ಸಂಭ್ರಮದ ಕ್ರಿಸ್ಮಸ್ ಆಚರಣೆ, ಚರ್ಚ್ಗಳಲ್ಲಿ ವಿಶೇಷ ಬಲಿಪೂಜೆ
Team Udayavani, Dec 26, 2018, 10:09 AM IST
ಮಹಾನಗರ : ಯೇಸು ಕ್ರಿಸ್ತರ ಜನನದ ಹಬ್ಬವಾದ ಕ್ರಿಸ್ಮಸ್ ಹಬ್ಬವನ್ನು ಮಂಗಳವಾರ ನಗರದೆಲ್ಲೆಡೆ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಜಗತ್ತಿನ ಎಲ್ಲೆಡೆ ನಡೆಯುವಂತೆ ‘ಪೂರ್ವದ ರೋಮ್’ ಎಂದು ಪರಿಗಣಿತವಾಗಿರುವ ಮಂಗಳೂರಿನಲ್ಲಿ ಕ್ರಿಸ್ಮಸ್ ಆಚರಣೆ ಜೋರಾಗಿತ್ತು. ನಗರದಲ್ಲಿನ ವಿವಿಧ ಚರ್ಚ್ಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದವು. ಯೇಸು ಕ್ರಿಸ್ತರು ದನದ ಹಟ್ಟಿಯಲ್ಲಿ ಜನಿಸಿದರು ಎನ್ನುವುದರ ಸಂಕೇತವಾಗಿ ಚರ್ಚ್ಗಳಲ್ಲಿ ಮತ್ತು ಕ್ರೈಸ್ತರ ಮನೆಗಳಲ್ಲಿ ಆಕರ್ಷಕ ಗೋದಲಿ (ಕ್ರಿಬ್)ಗಳು ನಿರ್ಮಾಣಗೊಂಡಿದ್ದವು.
ಪರ ಊರಿನಲ್ಲಿರುವ ಮತ್ತು ವಿದೇಶಗಳಲ್ಲಿರುವ ಕುಟುಂಬದ ಸದಸ್ಯರು ಹಬ್ಬ ಆಚರಣೆಯನ್ನು ಮನೆಮಂದಿಯೊಂದಿಗೆ ಆಚರಿಸಿದರು. ಇದೇ ಕಾರಣದಿಂದ ಮನೆಗಳಲ್ಲಿ ಸಡಗರದ ವಾತಾವರಣ ಸೃಷ್ಟಿಯಾಗಿತ್ತು. ಕರಾವಳಿಯ ಎಲ್ಲ ಚರ್ಚ್ಗಳಲ್ಲಿ ವಿಶೇಷ ಬಲಿಪೂಜೆ ಹಾಗೂ ಪ್ರಾರ್ಥನೆ ನೆರವೇರಿತು. ಏಸುಕ್ರಿಸ್ತರ ಜನನ ಸಡಗರವನ್ನು ಕೊಂಡಾಡುವ ಗೀತೆಗಳ ವೃಂದಗಾಯನ ರಾತ್ರಿ ಬಲಿಪೂಜೆಗೂ ಮುನ್ನ ವಿವಿಧ ಚರ್ಚ್ ಗಳಲ್ಲಿ ಜರಗಿತು. ಮನೆಗಳ ಮುಂಭಾಗ ದಲ್ಲಿ ವರ್ಣರಂಜಿತ ನಕ್ಷತ್ರಗಳನ್ನು ತೂಗುಹಾಕಲಾಗಿದ್ದು, ಬಣ್ಣ ಬಣ್ಣದ ವಿದ್ಯುತ್ ದೀಪಗಳು ಝಗಮಗಿಸುತ್ತಿದ್ದವು.