ಮಂಗಳೂರು : ಕೆಬಿಸಿ ಬಹುಮಾನದ ಹೆಸರಿನಲ್ಲಿ 100ಕ್ಕೂ ಹೆಚ್ಚು ಮಂದಿಗೆ ವಂಚನೆ: ಇಬ್ಬರ ಸೆರೆ
Team Udayavani, Jun 1, 2022, 1:29 AM IST
ಮಂಗಳೂರು : ಕೆಬಿಸಿ ಬಹುಮಾನದ ಹೆಸರಿನಲ್ಲಿ ಮಂಗಳೂರಿನ ದಂಪತಿಯನ್ನು ವಂಚಿಸಲು ಯತ್ನಿಸಿರುವ ಘಟನೆ ನಡೆದಿದೆ. ಮೇ 26ರಂದು +92ನಿಂದ ಆರಂಭವಾಗುವ ಮೊಬೈಲ್ ಸಂಖ್ಯೆಯಿಂದ ದಂಪತಿಗೆ ವಾಟ್ಸ್ಆ್ಯಪ್ ಸಂದೇಶ ಬಂದಿತ್ತು. ಅದರಲ್ಲಿ “ನೀವು 25 ಲ.ರೂ. ಬಹುಮಾನ ಗೆದ್ದಿದ್ದೀರಿ. ಅದನ್ನು ಪಡೆಯಲು ಬ್ಯಾಂಕ್ನ ವಿವರಗಳೊಂದಿಗೆ ವಾಟ್ಸ್ಆ್ಯಪ್ ಕಾಲ್ ಮಾತ್ರ ಮಾಡಬೇಕು’ ಎಂದು ತಿಳಿಸಲಾಗಿತ್ತು. 25 ಲ.ರೂ. ಮೊತ್ತ ನಮೂದಿಸಿದ ಎಸ್ಬಿಐ ಚೆಕ್ನ ಚಿತ್ರ ಹಾಗೂ ಅದರಲ್ಲಿ ಅಮಿತಾಭ್ ಬಚ್ಚನ್ ಚಿತ್ರ ಮತ್ತು ಕೆಬಿಸಿ ಲೋಗೊ ಮೊದಲಾ ದವುಗಳನ್ನು ಮುದ್ರಿಸಲಾಗಿತ್ತು ಎಂದು ದಂಪತಿ ದೂರಿದ್ದಾರೆ. ವಂಚಕರು ಇದೇ ರೀತಿ ಮೋಸ ಮಾಡಲು ಯತ್ನಿಸಿರುವ ಸಾಧ್ಯತೆ ಇದೆ. ಸಾರ್ವಜನಿಕರು ಎಚ್ಚರದಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.
100ಕ್ಕೂ ಹೆಚ್ಚು ಮಂದಿಗೆ ವಂಚನೆ: ಇಬ್ಬರ ಸೆರೆ
ಇದೇ ರೀತಿಯ ವಂಚನೆ ದಿಲ್ಲಿಯಲ್ಲಿಯೂ ನಡೆ ದ್ದು, ಮಹಿಳೆಯೋರ್ವರು ನೀಡಿದ ದೂರಿನಂತೆ ದಿಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ವಂಚಕರಾದ ಬಿಹಾರ ಮೂಲದ ಪ್ರಣವ್ ಕುಮಾರ್ ಮಿಶ್ರಾ (23) ಮತ್ತು ಝಾರ್ಖಂಡ್ ಮೂಲದ ಗೌತಮ್ ಪ್ರಸಾದ್ ಯಾದವ್ (29) ಅವರನ್ನು ಮಂಗಳವಾರ ಬಂಧಿಸಿದ್ದಾರೆ. ಮಹಿಳೆಯೋರ್ವರಿಗೆ ವಾಟ್ಸ್ಆ್ಯಪ್ ಸಂದೇಶ ಕಳುಹಿಸಿ 25 ಲಕ್ಷ ರೂ. ಬಹುಮಾನ ಬಂದಿರುವುದಾಗಿ ತಿಳಿಸಿ ತೆರಿಗೆಗಾಗಿ 12,500 ರೂ. ಕಳುಹಿಸಲು ತಿಳಿಸಿದ್ದರು. ಅದನ್ನು ಕಳುಹಿಸಿದ ಬಳಿಕ ಮತ್ತೆ 25,000 ರೂ. ಕಳುಹಿಸಲು ತಿಳಿಸಿದಾಗ ಆಕೆ ಸಂಶಯ ಬಂದು ದೂರು ನೀಡಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೊದಲು ಹರಿಯಾಣದಲ್ಲಿ ಕೂಡ ಇಂಥಹದೇ ಕೃತ್ಯ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ 5 ಮೊಬೈಲ್, 33 ಸಿಮ್ಕಾರ್ಡ್, 11 ಡೆಬಿಟ್ ಕಾರ್ಡ್, 5 ಬ್ಯಾಂಕ್ ಪಾಸ್ಬುಕ್ ಮತ್ತು ನಕಲಿ ಐಡಿ ಕಾರ್ಡ್ಗಳನ್ನು ವಶಕ್ಕೆ ಪಡೆಯಲಾಗಿದೆ.