50 ಸಾವಿರ ಮತಗಳ ಗೆಲುವಿನ ಗುರಿ
Team Udayavani, Feb 10, 2019, 5:37 AM IST
ಪುತ್ತೂರು: ತಳಮಟ್ಟದಿಂದ ರಾಜ ಧಾನಿಯವರೆಗೆ ವ್ಯಾಪಿಸಿದ ಬಿಜೆಪಿ. ದ.ಕ. ಲೋಕಸಭಾ ಚುನಾವಣೆ ಯಲ್ಲಿ 50 ಸಾವಿರ ಮತಗಳ ಅಂತರದಿಂದ ಗೆಲುವು ಪಡೆಯಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣ ದಲ್ಲಿ ಫೆ. 9ರಂದು ಲೋಕಸಭಾ ಚುನಾವಣೆ ಸಿದ್ಧತಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಕ್ಷೇತ್ರದಲ್ಲೂ ಗೆಲುವಿನ ಅಂತರ ಹೆಚ್ಚಾಗಿರಬೇಕು. ಮೋದಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮುದ್ರಾ, ಬೇಟಿ ಬಚಾವೋ-ಬೇಟಿ ಪಡಾವೋ ಸಹಿತ ಜನಪರ ಯೋಜನೆಗಳನ್ನು ತಂದಿದ್ದಾರೆ. ಮಧ್ಯಾಂತರ ಬಜೆಟ್ನಲ್ಲೂ ಬಡವ, ರೈತ, ಸೈನಿಕರ ಪರವಾಗಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಸಮಾಜದ ಎಲ್ಲ ವರ್ಗದವರಿಗೂ ನ್ಯಾಯ ಕೊಡಿಸಿದ್ದಾರೆ. ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರಬೇಕು. ಇದಕ್ಕಾಗಿ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಮತ್ತೆ ನರೇಂದ್ರ ಮೋದಿ
ಅಟಲ್ ಬಿಹಾರಿ ವಾಜಪೇಯಿ ಅವರಂತಹ ಮಹಾನ್ ವ್ಯಕ್ತಿಗಳು ಬಿಜೆಪಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದರು. ಇದೀಗ ಅವರ ಹಾದಿಯಲ್ಲಿ ನರೇಂದ್ರ ಮೋದಿ ಸಾಗುತ್ತಿದ್ದಾರೆ. ಆದ್ದರಿಂದ ಎಲ್ಲರೂ ಸೇರಿ ನರೇಂದ್ರ ಮೋದಿಯನ್ನು ಬೆಂಬಲಿಸಬೇಕಾಗಿದೆ. ಈ ಮೂಲಕ ಕೇಂದ್ರದಲ್ಲಿ ಮತ್ತೂಮ್ಮೆ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬರಬೇಕು ಎಂದರು.
ಬಿಜೆಪಿ ಪ್ರಮುಖರಾದ ಪ್ರತಾಪ ಸಿಂಹ ನಾಯಕ್, ಚುನಾವಣಾ ಸಂಚಾಲಕ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಪ್ರಭಾರಿ ಕೃಷ್ಣ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷೆ ಶೈಲಜಾ ಭಟ್, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಉಪಸ್ಥಿತರಿದ್ದರು.
ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಅವರುಸ್ವಾಗತಿಸಿದರು ಪುತ್ತೂರು ನಗರ ಮಂಡಲ ಅಧ್ಯಕ್ಷ ಕೆ. ಜೀವಂಧರ ಜೈನ್ ವಂದಿಸಿದರು.
ಕಾಳಜಿ ಇಲ್ಲದ ಬಜೆಟ್
ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ತಾರತಮ್ಯದಿಂದ ಕೂಡಿದೆ. ಕರಾವಳಿ ಭಾಗಕ್ಕೆ ಎಳ್ಳುಂಡೆಯಂತಹ ಬಜೆಟ್ ನೀಡಿದ್ದಾರೆ. ಐಸ್ಕ್ಯಾಂಡಿ ರೀತಿಯಲ್ಲಿ ಬಜೆಟ್ ಮಾಡಿದ್ದು, ಅಡಿಕೆ ಬೆಳೆಗಾರ, ಮೀನುಗಾರರ ಕುರಿತು ಕಾಳಜಿ ತೋರ್ಪಡಿಸಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಬಜೆಟ್ ಮಾಡುವ ಬದಲು, ಕೆಲ ಪ್ರದೇಶಕ್ಕೆ ಸೀಮಿತವಾಗಿ ಬಜೆಟ್ ಮಂಡಿಸಿದ್ದಾರೆ ಎಂದರು.