ಮಳಲಿ ಮಸೀದಿ ವಿವಾದ: ಸರ್ವೇಗೆ ಕೋರ್ಟ್ ಕಮಿಷನರ್ ನೇಮಿಸಲು ಮನವಿ
Team Udayavani, Jun 1, 2022, 1:33 AM IST
ಮಂಗಳೂರು: ಮಳಲಿ ಮಸೀದಿ ಸ್ಥಳದಲ್ಲಿ ದೇವಾಲಯ ಹೋಲುವ ರಚನೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಅಲ್ಲಿ ಪುರಾತತ್ವ ಇಲಾಖೆಯ ನೆರವಿನೊಂದಿಗೆ ಸಮೀಕ್ಷೆ ನಡೆಸಲು “ಕೋರ್ಟ್ ಕಮಿಷನರ್’ ನೇಮಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ.
ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಮಂಗಳವಾರ ವಿವಾದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಯಿತು. ಈ ವೇಳೆ ವಿಶ್ವ ಹಿಂದೂ ಪರಿಷತ್ ಪರ ವಕೀಲರು ಸರ್ವೆಗೆ ಕೋರ್ಟ್ ಕಮಿಷನರ್ ನೇಮಿಸುವಂತೆ ಮನವಿ ಮಾಡಿದರು.
ಜ್ಞಾನವಾಪಿ ಮಸೀದಿಯ ವಿಚಾರವನ್ನು ಕೂಡ ವಕೀಲರು ತಮ್ಮ ವಾದದದಲ್ಲಿ ಸವಿವರವಾಗಿ ಮಂಡಿಸಿದರು. ಇದಕ್ಕೆ ಮಳಲಿ ಮಸೀದಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ ಮಸೀದಿಗೆ ನೂರಾರು ವರ್ಷಗಳ ಇತಿಹಾಸವಿದೆ. ಮಸೀದಿ ನವೀಕರಣಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ನ್ಯಾಯಾಧೀಶರು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದರು.