ಮಂಜನಬೈಲು: ಬೋನಿಗೆ ಬಿದ್ದ ಚಿರತೆ ಅಭಯಾರಣ್ಯಕ್ಕೆ
Team Udayavani, Sep 19, 2017, 7:05 AM IST
ಮೂಡಬಿದಿರೆ: ಬಡಗ ಮಿಜಾರು ಗ್ರಾಮದ ಮಂಜನಬೈಲು ಫ್ರಾನ್ಸಿಸ್ ನೊರೋನ್ಹ ಅವರ ಮನೆಯ ಬಳಿ ಅರಣ್ಯ ಇಲಾಖೆ ಇರಿಸಿದ ಬೋನಿನಲ್ಲಿ ಚಿರತೆಯೊಂದು ರವಿವಾರ ರಾತ್ರಿ 11 ಗಂಟೆ ಸುಮಾರಿಗೆ ಬಿದ್ದಿದೆ. ಮೂಡಬಿದಿರೆ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಈ ಚಿರತೆಯನ್ನು ರವಿವಾರ ಮಧ್ಯರಾತ್ರಿ ವೇಳೆಗೆ ಕುದುರೆಮುಖ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.
ಫ್ರಾನ್ಸಿಸ್ ಅವರ ಮನೆಯ ಆಸುಪಾಸಿನಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಚಿರತೆ ಓಡಾಡುತ್ತಿದ್ದು ಕೋಳಿಗಳನ್ನು ತಿಂದು ಹಾಕಿತ್ತು. ರಾಮಮೂರ್ತಿ ಅವರ ಮನೆಯ ನಾಯಿ, ಬಾಲಕೃಷ್ಣ ರಾವ್ ಹಾಗೂ ವೆಂಕಪ್ಪ ಗೌಡ ಅವರ ದನಗಳನ್ನು ತಿಂದು ಹಾಕಿದ್ದು ಇದೇ ಚಿರತೆ ಇರಬಹುದು ಎಂದು ಶಂಕಿಸಲಾಗಿದೆ.
ಮೂಡಬಿದಿರೆ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ ನಿರ್ದೇಶನದಂತೆ ಶಿರ್ತಾಡಿ ಉಪವಲಯ ಅರಣ್ಯಾಧಿಕಾರಿ ಚಂದ್ರಕಾಂತ್, ಹೊಸ್ಮಾರು ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಗಾಣಿಗ, ಅರಣ್ಯ ರಕ್ಷಕ ವಿನಾಯಕ, ಬಸಪ್ಪ, ಅರಣ್ಯ ವೀಕ್ಷಕ ಶಿವಾನಂದ ಬಗಲಿ, ವಾಹನ ಚಾಲಕ ಮಿಥುನ್ ಮತ್ತು ಸ್ಥಳೀಯರ ನೆರವಿನೊಂದಿಗೆ ಚಿರತೆಯನ್ನು ಹಿಡಿದು ಕುದುರೆಮುಖ ಅಭಯಾರಣ್ಯಕ್ಕೆ ಬಿಟ್ಟರು.