ಕುಮಾರಸ್ವಾಮಿ ಬೇಜವಾಬ್ದಾರಿ ಹೇಳಿಕೆ: ಬಿಜೆಪಿ
Team Udayavani, Jan 9, 2018, 9:33 AM IST
ಮಂಗಳೂರು: ದೀಪಕ್ ಹತ್ಯೆಗೆ ಸ್ಥಳೀಯ ಬಿಜೆಪಿ ಕಾರ್ಪೊರೇಟರ್ ಸುಪಾರಿ ನೀಡಿದ್ದಾ ರೆಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬೇಜವಾಬ್ದಾರಿ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಇದಾಗಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಡಾ| ಭರತ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಹಿಂದೆ ಚುನಾವಣೆಗಳಲ್ಲಿ ಎಸ್ಡಿಪಿಐ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು. ಶಾಸಕ ಮೊದಿನ್ ಬಾವಾ ಅವರು ಜೆಡಿಎಸ್ನಲ್ಲಿರುವ ತನ್ನ ಸಹೋದರನ ಮೂಲಕ ಕುಮಾರಸ್ವಾಮಿ ಅವರಲ್ಲಿ ಈ ರೀತಿಯ ಹೇಳಿಕೆ ಕೊಡಿಸಿದ್ದಾರೆ. ಶಾಸಕ ಬಾವಾ ಹಾಗೂ ಕುಮಾರಸ್ವಾಮಿ ಅವರನ್ನೇ ತನಿಖೆಗೊಳಪಡಿಸಬೇಕು ಎಂದರು. ಮನಪಾ ಸದಸ್ಯರಾದ ತಿಲಕ್ ರಾಜ್, ವಿಪಕ್ಷ ನಾಯಕ ಗಣೇಶ್ ಹೊಸಬೆಟ್ಟು, ಬಿಜೆಪಿ ಮುಖಂಡರಾದ ವಿಕಾಸ್ ಪುತ್ತೂರು, ಕಿಶೋರ್ ರೈ ಮತ್ತಿತರರು ಉಪಸ್ಥಿತರಿದ್ದರು.
ಯಾವುದೇ ತನಿಖೆಗೆ ಸಿದ್ಧ: ತಿಲಕ್ರಾಜ್
ದೀಪಕ್ ರಾವ್ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಕಲ್ಪಿಸಲಸಾಧ್ಯವಾದ ಆರೋಪವನ್ನು ಕುಮಾರಸ್ವಾಮಿ ಮಾಡಿದ್ದಾರೆ. ಈ ಬಗ್ಗೆ ನಾನು ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದು ಪಾಲಿಕೆಯ ಸ್ಥಳೀಯ ಬಿಜೆಪಿ ಸದಸ್ಯ ತಿಲಕ್ ರಾಜ್ ಹೇಳಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಒಳಒಪ್ಪಂದ: ನಳಿನ್
ದೀಪಕ್ ಹತ್ಯೆ ಪ್ರಕರಣದ ತನಿಖೆಯ ಹಾದಿತಪ್ಪಿಸಿ ಹಂತಕರನ್ನು ರಕ್ಷಿಸುವ ಕಾರ್ಯವನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ ಮಾಡುತ್ತಿದೆ .
ಕುಮಾರ ಸ್ವಾಮಿ ಅವರು ಮೈಸೂರಿ ನಲ್ಲಿ ನೀಡಿರುವ ಹೇಳಿಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಒಳ ಒಪ್ಪಂದ ಮಂಗಳೂರಿನಿಂದಲೇ ಆರಂಭವಾಗಿರುವ ಸೂಚನೆಯಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.