ಮಂಗಳೂರು – ಕುವೈಟ್ ಎಐ ವಿಮಾನ ವೇಳಾಪಟ್ಟಿ ಬದಲು
Team Udayavani, Aug 12, 2018, 10:05 AM IST
ಮಂಗಳೂರು: ಮಂಗಳೂರು-ಕುವೈಟ್-ಮಂಗಳೂರು ಮಧ್ಯೆ ಸಂಚರಿಸುವ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ವೇಳಾಪಟ್ಟಿ ಬದಲಾವಣೆ ಕರಾವಳಿ ಜಿಲ್ಲೆಗಳ ಪ್ರಯಾಣಿಕರಿಗೆ ಕಹಿ ಸುದ್ದಿಯಾಗಿ ಪರಿಣಮಿಸಿದೆ. ತುಳುಕೂಟ ಕುವೈಟ್, ಬಂಟರ ಸಂಘ ಕುವೈಟ್, ಮುಸ್ಲಿಂ ಅಸೋಸಿಯೇಶನ್, ಕರಾವಳಿಯ ವಿವಿಧ ಸಂಘ-ಸಂಸ್ಥೆಗಳು ಈ ಸಂಬಂಧ ಪದೇ ಪದೇ ಮನವಿ ಸಲ್ಲಿಸಿದರೂ ಕೇಂದ್ರ ನಾಗರಿಕ ವಿಮಾನ ಇಲಾಖೆ ಸ್ಪಂದಿಸದಿರುವುದು ಕರಾವಳಿಗರ ಅಸಮಾಧಾನಕ್ಕೆ ಕಾರಣ.
ಸಮಯದ್ದೇ ಸಮಸ್ಯೆ
ಮಂಗಳೂರು- ಕುವೈಟ್- ಮಂಗಳೂರು ನಡುವೆ ವಾರಕ್ಕೆ ಮೂರು ಬಾರಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಚರಿಸುತ್ತದೆ. ಈ ಮೊದಲು ಮಂಗಳವಾರ, ಗುರುವಾರ, ಶನಿವಾರ ಮಂಗಳೂರಿನಿಂದ ರಾತ್ರಿ 8.45ಕ್ಕೆ ಹೊರಟು 11.45ಕ್ಕೆ ಕುವೈಟ್ ತಲುಪುತ್ತಿತ್ತು; ತಡರಾತ್ರಿ 12.30ಕ್ಕೆ ಅಲ್ಲಿಂದ ಹೊರಟು ಬೆಳಗ್ಗೆ 7.30ಕ್ಕೆ ಮಂಗಳೂರು ತಲುಪುತ್ತಿತ್ತು. ಆದರೆ ಈಗ ಬೆಳಗ್ಗೆ 7ಕ್ಕೆ ಮಂಗಳೂರಿನಿಂದ ಹೊರಟು ಬೆಳಗ್ಗೆ 11.15 ಕುವೈಟ್ಗೆ; ಕುವೈಟ್ನಿಂದ ಅಪರಾಹ್ನ 12.15ಕ್ಕೆ ಮಂಗಳೂರಿನತ್ತ ಹೊರಡುತ್ತಿದೆ. ಗಲ್ಫ್ ದೇಶಗಳಲ್ಲಿ ಶುಕ್ರವಾರ ಸಾರ್ವತ್ರಿಕ ರಜಾ. ಅಲ್ಲಿ ಉದ್ಯೋಗದಲ್ಲಿರುವ ಕರಾವಳಿಗರು ಈಗ ಗುರುವಾರ ರಾತ್ರಿ ಬದಲು ಶುಕ್ರವಾರ ಮಧ್ಯಾಹ್ನ
ಹೊರಡಬೇಕಿದೆ. ವಾರದ ಉಳಿದೆರಡು ದಿನ ಗುರುವಾರ- ಶುಕ್ರವಾರದಷ್ಟು ಅನುಕೂಲಕರವಲ್ಲ ಎಂಬುದು ಕರಾವಳಿಗರ ಅಭಿಪ್ರಾಯ. ಈಗಿನ ನಿಯಮಾವಳಿ ಪ್ರಕಾರ ಅಂತಾರಾಷ್ಟ್ರೀಯ ಪ್ರಯಾಣಿಕರು ಮೂರು ತಾಸುಗಳಷ್ಟು ಮುಂಚಿತವಾಗಿ ವಿಮಾನ ನಿಲ್ದಾಣದಲ್ಲಿರಬೇಕು. ನಿಲ್ದಾಣಕ್ಕೆ ಪ್ರಯಾಣಿಸಲೂ ಸಾಕಷ್ಟು ಸಮಯ ಬೇಕು. ಉದಾಹರಣೆಗೆ, ಬೆಳಗ್ಗೆ 7ಕ್ಕೆ ವಿಮಾನ ಏರುವವರು ವಿಮಾನ ನಿಲ್ದಾಣಕ್ಕೆ ತಡ ರಾತ್ರಿಯೇ ತಲುಪಬೇಕು. ಕುವೈಟ್ವಿಮಾನ ಬಹ್ರೈನ್ನ ಮೂಲಕವೂ ಪ್ರಯಾಣಿಸಬೇಕು.
ಪರಿಹಾರವೇನು?
ಸಮಯವನ್ನು ಹಿಂದಿನಂತೆಯೇ ನಿಗದಿಪಡಿಸಿದರೆ ಈ ಎಲ್ಲ ಸಮಸ್ಯೆಗಳೂ ಬಗೆಹರಿದು, ವಿಮಾನ ಸಂಚಾರ ವರದಾನವಾಗಲಿದೆ ಎಂದು ಸಂಘ ಸಂಸ್ಥೆಗಳು ತಮ್ಮ ಮನವಿಯಲ್ಲಿ ತಿಳಿಸಿವೆ. ದ.ಕ., ಉಡುಪಿ, ಉ.ಕ., ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು; ಸಮೀಪದ ಕಾಸರಗೋಡು, ಕಣ್ಣೂರು ಜಿಲ್ಲೆಗಳ ಲಕ್ಷಾಂತರ ಮಂದಿ ಕುವೈಟ್ನಲ್ಲಿ ಉದ್ಯೋಗದ ಲ್ಲಿದ್ದಾರೆ. ಹಿಂದಿನ ಸಮಯವನ್ನೇ ಜಾರಿಗೊಳಿಸು ವುದರಿಂದ ಇವರಿಗೆಲ್ಲ ಅನುಕೂಲವಾಗಲಿದೆ.
ವಿಮಾನ ವಲಯದ ಮೇಲೂ ಕೇರಳ ಲಾಬಿ?
ರೈಲ್ವೇ ಇಲಾಖೆಯಲ್ಲಿ ಕರಾವಳಿ ಭಾಗಕ್ಕೆ , ಅದರಲ್ಲೂ ಉಡುಪಿ ಹಾಗೂ ಮಂಗಳೂರು ಭಾಗಕ್ಕೆ ಸಾಕಷ್ಟು ಅನ್ಯಾಯವಾಗಿದೆ. ಮಂಗಳೂರು ಪ್ರತ್ಯೇಕ ರೈಲ್ವೇ ವಲಯವನ್ನಾಗಿ ಘೋಷಿಸುವಂತೆ ಮಾಡಿದ ಮನವಿಯನ್ನು ಕೇರಳದ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಲಾಬಿಯಿಂದಾಗಿ ಕೇಂದ್ರ ರೈಲ್ವೆ à ಇಲಾಖೆ ಪುರಸ್ಕರಿಸಿಲ್ಲ ಎಂಬ ಆರೋಪವಿದೆ. ಈಗ ಅದೇ ಲಾಬಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೂ ವಿಸ್ತರಣೆಯಾಗಿರುವ ಅಭಿಪ್ರಾಯ ವ್ಯಕ್ತವಾಗಿದೆ. ಕೇರಳದ ಕಣ್ಣೂರಿನಲ್ಲಿ ಸೆಪ್ಟಂಬರ್ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಯಾಗಲಿದೆ. ಈ ನಿಲ್ದಾಣಕ್ಕೆ ಅನುಕೂಲವಾಗುವ ವೇಳಾಪಟ್ಟಿಯನ್ನು ಮಾಡಿಸಿಕೊಳ್ಳುವತ್ತ “ಕೇರಳ ಲಾಬಿ’ ಕ್ರಿಯಾಶೀಲವಾಗಿದೆ. ಕರಾವಳಿಯ ಬೇಡಿಕೆಯನ್ನು ಉಪೇಕ್ಷಿಸಲು ಅದೇ ಕಾರಣ.
ಸಂಸದರು ಬಗೆಹರಿಸಲಿ
ಮಂಗಳೂರು – ಕುವೈಟ್- ಮಂಗಳೂರು ವಿಮಾನಯಾನ ಸದಾ ಅಡೆತಡೆಗಳನ್ನು ಎದುರಿಸುತ್ತಲೇ ಬಂದಿದೆ. ಸಮಯ ನಿಗದಿ ಅಸಮರ್ಪಕವಾಗಿದ್ದರಿಂದ ಪ್ರಯಾಣಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಬೇರೆ ನಿಲ್ದಾಣಗಳಿಂದ ಬೇರೆ ವಿಮಾನಗಳನ್ನು ಆಯ್ದುಕೊಳ್ಳುತ್ತಿದ್ದರು. ಆದರೆ ವಿಮಾನ ಇಲಾಖೆ, ತನ್ನ ಅಸಮರ್ಪಕ ಸಮಯದ ಲೋಪವನ್ನು ಪ್ರಯಾಣಿಕರ ಕೊರತೆ ಎಂದು ಬಿಂಬಿಸಿ ಹಾರಾಟ ರದ್ದುಪಡಿಸಿತು. ಬಳಿಕ ಸಂಘಸಂಸ್ಥೆಗಳು ಹೋರಾಟ ನಡೆಸಿದ ಪರಿಣಾಮ ವಿಮಾನ ಯಾನ ಮತ್ತೆ ಆರಂಭವಾಯಿತು. ಈಗ ಸಮಯದ ಬದಲಾವಣೆ ಪ್ರಹಾರ. ಈ ಎಲ್ಲ ಅಂಶಗಳನ್ನು ಸಂಸದ ನಳಿನ್ ಕುಮಾರ್ ಕಟೀಲು ಗಮನಕ್ಕೆ ಕುವೈಟ್ನ ದ. ಕನ್ನಡ ಮೂಲಕ ಸಂಘ ಸಂಸ್ಥೆಗಳವರು ತಂದಿದ್ದಾರೆ. ಸಂಸದರು ಸಂಬಂಧಪಟ್ಟ ಕೇಂದ್ರ ಸಚಿವರಲ್ಲಿ ಮಾತನಾಡಿ ಸರಿಪಡಿಸಬೇಕೆಂಬುದು ಕರಾವಳಿ ಪ್ರಯಾಣಿಕರ ಆಗ್ರಹ.
*ಮನೋಹರ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್