ಬಸ್, ರಿಕ್ಷಾ ಸಂಚಾರ ಯಥಾಸ್ಥಿತಿ ಸಾಧ್ಯತೆ
ಕರಾವಳಿಯಲ್ಲಿ ಇಂದು ಕಾರ್ಮಿಕ ಮುಷ್ಕರ
Team Udayavani, Jan 8, 2020, 5:38 AM IST
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜ.8ರ ಮುಷ್ಕರಕ್ಕೆ ವಿವಿಧ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಆದರೆ ಖಾಸಗಿ, ಸಿಟಿ ಬಸ್ ಮತ್ತು ಕೆಎಸ್ಸಾರ್ಟಿಸಿ ಬಸ್ ಸಂಚಾರ ಎಂದಿನಂತಿರುವ ನಿರೀಕ್ಷೆಯಿದೆ. ಮುಷ್ಕರ ಕ್ಕಷ್ಟೇ ಬೆಂಬಲ ಎಂದು ಹಲವು ಸಂಘಟನೆಗಳು ಹೇಳಿದ್ದು, ಜನಜೀವನ ಬಾಧಿತವಾಗುವ ಸಾಧ್ಯತೆ ಕಡಿಮೆ.
ಮುಷ್ಕರಕ್ಕೆ ಖಾಸಗಿ ಬಸ್ ಮಾಲಕರ ಬೆಂಬಲವಿಲ್ಲ; ಎಂದಿನಂತೆ ಬಸ್ ಸಂಚರಿಸಲಿವೆ ಎಂದು ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಮತ್ತು ಉಡುಪಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸಿಟಿ ಬಸ್ಗಳು ಕೂಡ ಎಂದಿನಂತೆ ಸಂಚಾರ ನಡೆಸಲಿವೆ ಎಂದು ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ರಾಜ್ ಆಳ್ವ ತಿಳಿಸಿದ್ದಾರೆ. ಕೆಎಸ್ಸಾರ್ಟಿಸಿ ನಿಗಮವು ಎಲ್ಲ ಸಿಬಂದಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ ಎಂದು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಎನ್. ಅರುಣ್ ತಿಳಿಸಿದ್ದಾರೆ. ಜಿಲ್ಲೆಯ ಕೆಲವು ರಿಕ್ಷಾ ಯೂನಿಯನ್ಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿ ದ್ದರೂ ಸೇವೆ ಎಂದಿನಂತೆ ಇರಲಿದೆ ಎಂದು ರಿಕ್ಷಾ ಮಾಲಕರು ತಿಳಿಸಿದ್ದಾರೆ.
ಮಂಗಳೂರು: ಪ್ರತಿಭಟನ ಸಭೆ
ಮಂಗಳೂರಿನ ಪುರಭವನದ ಆವರಣದಲ್ಲಿ ಜ.8ರಂದು ಬೆಳಗ್ಗೆ 10.30ರಿಂದ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನ ಸಭೆ ನಡೆಯಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ವಿವಿಧ ಬ್ಯಾಂಕ್ ಸಿಬಂದಿ ಮುಷ್ಕರದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇರುವುದರಿಂದ ಬ್ಯಾಂಕಿಂಗ್ ಸೇವೆ ವ್ಯತ್ಯಯವಾಗುವ ಸಾಧ್ಯತೆಯಿದೆ. ಎಲ್ಐಸಿ ಸೇರಿದಂತೆ ವಿವಿಧ ಸೇವೆಗಳು ಮುಷ್ಕರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಬಂದರು ಶ್ರಮಿಕರ ಸಂಘವು ಮುಷ್ಕರಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದು, ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀಳುವ ಸಾಧ್ಯತೆಯಿದೆ. ಉಳಿದಂತೆ ಹಲವು ಕಾರ್ಮಿಕ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ.
ಉಡುಪಿ: ಮುಷ್ಕರ ಮಾತ್ರ; ಬಂದ್ ಇಲ್ಲ
ಉಡುಪಿ ಜಿಲ್ಲೆಯಾದ್ಯಂತ ಬುಧವಾರ ಮೆರವಣಿಗೆ, ಪ್ರತಿಭಟನ ಸಭೆ, ಮುಷ್ಕರ ನಡೆಯಲಿದೆ. ಉಡುಪಿ ನಗರದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಆಶ್ರಯದಲ್ಲಿ ಮೆರವಣಿಗೆ ಆಯೋಜಿಸಲಾಗಿದೆ.
ಬಂದ್ ಇಲ್ಲ: ಬೊಮ್ಮಾಯಿ
ಸುದ್ದಿಗಾರರ ಜತೆ ಮಾತನಾಡಿದ ಸಚಿವ ಬಸವರಾಜ ಬೊಮ್ಮಾಯಿ, ಬಂದ್ ಇಲ್ಲ. ಕೇವಲ ಮುಷ್ಕರ ಮಾತ್ರ ಎಂದು ಸಿಐಟಿಯು ರಾಜ್ಯಾಧ್ಯಕ್ಷ ಅನಂತಸುಬ್ಬರಾವ್ ನನಗೆ ತಿಳಿಸಿದ್ದಾರೆ ಎಂದರು. ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯಾ ಚರಿಸಲಿವೆ. ಬಂದ್ ಸಂಬಂಧಿಸಿ ತೆಗೆದುಕೊಳ್ಳಬೇಕಾದ ಬಂದೋಬಸ್ತ್ನ್ನು ಏರ್ಪಡಿಸಲಾಗಿದೆ ಮತ್ತು ಅಧಿಕಾರಿಗಳ ಜತೆ ಮಾತನಾಡಿದ್ದೇನೆ ಎಂದರು.
ಬಂದ್ಗೆ ಬೆಂಬಲ ಇಲ್ಲ
ಜಿಲ್ಲೆಯಲ್ಲಿ ನಡೆಯಲಿರುವ ಮುಷ್ಕರಕ್ಕೆ ಜಿಲ್ಲಾ ವರ್ತಕರ ಸಂಘದ ಬೆಂಬಲವಿದೆ. ಆದರೆ ಬಂದ್ಗೆ ಇಲ್ಲ ಎಂದು ಅಧ್ಯಕ್ಷ ಐರೋಡಿ ಸಹನಶೀಲ ಪೈ ಹಾಗೂ ಕಾರ್ಯದರ್ಶಿ ಪಾದೆಮಠ ನಾಗರಾಜ ಅಡಿಗ ತಿಳಿಸಿದ್ದಾರೆ. ಬಂದ್ಗೆ ನಮ್ಮ ಬೆಂಬಲವಿಲ್ಲ. ಮುಷ್ಕರಕ್ಕೆ ಮಾತ್ರ ಬೆಂಬಲ ಎಂದು ಕಮ್ಯುನಿಸ್ಟ್ ಪಕ್ಷ ನಾಯಕ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.