ಕುಕ್ಕೆ: ಕೊಪ್ಪರಿಕೆ ಇಳಿದು ಜಾತ್ರೆ ಸಮಾಪನ, ಬಂಡಿ ಉತ್ಸವ
ಕುಕ್ಕೆ: ದೇವಸ್ಥಾನದ ಹೊರಾಂಗಣದ ನೀರಿನಲ್ಲಿ ಯಶಸ್ವಿ ಆನೆ ನೀರಾಟ
Team Udayavani, Dec 9, 2019, 10:00 PM IST
ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ವಾರ್ಷಿಕ ಜಾತ್ರಾ ಉತ್ಸವವು ಸೋಮವಾರ ಮುಂಜಾನೆ ಕೊಪ್ಪರಿಗೆ ಇಳಿಯುವುದರೊಂದಿಗೆ ಸಮಾಪನಗೊಂಡಿತು.
ಜಾತ್ರೆಯ ಕೊನೆಯ ಉತ್ಸವವಾಗಿ ರಾತ್ರಿ ನೀರಿನಲ್ಲಿ ಬಂಡಿ ಉತ್ಸವ ನೆರವೇರಿತು. ದೇಗುಲದ ಹೊರಾಂಗಣದ ಸುತ್ತ ನೀರನ್ನು ಬೆಳಗ್ಗೆಯಿಂದಲೇ ತುಂಬಿಸಲಾಯಿತು. ನೀರು ತುಂಬಿಸಿದ ಬಳಿಕ ರಾತ್ರಿ ಮಹಾಪೂಜೆ ನಡೆಯಿತು.
ಬಳಿಕ ದೀಪಾರಾಧನೆಯುಕ್ತ ನೀರಿನಲ್ಲಿ ಪಾಲಕಿ ಉತ್ಸವ, ನೀರಿನಲ್ಲಿ ದೇವರ ಶೇಷವಾಹನಯುಕ್ತ ಬಂಡಿ ರಥೋತ್ಸವ ನೆರವೇರಿತು.
ಸೋಮವಾರ ಬೆಳಗ್ಗೆ ಕೊಪ್ಪರಿಗೆ ಇಳಿಸಿದ ಬಳಿಕ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಅವರ ನೇತೃತ್ವದಲ್ಲಿ ಮಹಾ ಸಂಪ್ರೋಕ್ಷಣ ಹೋಮ ನೆರವೇರಿತು. ಬಳಿಕ ತಡರಾತ್ರಿ ಭೂತದ ನರ್ತನ ನಡೆಯಿತು. ಮಂಗಳವಾರ ಮುಂಜಾನೆ ದೈವವು ಕುಮಾರಧಾರಾ ಮತ್ಸéತೀರ್ಥಕ್ಕೆ ತೆರಳಿ ಮೀನುಗಳಿಗೆ ಅಕ್ಕಿ ಹಾಕಿ ಬರುವ ಪೂರ್ವಸಂಪ್ರದಾಯ ನಡೆಯಲಿದೆ.
ಯಶಸ್ವಿ ಆನೆಯ ನೀರಾಟ
ದೇವಸ್ಥಾನದ ಆನೆ ಯಶಸ್ವಿಯು ಹೊರಾಂಗಣದಲ್ಲಿ ತುಂಬಿಸಿದ್ದ ನೀರಿನಲ್ಲಿ ನೀರಾಟವಾಡಿ ಸಂಭ್ರಮಿಸಿತು. ಹೊರಾಂಗಣದ ನೀರಿನಲ್ಲಿ ನೀರಾಟವಾಡಿ ಪುಟಾಣಿ ಮಕ್ಕಳ ಮೇಲೆ ಕಾಲು ಹಾಗೂ ಸೊಂಡಿಲಿನಿಂದ ನೀರು ಎರಚಿ ಖುಷಿ ಪಟ್ಟಿತು. ಆನೆಯ ಜತೆ ನೀರಾಟವಾಡಿ ಮಕ್ಕಳು, ಭಕ್ತರು ಸಂಭ್ರಮಿಸಿದರು.
ಸರ್ಪ ಸಂಸ್ಕಾರ ಸೇವೆ ಆರಂಭ
ಜಾತ್ರೆ ಅವ ಧಿಯಲ್ಲಿ ಸ್ಥಗಿತಗೊಂಡಿದ್ದ ಸರ್ಪ ಸಂಸ್ಕಾರ ಸೇವೆ ಡಿ. 10ರಿಂದ ಆರಂಭಗೊಳ್ಳಲಿದೆ. ಮಂಗಳವಾರದಿಂದ ದೇವಸ್ಥಾನದಲ್ಲಿ ಎಲ್ಲ ಸೇವೆಗಳು ಸಂಪ್ರದಾಯದಂತೆ ನಡೆಯಲಿವೆ.