ಕುಕ್ಕೆ: ಸಂಭ್ರಮದ ಚಂಪಾಷಷ್ಠಿ ಮಹಾರಥೋತ್ಸವ ಸಂಪನ್ನ
Team Udayavani, Dec 2, 2019, 7:30 PM IST
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ 8.14ರ ಧನುರ್ ಲಗ್ನದ ಸುಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಚಂಪಾಷಷ್ಠಿ ಬ್ರಹ್ಮರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನೆರವೇರಿತು.ಲಕ್ಷಾಂತರ ಭಕ್ತ ಜನ ಸಾಗರದ ನಡುವೆ ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ಚಂಪಾಷಷ್ಠಿ ಮಹಾರಥೋತ್ಸವ ಸಂಪನ್ನಗೊಂಡಿತು.
400 ವರ್ಷಗಳ ಬಳಿಕ ದೇವರಿಗೆ ನೂತನ ಬ್ರಹ್ಮರಥದ ಸಮರ್ಪಣೆ ನಡೆದಿದ್ದು, ಪ್ರಧಾನ ಅರ್ಚಕ ವೇ|ಮೂ| ಸೀತಾರಾಮ ಎಡಪಡಿತ್ತಾಯರು ವೈದಿಕ ವಿಧಿಗಳನ್ನು ನೆರವೇರಿಸಿದರು. ವರ್ಷಕ್ಕೊಮ್ಮೆ ನಡೆಯುವ ಬ್ರಹ್ಮರಥೋತ್ಸವ ಸೇವೆಗೆ 99 ಭಕ್ತರು ನೋಂದಾಯಿಸಿದ್ದರು.
ರಥೋತ್ಸವದ ಮೊದಲು ದೇವಸ್ಥಾನದ ಹೊರಾಂಗಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಪಾಲಕಿ ಉತ್ಸವ ನೆರವೇರಿತು. ರಥೋತ್ಸವದ ಬಳಿಕ ಉಮಾಮಹೇಶ್ವರ ಹಾಗೂ ಸುಬ್ರಹ್ಮಣ್ಯ ದೇವರಿಗೆ ಷಷ್ಠಿ ಕಟ್ಟೆಯಲ್ಲಿ ವಿಶೇಷಪೂಜೆ ನೆರವೇರಿತು. ದೇವರು ಗರ್ಭಗುಡಿಗೆ ಪ್ರವೇಶಿಸಿದ ಅನಂತರ ಪ್ರಧಾನ ಅರ್ಚಕರು ಮೂಲಪ್ರಸಾದ ವಿತರಿಸಿದರು.
ಮಹಿಳಾ ಅಧಿಕಾರಿಗಳ ನೇತೃತ್ವ
ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿ ಮಹೋತ್ಸವದ ವೇಳೆ ಮೂರು ವಿಭಾಗಗಳಲ್ಲಿ ಮಹಿಳಾ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡಿದ್ದರು. ಜಿಲ್ಲಾಧಿಕಾರಿಯಾಗಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ. ಪಿಎಸ್ಐ ಆಗಿ ಓಮನಾ ಈ ಮೂರು ಮಂದಿ ಮಹಿಳಾ ಅಧಿಕಾರಿಗಳ ನೇತೃತ್ವದಲ್ಲಿ ಜಾತ್ರೆ ಯಾವುದೇ ಗೊಂದಲವಿಲ್ಲದೆ ಯಶಸ್ವಿಯಾಗಿ ನಡೆದಿದೆ.
309 ಭಕ್ತರಿಂದ ಎಡೆಸ್ನಾನ
ಷಷ್ಠಿ ಮಹೋತ್ಸವದ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ರಾಜ್ಯ, ಹೊರರಾಜ್ಯಗಳಿಂದ ಆಗಮಿಸಿದ್ದ 309 ಭಕ್ತರು ಜಾತಿ-ಮತ, ವಯಸ್ಸಿನ ಭೇದವಿಲ್ಲದೆ ಎಡೆಸ್ನಾನ ನೆರವೇರಿಸಿದರು. ದೇಗುಲದ ಹೊರಾಂಗಣದ ಸುತ್ತಲೂ ಬಾಳೆ ಎಲೆಗಳಲ್ಲಿ ಅನ್ನಪ್ರಸಾದವನ್ನು ಬಳಸಿ ದೇಗುಲದ ಹಸುಗಳಿಂದ ತಿನ್ನಿಸಲಾಗುತ್ತದೆ. ಮಿಕ್ಕುಳಿದ ಉಚ್ಛಿಷ್ಟದ ಮೇಲೆ ಭಕ್ತರು ಉರುಳು ಸೇವೆ ಸಲ್ಲಿಸುವುದರಿಂದ ಚರ್ಮರೋಗ ಇತ್ಯಾದಿ ಕಾಯಿಲೆಗಳು ನಿವಾರಣೆಯಾಗುತ್ತವೆ ಎಂಬುದು ನಂಬಿಕೆ. ಮೊದಲೆಲ್ಲ ಭಕ್ತರು ಉಂಡೆದ್ದ ಎಂಜಲು ಎಲೆಯ ಮೇಲೆಯೇ ಮಡೆ ಮಡಸ್ನಾನ ಹೆಸರಿನಲ್ಲಿ ಸೇವೆ ನಡೆಯುತ್ತಿತ್ತು. ಅದಕ್ಕೆ ಪ್ರಗತಿಪರರ ವಿರೋಧದ ಹಿನ್ನೆಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಎಡೆಸ್ನಾನದ ರೂಪ ನೀಡಲಾಗಿದೆ.
ಪಂಚಮಿ ರಥೋತ್ಸವ
ರವಿವಾರ ರಾತ್ರಿ ಪಂಚಮಿ ರಥೋತ್ಸವ ನಡೆಯಿತು. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ದೇವಸ್ಥಾನಕ್ಕೆ ಆಗಮಿಸಿ ಜಾತ್ರೆ ಕುರಿತು ಅಂತಿಮ ಸುತ್ತಿನ ಸಿದ್ಧತೆ ಪರಿಶೀಲಿಸಿ ತೆರಳಿದರು.