ಇಲಾಖೆಗಳ ಸಮನ್ವಯ ಕೊರತೆ; ಕಾಮಗಾರಿ ಅಪೂರ್ಣ
ಮಧ್ಯ- ಪಂಜ ಸಂಪರ್ಕ ರಸ್ತೆ
Team Udayavani, Apr 13, 2019, 6:28 AM IST
ಅಪೂರ್ಣ ಕಾಮಗಾರಿಗೊಂಡಿರುವ ಮಧ್ಯ- ಪಂಜ ಸಂಪರ್ಕ ರಸ್ತೆ.
ವಿಶೇಷ ವರದಿ – ಚೇಳಾçರು: ಚೇಳಾçರು ಗ್ರಾಮ ಪಂಚಾಯತ್ಗೆ ಒಳಪಟ್ಟ ಮಧ್ಯ ಗ್ರಾಮ ಮತ್ತು ಕೆಮ್ರಾಲ್ ಗ್ರಾಮ ಪಂಚಾಯತ್ಗೆ ಒಳಪಟ್ಟ ಪಂಜ ಗ್ರಾಮಕ್ಕೆ ಸಂಪರ್ಕಿಸುವ ಪಂಜ ಮಧ್ಯ ಸಂಪರ್ಕ ಸೇತುವೆ 2 ಕೋಟಿ ರೂ. ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣ ಗೊಂಡರೆ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಸುಮಾರು 1.20 ಕೋ.ರೂ. ವೆಚ್ಚದಲ್ಲಿ ಇತ್ತೀಚೆಗೆ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದ್ದು , ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿಂದ ಇದೀಗ ಅಪೂರ್ಣವಾಗಿಯೇ ಉಳಿದಿದೆ.
ಊಟಕ್ಕಿಲ್ಲದ ಉಪ್ಪಿನಕಾಯಿ
ಈ ಎರಡು ಗ್ರಾಮದಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಇದು ಊಟಕ್ಕಿಲ್ಲದ ಉಪ್ಪಿನಕಾಯಿ ಎಂಬ ಗಾದೆಯಂತೆ ಎರಡು ಕಾಮಗಾರಿಗಳು ನಡೆದಿವೆ. ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣಗೊಂಡ ಸೇತುವೆಯ ಅಗಲ ಕಡಿಮೆಯಾಗಿದ್ದು ಮತ್ತು ಎತ್ತರ ಕಡಿಮೆಯಾಗಿ ಮಳೆಗಾಲದಲ್ಲಿ ವಾಹನ ಸಂಚಾರ ಸಾಧ್ಯವಿಲ್ಲ. ಸೇತುವೆವರೆಗೆ ರಸ್ತೆ ಡಾಮರು ಕಾಮಗಾರಿ ನಡೆಸದೆ ಈಗ ಸಣ್ಣ ವಾಹನ ಸಂಚಾರ ಕಷ್ಟವಾಗಿದೆ. ಮಳೆಗಾಲದಲ್ಲಿ ಕೆಸರಿನಿಂದ ನಡೆದಾಡಲು ಕಷ್ಟ. ಈ ಬಗ್ಗೆ ರಸ್ತೆಯ ಗುತ್ತಿಗೆದಾರರಲ್ಲಿ ವಿಚಾರಿಸಿದಾಗ ಇದು ನನ್ನ ಕೆಲಸವಲ್ಲ ಸೇತುವೆ ನಿರ್ಮಾಣದವರ ಕೆಲಸ ಎನ್ನುವ ಉತ್ತರ ನೀಡುತ್ತಾರೆ.
ಸಾರ್ವಜನಿಕರ ಆಕ್ರೋಶ
ಸಣ್ಣ ನೀರಾವರಿ ಇಲಾಖೆಯವರಲ್ಲಿ ವಿಚಾರಿಸಿದಾಗ ಇದು ರಸ್ತೆಯ ಗುತ್ತಿಗೆ ದಾರರ ಕೆಲಸ ಎಂಬ ಉತ್ತರ ಲಭಿಸುತ್ತದೆ. ಒಟ್ಟಾರೆಯಾಗಿ ರಸ್ತೆಯ ಕಾಮಗಾರಿಗಳು ಪೂರ್ತಿಗೊಳ್ಳದಿದ್ದರೂ ಗುತ್ತಿಗೆದಾರರಿಗೆ ಬಿಲ್ಲು ಪಾವತಿ ಯಾಗಿರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಹಿಂದೆ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಅವರು ಸಂಬಂಧ ಪಟ್ಟ ಅಧಿ ಕಾರಿಗಳನ್ನು ಕರೆಯಿಸಿ ಸರಿಪಡಿಸಲು ಹೇಳಿದ್ದರು. ಆದರೆ ಅ ಧಿಕಾರಿಗಳು ಮತ್ತು ಗುತ್ತಿಗೆದಾರರು ಇತ್ತ ಗಮನ ಹರಿಸಲಿಲ್ಲ. ಈ ಬಗ್ಗೆ ಶಾಸಕರಾದ ಉಮಾನಾಥ ಕೋಟ್ಯಾನ್ ಗಮನ ಹರಿಸಿ ಮುಂದಿನ ಮಳೆಗಾಲದ ಒಳಗೆ ಸರಿಪಡಿಸುವಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸುವುದು ಅನಿವಾರ್ಯ ಎನ್ನುತ್ತಿದ್ದಾರೆ ಸ್ಥಳೀಯ ಗ್ರಾಮಸ್ಥರು. ಒಟ್ಟಿನಲ್ಲಿ ಕೋಟ್ಯಂತರ ರೂ. ವೆಚ್ಚ ಮಾಡಿ ಈ ರಸ್ತೆ, ಸೇತುವೆ ನಿರ್ಮಾಣಗೊಂಡಿದ್ದು ಗ್ರಾಮಸ್ಥರಿಗೆ ಮಾತ್ರ ಇದರ ಉಪಯೋಗ ಕಷ್ಟಕರವಾಗಿದೆ.
ಪರಿಶೀಲಿಸಿ ಕ್ರಮ
ಸೇತುವೆ ಭಾಗದಲ್ಲಿ ಸ್ವಲ್ಪ ಖಾಸಗಿ ಜಮೀನು ಮತ್ತು ತಾಂತ್ರಿಕ ಅಡಚಣೆಯಿದೆ. ಇದನ್ನು ಸರಿಪಡಿಸಿಕೊಂಡು ಯಾವ ರೀತಿ ಮಾಡಬಹುದು ಎಂದು ತಿಳಿದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು.
- ವಿಶ್ವನಾಥ್
ಪಿಡಿಒ, ಚೇಳಾçರು