ಕುಕ್ಕೆ ಸುಬ್ರಹ್ಮಣ್ಯ: ವೈದ್ಯಕೀಯ ಚಿಕಿತ್ಸೆಗೆ ದೂರದ ಊರೇ ಗತಿ
ದೇವಸ್ಥಾನದ ವತಿಯಿಂದ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಬೇಡಿಕೆ
Team Udayavani, Nov 4, 2020, 12:55 PM IST
ಸುಬ್ರಹ್ಮಣ್ಯ, ನ. 3: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆರೋಗ್ಯ ಸಮಸ್ಯೆಯಾದಲ್ಲಿ ವೈದ್ಯಕೀಯ ಚಿಕಿತ್ಸೆಗಳಿಗೆ ಇಂದಿಗೂ ದೂರದ ಊರಿಗೆ ತೆರಳಬೇಕಾಗಿದ್ದು, ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದಲೇ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡ ಬೇಕೆಂಬ ಬೇಡಿಕೆ ಇದೀಗ ಹುಟ್ಟಿಕೊಂಡಿದೆ. ಈ ಬಗ್ಗೆ ಸ್ಥಳೀಯರು ಪೂರ್ವಭಾವಿ ಸಭೆ ನಡೆಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ಪ್ರಸಿದ್ಧ ಯಾತ್ರಾ ಕ್ಷೇತ್ರ ವಾಗಿರುವುದರಿಂದ ದಿನಂಪ್ರತಿ ಸಾವಿರಾರು ಜನರು ಆಗಮಿಸುತ್ತಿರುತ್ತಾರೆ. ಅನಾರೋಗ್ಯ, ಅಪಘಾತ ಉಂಟಾದಲ್ಲಿ ಚಿಕಿತ್ಸೆಗಳಿಗೆ ಸುಸಜ್ಜಿತ ಆಸ್ಪತ್ರೆ ಇಲ್ಲಿಲ್ಲ. ಪುತ್ತೂರು, ಸುಳ್ಯ, ಮಂಗಳೂರಿಗೆ ತೆರಳಬೇಕಾಗಿದ್ದು, ಇಲ್ಲಿನವರಿಗೆ ಸಮಸ್ಯೆಯಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರ :
ಪ್ರಸ್ತುತ ಕುಕ್ಕೆ ಸುಬ್ರಹ್ಮಣ್ಯದ ಪರ್ವತ ಮುಖೀ ಬಳಿ ಆರೋಗ್ಯ ಇಲಾಖೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯಾ ಚರಿಸುತ್ತಿದ್ದು, 4 ಎಕ್ರೆ ಜಾಗ ಇದ್ದು, ಉತ್ತಮ ಕಟ್ಟಡವನ್ನು ಹೊಂದಿದೆ. ಇಲ್ಲಿ ಪ್ರಾಥ ಮಿಕ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಓರ್ವ ವೈದ್ಯಾಧಿಕಾರಿ, ಇತರ ಸಿಬಂದಿ ಕರ್ತವ್ಯದಲ್ಲಿದ್ದಾರೆ. ಹರಿಹರ, ಐನೆಕಿದು, ಬಾಳುಗೋಡು, ಸುಬ್ರಹ್ಮಣ್ಯ, ಏನೆಕಲ್ಲು, ಬಳ್ಪ, ಕೇನ್ಯ ಗ್ರಾಮಗಳು ಸುಬ್ರ ಹ್ಮಣ್ಯ ಪ್ರಾ.ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿವೆ.
ಅನುದಾನ ಮಂಜೂರು :
ಕುಕ್ಕೆ ಸುಬ್ರಹ್ಮಣ್ಯ ಪೇಟೆಯಲ್ಲಿಯೇ ಸುಬ್ರಹ್ಮಣ್ಯ ಪ್ರಾ.ಆ. ಕೇಂದ್ರದ ಒಪಿಡಿ ಬ್ಲಾಕ್ ಕಟ್ಟಡ ನಿರ್ಮಾಣಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 1.04 ಕೋಟಿ ರೂಪಾಯಿ ಅನುದಾನ ಮಂಜೂರು ಗೊಂಡಿದ್ದು, ಟೆಂಡರ್ ನಡೆ ದಿದೆ. ಇದರಲ್ಲಿ 6 ಬೆಡ್ ವ್ಯವಸ್ಥೆ ಇರಲಿದೆ. ಆಸ್ಪತ್ರೆ ಮೇಲ್ದರ್ಜೆಗೇರಿಸುವ ಪ್ರಸ್ತಾವ ಇಲ್ಲ.
ಸುಸಜ್ಜಿತ ಆಸ್ಪತ್ರೆ ಬೇಡಿಕೆ :
ಅತ್ಯಂತ ಶ್ರೀಮಂತ ದೇವಸ್ಥಾನ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರಾಥಮಿಕ ಹಂತದ ಚಿಕಿತ್ಸೆಗಳು ಮಾತ್ರ ಲಭ್ಯ. ಸುಬ್ರ ಹ್ಮಣ್ಯ ವ್ಯಾಪ್ತಿಯ ಸಾರ್ವಜನಿಕರಿಗೆ, ಯಾತ್ರಿಕರಿಗೆ ಅನುಕೂಲವಾಗುವಂತೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದಲೆ ಸುಸಜ್ಜಿತ 10 ಬೆಡ್ಗಳ ಆಸ್ಪತ್ರೆ ನಿರ್ಮಿಸಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಸಂಘಸಂಸ್ಥೆಗಳ ನೇತೃತ್ವದಲ್ಲಿ ಸಭೆಗಳನ್ನು ನಡೆಸಿ ಬೇಡಿಕೆ ಸಲ್ಲಿಸಿದ್ದಾರೆ.
ಉದ್ಯಮಿ ರವಿ ಕಕ್ಕೆಪದವು ನೇತೃತ್ವದ ಪರ್ವತಮುಖೀ ಫ್ರೆಂಡ್ಸ್, ಸುಬ್ರಹ್ಮಣ್ಯ ಯುವಬ್ರಿಗೇಡ್, ಜೇಸಿಐ, ರೋಟರಿ, ಕುಕ್ಕೆ ಸಂಜೀವಿನಿ ಟ್ರಸ್ಟ್ ಸೇರಿದಂತೆ ಸ್ಥಳೀಯ ಸಂಘಸಂಸ್ಥೆಗಳು, ಗ್ರಾಮಸ್ಥರ ನೇತೃತ್ವದಲ್ಲಿ ಸುಸಜ್ಜಿತ ಆಸ್ಪತ್ರೆ ಬೇಡಿಕೆ ಸಲ್ಲಿಸಲು ಪೂರ್ವಭಾವಿ ಸಭೆ ನ. 8ರಂದು ನಡೆಯಲಿದ್ದು, ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಆಗ್ರಹಿಸಿ ಸರಕಾರ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಚರ್ಚಿಸಲಾಗುವುದು ಎಂದು ಪ್ರಮುಖರು ತಿಳಿಸಿದ್ದಾರೆ.
ಸರಕಾರದ ಪ್ರಸ್ತುತ ಪಾಲಿಸಿ ಮ್ಯಾಟರ್ನಲ್ಲಿ ರಾಜ್ಯದಲ್ಲಿ 7-8 ವರ್ಷಗಳಿಂದ ಯಾವುದೇ ಪ್ರಾ.ಆ.ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿಲ್ಲ. ಜತೆಗೆ ವೈದ್ಯರ ಕೊರತೆಯೂ ಕಾಡುತ್ತಿದೆ. –ರಾಮಚಂದ್ರ ಬಾಯಿರಿ ದ.ಕ. ಜಿಲ್ಲಾ ವೈದ್ಯಾಧಿಕಾರಿ
ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಿ ಅಥವಾ ಸರಕಾರ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲಿ. –ರವಿ ಕಕ್ಕೆಪದವು, ಸಾಮಾಜಿಕ ಕಾರ್ಯಕರ್ತ, ಸುಬ್ರಹ್ಮಣ್ಯ
–ದಯಾನಂದ ಕಲ್ನಾರ್