ಸುಬ್ರಹ್ಮಣ್ಯ: ಇಂದು ಚಂಪಾಷಷ್ಠಿ ಉತ್ಸವ
Team Udayavani, Dec 2, 2019, 6:05 AM IST
ಸುಬ್ರಹ್ಮಣ್ಯ: ನಾಗಾರಾಧನೆಯ ಪ್ರಸಿದ್ಧ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಸಂಭ್ರಮದ ಚಂಪಾ ಷಷ್ಠಿ ಮಹೋತ್ಸವ ಡಿ. 3ರಂದು ನಡೆಯಲಿದೆ. ನೂತನ ಬ್ರಹ್ಮರಥದ ಸಮರ್ಪಣೆಯೂ ಇದೇ ವೇಳೆ ನಡೆಯಲಿದೆ. ದೇವರ ಬ್ರಹ್ಮರಥಾರೋಹಣದ ಬಳಿಕ ಮಹಾರಥೋತ್ಸವವು ಬೆಳಗ್ಗೆ 8.14ಕ್ಕೆ ನೆರವೇರಲಿದೆ.
400 ವರ್ಷಗಳ ಬಳಿಕ ಬ್ರಹ್ಮರಥವು ಸಮರ್ಪಣೆಯಾಗುತ್ತಿರುವುದು ಭಕ್ತರಲ್ಲಿ ಕಾತರ ಮೂಡಿಸಿದೆ. ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎನ್. ಮುತ್ತಪ್ಪ ರೈ ದೇರ್ಲ ಹಾಗೂ ಉದ್ಯಮಿ ಅಜಿತ್ ಶೆಟ್ಟಿ ಅವರು 2.5 ಕೋಟಿ ರೂ. ವೆಚ್ಚದಲ್ಲಿ ಬ್ರಹ್ಮರಥವನ್ನು ಸಮರ್ಪಿಸಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಲ್ಪಿ ಕೋಟೇಶ್ವರ ಲಕ್ಷ್ಮೀ ನಾರಾಯಣ ಆಚಾರ್ಯ ಅವರು ರಥವನ್ನು ನಿರ್ಮಿಸಿದ್ದಾರೆ. ಮಹಾಭಾರತ ಹಾಗೂ ರಾಮಾಯಣಗಳ ಅಪೂರ್ವ ಕಲಾಕೃತಿಯನ್ನು ರಥದಲ್ಲಿ ಕೆತ್ತಲಾಗಿದೆ.
ಮಳೆಯ ಸಿಂಚನ
ಪಂಚಮಿ ರಥೋತ್ಸವ ನಡೆಯುವ ರವಿವಾರ ಸುಬ್ರಹ್ಮಣ್ಯ ಕ್ಷೇತ್ರದಲ್ಲೆ ಮಧ್ಯಾಹ್ನದ ವೇಳೆ ಮಳೆಯಾಗಿದೆ. ಬೀದಿ ಮಡೆಸ್ನಾನ ನಡೆಸುವ ಭಕ್ತರಿಗೆ ಬಿಸಿಲಿನಿಂದ ರಕ್ಷಣೆ ಸಿಕ್ಕಿತಾದರೂ ದಿಢೀರನೆ ಸುರಿದ ಮಳೆಯಿಂದ ಜಾತ್ರೆ ಸಿದ್ಧತೆಗಳಿಗೆ ತುಸು ಅಡ್ಡಿಯಾಯಿತು. ಪಂಚಮಿ ದಿನ ಕೂಡ ದೇವಸ್ಥಾನದಲ್ಲಿ ಎಡೆಸ್ನಾನ ನೆರವೇರಿತು.ರವಿವಾರ 399 ಭಕ್ತರು ಎಡೆಸ್ನಾನ ನೆರವೇರಿಸಿದರು.
ಭಕ್ತರಿಂದ ಅನ್ನದಾನ
ಚಂಪಾಷಷ್ಠಿಯಂದು ಬೆಂಗಳೂರಿನ ಉದ್ಯಮಿ ವೆಂಕಟೇಶ್ 50 ಸಾವಿರ ಮಂದಿಗೆ 10 ಲಕ್ಷ ರೂ. ವೆಚ್ಚದಲ್ಲಿ ಅನ್ನಪ್ರಸಾದ ವಿತರಿಸಲಿದ್ದಾರೆ. ದೇವಸ್ಥಾನದ ವತಿಯಿಂದ ಎರಡು ಹೊತ್ತುಭೋಜನ ವ್ಯವಸ್ಥೆ ಇರುತ್ತದೆ.