ಬಾಯಾರು: ಮಾನಸಿಕ ಅಸ್ವಸ್ಥನಿಂದ ನಾಲ್ಕು ಜನ ಸಂಬಂಧಿಗಳ ಭೀಕರ ಕೊಲೆ
Team Udayavani, Aug 3, 2020, 9:27 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಉಪ್ಪಳ: ಬಾಯಾರು ಸಮೀಪದ ಕನಿಯಾಲ ಗುರುಕುಮೇರಿ ಎಂಬಲ್ಲಿ ವ್ಯಕ್ತಿಯೊಬ್ಬ ತನ್ನ ರಕ್ತಸಂಬಂಧಿಗಳನ್ನೇ ಬರ್ಭರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಉದಯ ಎಂಬ ವ್ಯಕ್ತಿಯೇ ಈ ರೀತಿಯಾಗಿ ಬರ್ಭರ ಕೊಲೆ ಮಾಡಿರುವವನಾಗಿದ್ದು ಈತ ಮಾನಸಿಕ ಅಸ್ವಸ್ಥನಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಸದಾಶಿವ, ಬಾಬು, ವಿಠಲ ಹಾಗೂ ದೇವಕಿ ಎಂಬ ನಾಲ್ವರೇ ಕೊಲೆಯಾಗಿರುವ ದುರ್ದೈವಿಗಳಾಗಿದ್ದಾರೆ.
ಇವರಲ್ಲಿ ದೇವಕಿ ಕೊಲೆ ಆರೋಪಿ ಉದಯನ ಚಿಕ್ಕಮ್ಮ ಎಂದು ತಿಳಿದುಬಂದಿದ್ದು ಉಳಿದ ಮೂವರು ಆರೋಪಿಯ ಮಾವಂದಿರಾಗಿದ್ದರು ಎಂಬ ಮಾಹಿತಿಯೂ ಇದೀಗ ಲಭಿಸಿದೆ.
ಘಟನೆಯ ಬಳಿಕ ಸ್ಥಳೀಯರು ಆರೋಪಿ ಉದಯನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಆರೋಪಿಯ ತಾಯಿ ಓಡಿ ತಪ್ಪಿಸಿಕೊಂಡ ಕಾರಣ ಅವರು ಇದೀಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆಯೊಳಗೆ ರಕ್ತದೋಕುಳಿ
ಆರೋಪಿಯ ಮಾವ ವಿಠಲ ಅವರು ಬೇರೆಯವರ ಕೊಡಲಿಗಳಿಗೆ ಹಿಡಿ ಹಾಕುವುದು, ಹರಿತ ಮಾಡಿ ಕೊಡುವ ಕೆಲಸವನ್ನೂ ಮಾಡುತ್ತಿದ್ದು, ಅದರಂತೆ ಕೆಲಸಕ್ಕೆಂದು ತಂದಿರಿಸಿದ್ದ ಕೊಡಲಿಗಳು ಮನೆಯಲ್ಲಿದ್ದವು. ಆರೋಪಿಯು ಏಕಾಏಕಿ ಅದರಲ್ಲೊಂದು ಕೊಡಲಿಯನ್ನು ಹಿಡಿದು ಬಂದು ಎಲ್ಲರಿಗೂ ಕಡಿಯಲಾರಂಭಿಸಿದ. ಆತನ ಏಟಿಗೆ ನಾಲ್ವರು ಸ್ಥಳದಲ್ಲೇ ಮೃತಪಟ್ಟರು. ಬಳಿಕ ತಾಯಿಯನ್ನೂ ಕೊಲ್ಲಲು ಯತ್ನಿಸಿದ್ದು, ಅವರು ಅದೃಷ್ಟವಶಾತ್ ತಪ್ಪಿಸಿಕೊಂಡು ಪಕ್ಕದಲ್ಲೇ ಇರುವ ಕೃಷ್ಣಪ್ಪ ಅವರ ಮನೆಗೆ ಓಡಿ ಹೋಗಿ ತಿಳಿಸಿದರು.
ಆ ಮನೆಯವರು ಆಗಮಿಸುವಷ್ಟರಲ್ಲಿ ಆರೋಪಿಯು ಸುಮಾರು ಅರ್ಧ ಕಿ.ಮೀ. ದೂರ ಓಡಿ ಪರಾರಿಯಾಗಲೆತ್ನಿಸಿದ್ದ. ಕಟ್ಟತ್ತಾರಿನಿಂದ ಹಿಡಿದು ರಿಕ್ಷಾದಲ್ಲಿ ಮನೆಗೆ ಕರೆ ತಂದರು. ಮತ್ತೆ ಪರಾರಿಯಾಗಲೆತ್ನಿಸಿದಾಗ ಕಟ್ಟಿ ಹಾಕಿ ಪೊಲೀಸರಿಗೊಪ್ಪಿಸಲಾಯಿತು. ಮನೆಯ ಒಳಗೆ ರಕ್ತ ಹೊಳೆ ಹರಿದಿದೆ.
ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ಸ್ಥಳಕ್ಕಾಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ