ಮಂಗಳೂರು: ವಿಚ್ಛೇದನಕ್ಕೆ ಸಿದ್ದವಾಗಿದ್ದ ಮಹಿಳೆಯ ಮಾನಭಂಗ ಯತ್ನ; ಆರೋಪಿ ಬಂಧನ
Team Udayavani, May 18, 2022, 4:05 PM IST
ಮಂಗಳೂರು: ಹಳೆಯಂಗಡಿ ಮೂಲದ ವಿಚ್ಛೇದನಕ್ಕೆ ಸಿದ್ದವಾಗಿದ್ದ 30 ರ ಹರೆಯದ ಮಹಿಳೆಯೊಬ್ಬರಿಗೆ ಸಾಮಾಜಿಕ ತಾಣದಲ್ಲಿ ಪರಿಚಯವಾಗಿದ್ದ ಯುವಕನೊಬ್ಬ ಮಾನಭಂಗ ಮತ್ತು ಹತ್ಯೆಗೆ ಯತ್ನಿಸಿ ಬಂಧನಕ್ಕೊಳಗಾಗಿದ್ದಾನೆ.
ಬಂಧಿತ ಆರೋಪಿ, ಬಂಟ್ವಾಳ ಕಸಬದ ಮಂಡಾಡಿ ಹೌಸ್ ಶಿವರಾಜ್ ಕುಲಾಲ್ (28) ಎನ್ನುವವನಾಗಿದ್ದಾನೆ. ಮಂಗಳೂರು ಮಹಿಳಾ ಠಾಣೆಯಲ್ಲಿ ಕಿರುಕುಳ ಮತ್ತು ಹತ್ಯೆ ಯತ್ನದ ಬಗ್ಗೆ ದೂರು ದಾಖಲಾಗಿತ್ತು.
ಮಹಿಳೆಗೆ ಪತಿಯೊಂದಿಗೆ ಮನಸ್ತಾಪ ಉಂಟಾಗಿ ವಿವಾಹ ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆಯಲ್ಲಿದೆ. ಈ ಮಧ್ಯೆ ಸುಮಾರು 2 ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದ ಮುಖಾಂತರ ಶಿವರಾಜ್ ಕುಲಾಲ್ ಪರಿಚಯವಾಗಿ ಅವರಿಬ್ಬರು ಪ್ರೀತಿಸುತ್ತಿದ್ದರು. ಸುಮಾರು 6 ತಿಂಗಳುಗಳಿಂದ ಶಿವರಾಜ್ ಕುಲಾಲ್ ಮಹಿಳೆಗೆ ಮಾನಸಿಕ ಹಿಂಸೆ ನೀಡುವುದು ಮೈಗೆ ಕೈ ಹಾಕಿ ಮಾನ ಭಂಗ ಮಾಡಲು ಪ್ರಯತ್ನಿಸಿದ್ದರಿಂದ ಆತನಿಂದ ದೂರವಾಗಿದ್ದರು ಎನ್ನಲಾಗಿದೆ.
ಈ ನಡುವೆ ಮೇ 17 ರಂದು ಸಂಜೆ ಮಹಿಳೆ ಕೆಲಸ ಮಾಡುತ್ತಿದ್ದ ಬಳ್ಳಾಲ್ ಬಾಗ್ ನ ಕಂಪೆನಿಗೆ ಆರೋಪಿ ಶಿವರಾಜ್ ಕುಲಾಲ್ ಬಂದು ಕೆಲಸ ಮುಗಿಸಿಕೊಂಡುಹೋಗುತ್ತಿದ್ದ ಮಹಿಳೆಯನ್ನು ಬೈದು, ಹೊಡೆದು ಕುತ್ತಿಗೆಯನ್ನು ಹಿಡಿದು ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ ಎಂದು ದೂರಿನಲ್ಲಿ ದಾಖಲಾಗಿದೆ.