ಮಳೆ ಕೊರತೆ: ಅಂದು ಮಹಾಮಳೆಗೆ ತತ್ತರ; ಈಗ ನೀರಿಗೆ ಹಾಹಾಕಾರ!
Team Udayavani, May 30, 2019, 6:00 AM IST
(ಕಡತ ಚಿತ್ರ)
ಮಹಾನಗರ: ಕಡಲ ನಗರಿ ಮಂಗಳೂರಿನಲ್ಲಿ ಇತ್ತೀಚಿನ ಕೆಲವು ದಶಕದಲ್ಲಿಯೇ ದಾಖಲೆಯ ಮಳೆ ಎನ್ನುವ ರೀತಿಯಲ್ಲಿ ಕಳೆದ ವರ್ಷ ಮೇ 29ರಂದು ಮಹಾಮಳೆ ಸುರಿದು ಜನಜೀವನ ಅಸ್ತವ್ಯಸ್ತವಾಗಿತ್ತು. ಆದರೆ ಈ ವರ್ಷ ಜಿಲ್ಲೆಯಲ್ಲಿ ಬರದ ವಾತಾವರಣ ಇದ್ದು, ರಾಜ್ಯದಲ್ಲಿ ಅತೀ ಕಡಿಮೆ ಮಳೆ ಬಂದಂತಹ ಜಿಲ್ಲೆಗಳ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೂ ಇದೆ ಎನ್ನುವುದು ವಾಸ್ತವ.
ಕಳೆದ ಬಾರಿ ಮೇ 29ರಂದು 24 ಗಂಟೆಯಲ್ಲಿ ಬರೋಬ್ಬರಿ 360 ಮಿ.ಮೀ. ಮಳೆಯಾಗಿ ನಗರದಲ್ಲಿ ಒಂದು ದಿನದ ದಾಖಲೆ ಮಳೆ ಸುರಿದಿತ್ತು. ಅದರಿಂದ ನಗರದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಂಡಿತ್ತು. ರಾ.ಹೆ. 66ರ ಪಂಪ್ವೆಲ್ ಜಂಕ್ಷನ್ ನಲ್ಲಿ ಮತ್ತು ರಾ.ಹೆ. 75ರ ಪಡೀಲ್ ರೈಲ್ವೇ ಅಂಡರ್ ಪಾಸ್ನಲ್ಲಿ ಮತ್ತು ಕೊಟ್ಟಾರ ಚೌಕಿಯಲ್ಲಿ ಓವರ್ ಬ್ರಿಜ್ ಬಳಿ ರಸ್ತೆಗೆ ನೆರೆ ನೀರು ಬಿದ್ದ ಕಾರಣ ನಗರ ಪ್ರವೇಶಿಸುವ ಮತ್ತು ನಗರದಿಂದ ಹೊರ ಹೋಗುವ ವಾಹನಗಳು ಸಂಚರಿಸಲಾಗದೆ ನಗರದ ಸಂಪರ್ಕ ಕಡಿತಗೊಂಡಿತ್ತು.
ಬಸ್ ಮತ್ತು ಇತರ ವಾಹನಗಳಲ್ಲಿ ಹೊರಟವರು ಮುಂದಕ್ಕೆ ಹೋಗಲೂ ಆಗದೆ, ವಾಪಸ್ ಬರಲೂ ಆಗದೆ ಗಂಟೆ ಗಟ್ಟಲೆ ವಾಹನಗಳಲ್ಲಿ ಸಿಲುಕಿ ಪರದಾಡಬೇ ಕಾ ಯಿ ತು. ಕೇವಲ ಆರು ತಾಸಿನ ಮಹಾ ಮಳೆಗೆ 20.74 ಕೋಟಿ ರೂ. ನಷ್ಟವಲ್ಲದೆ, 2 ಪ್ರಾಣಹಾನಿ ಉಂಟಾಗಿತ್ತು. ಒಟ್ಟಿನಲ್ಲಿ ಧಾರಾಕಾರ ಮಳೆಗೆ ನಗರ ಸ್ತಬ್ಧಗೊಂಡಿತ್ತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿಯೂ ಉತ್ತಮ ಪೂರ್ವ ಮುಂಗಾರು ಇರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ನಿರಾಸೆಯಾಗಿದೆ. ಕಳೆದ ಬಾರಿ ಒಂದೇ ದಿನ 360 ಮಿ.ಮೀ. ಮಳೆಯಾಗಿದ್ದು, ಈ ಬಾರಿ ಒಟ್ಟಾರೆ ಪೂರ್ವ ಮುಂಗಾರು ಋತುವಿನಲ್ಲಿ ಅಂದರೆ ಮಾ.1ರಿಂದ ಮೇ 29ರ ವರೆಗೆ ಜಿಲ್ಲೆಯಲ್ಲಿ ದಾಖಲಾದದ್ದು ಕೇವಲ 83.2 ಮಿ.ಮೀ. ಮಳೆ.
ಪೂರ್ವ ಮುಂಗಾರು ಕೊರತೆ
ದ.ಕ. ಜಿಲ್ಲೆಗೆ ಹೋಲಿಕೆ ಮಾಡಿದರೆ ಕಳೆದ ಬಾರಿ ನಗರದಲ್ಲಿ ಹೆಚ್ಚಿನ ಪ್ರಮಾಣದ ಪೂರ್ವ ಮುಂಗಾರು ಮಳೆಯಾಗಿತ್ತು. ಆದರೆ, ಈ ಬಾರಿ ಜಿಲ್ಲೆಯಲ್ಲಿಯೇ ಮಂಗಳೂರು ನಗರದಲ್ಲಿ ಅತೀ ಕಡಿಮೆ ಪೂರ್ವ ಮುಂಗಾರು ಮಳೆಯಾಗಿದೆ. ಮಾರ್ಚ್ನಿಂದ ಮೇ 29ರ ವರೆಗೆ ಅಂಕಿ ಅಂಶವನ್ನು ಗಮನಿಸಿದರೆ, ನಗರದಲ್ಲಿ ಶೇ 80ರಷ್ಟು ಮಳೆ ಕೊರತೆ ಇದೆ. ಎರಡನೇ ಸ್ಥಾನ ಬಂಟ್ವಾಳ ತಾಲೂಕಿಗೆ ಇದ್ದು, ಶೇ.69, ಪುತ್ತೂರು ತಾಲೂಕು ಶೇ.59, ಬೆಳ್ತಂಗಡಿ ತಾಲೂಕು ಶೇ.53, ಸುಳ್ಯ ತಾಲೂಕಿನಲ್ಲಿ ಶೇ.38ರಷ್ಟು ಮುಂಗಾರು ಪೂರ್ವ ಮಳೆ ಕೊರತೆ ಇದೆ.
ಈ ಬಾರಿ ಕೇವಲ ತುಂತುರು ಮಳೆ
ಕಳೆದ ವರ್ಷ ಮೇ 29ರಂದು ನಗರದಾದ್ಯಂತ ಬೆಳಗ್ಗಿನಿಂದಲೇ ಜಿಟಿ ಜಿಟಿ ಮಳೆ ಆರಂಭವಾಗಿತ್ತು. ಹೊತ್ತು ಕಳೆದಂತೆ ಪ್ರಮಾಣ ಹೆಚ್ಚಾಗಿತ್ತು. ಆದರೆ, ಈ ಬಾರಿ ಮೇ 29ರಂದು ಬೆಳಗ್ಗೆ ಮೋಡ ಮುಸುಕಿದ ವಾತಾವರಣ ಇತ್ತು. ಬೆಳಗ್ಗೆ 8.15ರ ವೇಳಗೆ ತುಂತುರು ಮಳೆಯಾಗಿದೆ.
ಸಾಧಾರಣ ಮಳೆ ಸಾಧ್ಯತೆ
ದಕ್ಷಿಣ ಒಳನಾಡಿನಲ್ಲಿ ಮೇಲ್ಮೆ ç ಸುಳಿಗಾಳಿ ಇದ್ದು, ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆ ಸಹಿತ ಕರಾವಳಿಯಾದ್ಯಂತ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಸದ್ಯ ವಾಡಿಕೆಗಿಂತ ಹೆಚ್ಚು ಉಷ್ಣಾಂಶವಿದ್ದು, ಇದೇ ರೀತಿ ಮುಂದುವರಿಯುವ ಸಾಧ್ಯತೆ ಇದೆ.
- ಶ್ರೀನಿವಾಸ ರೆಡ್ಡಿ,
ಕೆಎಸ್ಎನ್ಡಿಎಂಸಿ ನಿರ್ದೇಶಕ