ತ ನೀರನ್ನು ತುಂಬಿಸಲಾಗಿತ್ತು. ರಾತ್ರಿ ಮಹಾ ಪೂಜೆಯ ಬಳಿಕ ನೀರಿನಲ್ಲಿ ಪಾಲಕಿ ಉತ್ಸವ ನೆರವೇರಿತು. ನೀರಿನಲ್ಲಿ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ರಥೋತ್ಸವ ನಡೆಯಿತು. ಈ ಉತ್ಸವದೊಂದಿಗೆ ಚಂಪಾಷಷ್ಠಿ ಉತ್ಸವಗಳು ಮುಕ್ತಾಯಗೊಂಡವು. ಬೆಳಗ್ಗೆ ಸುಮುಹೂರ್ತದಲ್ಲಿ ಕೊಪ್ಪರಿಗೆ ಇಳಿಯಿತು. ಆ ಬಳಿಕ ಮಹಾ ಸಂಪ್ರೋಕ್ಷಣ ಹೋಮ ನೆರವೇರಿತು.
ಶ್ರೀ ದೇಗುಲದ ಆನೆ ಯಶಸ್ವಿ ಹೊರಾಂಗಣದಲ್ಲಿ ತುಂಬಲಾದ ನೀರಿನಲ್ಲಿ ಆಟವಾಡಿ ಸಂಭ್ರಮಿಸಿತು. ಮಕ್ಕಳ ಮೇಲೆ ತನ್ನ ಕಾಲು ಹಾಗೂ ಸೊಂಡಿಲಿನಿಂದ ನೀರು ಎರಚಿ ಖುಷಿಪಡಿಸಿತು. ಶ್ರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಇಒ ರವೀಂದ್ರ ಎಂ.ಎಚ್., ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಮಹೇಶ್ ಕುಮಾರ್ ಕೆ.ಎಸ್. ಕರಿಕ್ಕಳ, ಕೃಷ್ಣಮೂರ್ತಿ ಭಟ್, ಬಾಲಕೃಷ್ಣ ಬಳ್ಳೇರಿ, ರವೀಂದ್ರನಾಥ ಶೆಟ್ಟಿ, ಮಾಧವ ಡಿ., ದಮಯಂತಿ ಕೂಜುಗೋಡು ಕೆ.ಎಸ್., ರಾಜೀವಿ ಆರ್. ರೈ, ಮಾಸ್ಟರ್ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಶಿವರಾಮ ರೈ, ದೇಗುಲದ ಹೆಬ್ಟಾರ್ ಷಣ್ಮುಖ ಉಪಾರ್ಣ, ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್ ಸಹಿತ ಭಕ್ತರು ಉಪಸ್ಥಿತರಿದ್ದರು. ಜಾತ್ರೆಯ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಶ್ರೀ ದೇಗುಲದ ವಿಶೇಷ ಸೇವೆಗಳಲ್ಲಿ ಒಂದಾದ ಸರ್ಪ ಸಂಸ್ಕಾರ ಶುಕ್ರವಾರ ಕೊಪ್ಪರಿಗೆ ಇಳಿದ ಬಳಿಕ ಪುನರಾರಂಭಗೊಂಡವು.