ಕುಕ್ಕೆ: ಪುಣ್ಯ ನದಿಗಳ ಒಡಲು ಸೇರುತ್ತಿದೆ ತ್ಯಾಜ್ಯ
Team Udayavani, Nov 9, 2018, 9:58 AM IST
ಸುಬ್ರಹ್ಮಣ್ಯ: ಧಾರ್ಮಿಕ ಕ್ಷೇತ್ರ ಸುಬ್ರಹ್ಮಣ್ಯದ ಸಮಗ್ರ ಅಭಿವೃದ್ಧಿಗೆ ಈ ಹಿಂದೆ ಜಾರಿಗೆ ತಂದ ಮಾಸ್ಟರ್ ಪ್ಲಾನ್ನಲ್ಲಿ ಅಳವಡಿಸಿದ ಒಳಚರಂಡಿ ವ್ಯವಸ್ಥೆಯ ಪೈಪ್ ಗಳು ಶಿಥಿಲಗೊಂಡು ಒಡೆದು ಕೊಳಚೆ ನೀರು ಸೋರಿಕೆಯಾಗುತ್ತಿವೆ. ಅದು ನದಿ ಪಾತ್ರ ಸೇರಿ ಪುಣ್ಯ ನದಿಗಳು ಮಲಿನಗೊಂಡಿವೆ.
ದೇವಸ್ಥಾನದ ಪಕ್ಕದಲ್ಲೆ ಹರಿಯುವ ಪವಿತ್ರ ದರ್ಪಣ ತೀರ್ಥ ನದಿ ಮಧ್ಯದಲ್ಲೇ ಒಳಚರಂಡಿ ಪೈಪ್ ಗಳು ಹಾದುಹೋಗಿವೆ. ನದಿ ಉದ್ದಕ್ಕೂ ಮಧ್ಯೆ ಅಲ್ಲಲ್ಲಿ ಬೃಹತ್ ಗಾತ್ರದ ಚೇಂಬರ್ಗಳನ್ನು ನಿರ್ಮಿಸಲಾಗಿವೆ. ಈ ಚೇಂಬರ್ಗಳು ಮತ್ತು ಪೈಪುಗಳು ಶಿಥಿಲಗೊಂಡಿವೆ. ಇದರಿಂದ ಸೋರಿಕೆ ಉಂಟಾಗಿ ಕೊಳಚೆ ನೀರು ಪವಿತ್ರ ದರ್ಪಣ ನದಿಯನ್ನು ಸೇರುತ್ತಿವೆ.
ಆದಿಸುಬ್ರಹ್ಮಣ್ಯ ಭಾಗದಿಂದ ಹರಿದು ದರ್ಪಣ ತೀರ್ಥ ನದಿ ಹರಿದು ಬರುವ ದೇವರಗದ್ದೆಗೆ ತೆರಳುವ ಸೇತುವೆ ಕೆಳಭಾಗ, ರುದ್ರಪಾದ ಭಾಗಕ್ಕೆ ತೆರಳುವ ಸ್ಥಳಗಳಲ್ಲಿ ಹಾಗೂ ನದಿಯುದ್ದಕ್ಕೂ ಭಾರಿ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹಗೊಂಡು ಗಬ್ಬೆದ್ದು ಹೋಗಿವೆ. ಸಾಬೂನು ನೀರು, ಇತರ ರಾಸಾಯನಿಕಗಳು, ಕೊಳಚೆ ಪದಾರ್ಥಗಳು, ಬಳಸಿ ಬಿಸಾಕಿದ ಬಟ್ಟೆ, ಪ್ಲಾಸ್ಟಿಕ್ ಸೊತ್ತು, ತಿಂದು ಉಳಿದ ಆಹಾರ ಪದಾರ್ಥಗಳು, ಬೀಡಿ ಸಿಗರೇಟು ತುಂಡು ಇತ್ಯಾದಿ ಮಿಶ್ರಣಗೊಂಡಿರುವ ಕೊಳಚೆ ನೀರಿನಲ್ಲಿ ತೇಲಿಕೊಂಡು ಅಸಹ್ಯ ತರಿಸುತ್ತಿದೆ.
ಹರಿಯುವ ನದಿಗೆ ತ್ಯಾಜ್ಯ ನದಿ ಸೇರುತ್ತಿರುವುದರ ಪರಿಣಾಮ ಕ್ಷೇತ್ರದ ಜಲಾಶಯ ಮಲಿನವಾಗಿವೆ. ನದಿ ಒಡಲು ಕಲುಷಿತವಾಗಿದೆ. ಪುಣ್ಯ ಸ್ನಾನ ನೆರವೇರುವ ದರ್ಪಣ ತೀರ್ಥ ಮತ್ತು ಕುಮಾರಧಾರಾ ಈ ಎರಡು ನದಿಗಳು ಕಲುಷಿತಗೊಂಡು ಭಕ್ತರು ಪುಣ್ಯಸ್ನಾನ ನೆರವೇರಿಸಲು ಮುಜುಗರ ಪಡುವಂತಾಗಿದೆ. ಸಾಂಕ್ರಾಮಿಕ ರೋಗರುಜಿನ ಹರಡಲು ಕಾರಣವಾಗುತ್ತಿದೆ.
ಎರಡೂ ಪುಣ್ಯ ನದಿಗಳು ಮಲಿನ
ದಕ್ಷಿಣ ಭಾರತದ ಪುಣ್ಯ ಕ್ಷೇತ್ರಗಳ ಪೈಕಿ ಕುಕ್ಕೆಗೆ ಪ್ರಮುಖ ಸ್ಥಾನವಿದೆ. ಸಹಸ್ರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ, ಹರಕೆ, ಸೇವೆ ತೀರಿಸಿ ತೆರಳುತ್ತಾರೆ. ಕ್ಷೇತ್ರದಲ್ಲಿ ಹರಿಯುತ್ತಿರುವ ದರ್ಪಣ ತೀರ್ಥ ಮತ್ತು ಕುಮಾರಧಾರಾ ಪುಣ್ಯ ನದಿಗಳಲ್ಲಿ ಮಿಂದು ಶುಚಿಭೂìತರಾಗಿ ದೇವರ ದರ್ಶನ ಪಡೆಯುತ್ತಾರೆ. ಇಲ್ಲಿ ಮಿಂದರೆ ಚರ್ಮ ಸಂಬಂಧಿ ರೋಗಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ಕ್ಷೇತ್ರಕ್ಕೆ ಬರುವ ಯಾತ್ರಿಕರ ಮತ್ತು ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಪಟ್ಟಣವೂ ಅಭಿವೃದ್ಧಿಯಾಗುತ್ತಿದೆ. ಅಷ್ಟೆ ವೇಗವಾಗಿ ಸ್ವಚ್ಛತೆ ಸಮಸ್ಯೆ ಬೆಟ್ಟದಾಕಾರದಲ್ಲಿ ಬೆಳೆಯುತ್ತಿದೆ.
ಹೊಳೆಯುದ್ದಕ್ಕೂ ಕೊಳಕು
ಆದಿಸುಬ್ರಹ್ಮಣ್ಯ ಸನ್ನಿಧಿಯ ಎದುರಿನಲ್ಲಿ ಉತ್ತರದಿಂದ ದಕ್ಷಿಣಕ್ಕೆ ಈಗ ಹರಿಯುತ್ತಿರುವ ದರ್ಪಣ ತೀರ್ಥ ನದಿ (ಕನ್ನಡಿ ಹೊಳೆ) ಇಲ್ಲಿಂದ 1.5 ಕಿ.ಮೀ. ದೂರ ಹರಿದು ಮತ್ಸ್ಯ ತೀರ್ಥ ಎಂಬಲ್ಲಿ ಕುಮಾರಧಾರಾ ನದಿ ಸೇರುತ್ತದೆ. ಈ ಹಾದಿಯುದ್ದಕ್ಕೂ ಹೊಳೆ ಮಲಿನವಾಗಿದೆ. ಅಲ್ಲಲ್ಲಿ ಕೊಳಚೆ ಶೇಖರಗೊಂಡು ಹೆಪ್ಪುಗಟ್ಟಿದ ರೀತಿಯಲ್ಲಿ ಕಾಣುತ್ತದೆ. ನದಿ ನೀರಿನ ಮಟ್ಟ ಇಳಿಕೆಯಿಂದ ಮತ್ತಷ್ಟು ಗಲೀಜು ಉಂಟಾಗಿ ಸಮಸ್ಯೆ ಬಿಗಡಾಯಿಸಿದೆ.
ಗಂಗಾ ಸ್ನಾನದಂತೆ ಪುಣ್ಯಪ್ರದ
ದರ್ಪಣ ತೀರ್ಥ ಹೊಳೆ ಸೇರುವಲ್ಲಿಗೆ ಮತ್ಸ್ಯತೀರ್ಥವೆಂದು ಕರೆಯುತ್ತಾರೆ. ಇಲ್ಲಿ ಸ್ನಾನ ಘಟ್ಟ ಇದೆ. ಮತ್ಸ್ಯ ತೀರ್ಥದಲ್ಲಿ ಗುಂಪಾಗಿ ಮೀನುಗಳು ಕಾಣಿಸಿಕೊಳ್ಳುತ್ತಿವೆ. ಕುಮಾರಧಾರಾ ನದಿ ಅಭ್ರಕ ಮಿಶ್ರಿತ ಮಣ್ಣಿನಲ್ಲಿ ಹರಿದು ಬರುವುದರಿಂದ ಇದರಲ್ಲಿ ಸ್ನಾನವು ಗಂಗಾನದಿ ಸ್ನಾನದಂತೆ ಆರೋಗ್ಯದಾಯಕವೂ ಪುಣ್ಯ ಪ್ರದಾಯಕವೂ ಆಗಿದೆ. ಇದರ ಮಣ್ಣಿನಲ್ಲಿ ಮೈ ತೊಳೆಯುತ್ತ ಈ ನೀರಿನಲ್ಲಿ ನಿತ್ಯವೂ ಸ್ನಾನ ಮಾಡಿಕೊಂಡು ಶ್ರೀ ಸುಬ್ರಹ್ಮಣ್ಯೇಶ್ವರ ದೇವರ ಮೂಲ ಮೃತ್ತಿಕೆಯನ್ನು ಸೇವಿಸುತ್ತ ಬಂದಲ್ಲಿ ಕುಷ್ಠ ರೋಗವೂ ಗುಣವಾಗುತ್ತವೆ ಎಂಬ ಪ್ರತೀತಿ ಇದೆ. ಇದೇ ಸ್ನಾನಘಟ್ಟದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವದ ವೇಳೆ ಶ್ರೀ ಸುಬ್ರಹ್ಮಣ್ಯ ದೇವರ ಅವಭೃತವೂ ನೆರವೇರುತ್ತದೆ.
ನ್ಯಾಯಾಧೀಶರಿಗೆ ಅಸಮಾಧಾನ
ಕುಕ್ಕೆಯಲ್ಲಿ ಶುಚಿತ್ವ ಕೊರತೆ ಕುರಿತು ನಾಲ್ಕು ದಿನಗಳ ಹಿಂದೆ ಸುಳ್ಯದ ನ್ಯಾಯಾಧೀಶರು ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯರಿಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದರು. ಕೇಸಿಗೆ ಸಂಬಂಧಿಸಿ ನ್ಯಾಯಾಲಯದ ಆವರಣಕ್ಕೆ ತೆರಳಿದ್ದ ಸದಸ್ಯರನ್ನು ಗುರುತಿಸಿದ ನ್ಯಾಯಾಧೀಶರು ಕ್ಷೇತ್ರದ ಒಳಚರಂಡಿ ಅವ್ಯವಸ್ಥೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಕುಕ್ಕೆಗೆ ಬಂದಿದ್ದಾಗ ಅಲ್ಲಿನ ಶುಚಿತ್ವ ಅವ್ಯವಸ್ಥೆ ಕಂಡು ಸರಗೊಂಡಿದ್ದರಿಂದ ಅವರು ಅದನ್ನು ಗ್ರಾ.ಪಂ. ಸದಸ್ಯರ ಬಳಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮಾಹಿತಿ ಪಡೆಯುವೆ ಸ್ವಚ್ಛತೆ ಕೊರತೆ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ತತ್ಕ್ಷಣ ಮಾಹಿತಿ ಪಡೆಯುವೆ. ಮುಂದೆ ಅಗತ್ಯ ಕ್ರಮಗಳನ್ನು ಜರುಗಿಸುತ್ತೇವೆ.
– ಡಾ| ಸುಬ್ರಹ್ಮಣ್ಯ ತಾಲೂಕು ವೈದ್ಯಾಧಿಕಾರಿ, ಸುಳ್ಯ
ತಾತ್ಕಾಲಿಕ ಸ್ವಚ್ಛತೆ
ಮನೆಗೆ ತೆರಳುವಲ್ಲಿ ಹೊಳೆ ದಾಟುವಾಗ ತ್ಯಾಜ್ಯ ರಾಶಿ ಕಂಡುಬರುತ್ತದೆ. ದುರ್ನಾತ ಬೀರುತ್ತಿವೆ. ಅಲ್ಲಿ ಸಂಚರಿಸುವವರು ಮೂಗು ಬಿಡುವುದಕ್ಕೆ ಸಾಧ್ಯವಿಲ್ಲ. ಸದ್ಯಕ್ಕೆ ಸ್ವಲ್ಪ ಭಾಗ ಸ್ವತಃ ಮುತುವರ್ಜಿ ವಹಿಸಿ ಯಂತ್ರದ ಮೂಲಕ ಶುಚಿಗೊಳಿಸಿದ್ದೇನೆ.
– ರವಿಂದ್ರ ರುದ್ರಪಾದ,
ಸ್ಥಳೀಯರು
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ