ಮರ್ದಾಳ: ಮಳೆ ನೀರು ಸಂಗ್ರಹವಾಗಿ ಹಳ್ಳವಾಗಿದೆ ರಸ್ತೆ ಬದಿ
Team Udayavani, Jun 24, 2018, 11:53 AM IST
ಕಡಬ : ಕಡಬ-ಸುಬ್ರಹ್ಮಣ್ಯ ರಾಜ್ಯರಸ್ತೆಯಲ್ಲಿ ಮರ್ದಾಳದಿಂದ ಕರ್ಮಾಯಿಯತ್ತ ಸಾಗುವ ರಸ್ತೆ ಕವಲೊಡೆಯುವಲ್ಲಿ ಡಾಮರು ರಸ್ತೆಯ ಪಕ್ಕ ಮಳೆನೀರು ಸಂಗ್ರಹಗೊಂಡು ದೊಡ್ಡ ಹೊಂಡವಾಗಿ ತೀವ್ರ ತೊಂದರೆಯಾಗುತ್ತಿರುವ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮುಖ್ಯ ರಸ್ತೆಯಲ್ಲಿ ವೇಗವಾಗಿ ಸಾಗುವ ವಾಹನಗಳು ಈ ಹೊಂಡದ ಮೇಲೆ ಚಲಿಸಿದಾಗ ರಸ್ತೆಯ ಪಕ್ಕದಲ್ಲಿ ನಡೆದು ಹೋಗುವ ಜನರಿಗೆ ಕೆಸರು ನೀರಿನ ಅಭಿಷೇಕ ಇಲ್ಲಿ ದಿನನಿತ್ಯದ ಗೋಳು. ಪಕ್ಕದಲ್ಲಿಯೇ ಇರುವ ಪ್ರೌಢಶಾಲೆಯ ವಿದ್ಯಾರ್ಥಿಗಳು ಕೆಸರು ನೀರಿನ ಸಿಂಚನದಿಂದಾಗಿ ದಿನಂಪ್ರತಿ ತೊಂದರೆ ಎದುರಿಸುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ನೀರಿನಲ್ಲಿ ಹೊಂಡದ ಅರಿವಾಗದೆ ಹಲವಾರು ಅಪಘಾತಗಳು ಇಲ್ಲಿ ಸಂಭವಿಸಿವೆ. ಈ ಕುರಿತು ಗ್ರಾಮಸಭೆಯಲ್ಲಿ ಹಲವು ಬಾರಿ ದೂರಿಕೊಂಡರೂ ಸಮಸ್ಯೆ ಬಗೆಹರಿಸಲು ಯಾರೂ ಮುಂದೆ ಬಂದಿಲ್ಲ ಎಂದು ಸ್ಥಳೀಯ ಮುಂದಾಳು ಶಿವಪ್ರಸಾದ್ ಕೈಕುರೆ ಆರೋಪಿಸಿದ್ದಾರೆ.
ಮನವಿ ಮಾಡಲಾಗಿದೆ
ಸಮಸ್ಯೆ ನಮ್ಮ ಗಮನಕ್ಕೂ ಬಂದಿದೆ. ಅಲ್ಲಿ ಹೊಂಡ ಮುಚ್ಚಿದರೆ ಪ್ರಯೋಜನವಿಲ್ಲ. ಮಳೆಯ ನೀರು ಸಮರ್ಪಕವಾಗಿ ಹರಿದುಹೋಗಲು ವ್ಯವಸ್ಥೆ ಮಾಡದೇ ಇದ್ದರೆ ಸಮಸ್ಯೆ ಬಗೆಹರಿಯದು. ಆದುದರಿಂದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಮೂಲಕ ರಸ್ತೆ ಬದಿಯ ಚರಂಡಿ ದುರಸ್ತಿಪಡಿಸಿ ಮಳೆನೀರು ಸರಾಗವಾಗಿ ಹರಿದುಹೋಗುವಂತೆ ಮಾಡಿ ಹೊಂಡ ಮುಚ್ಚಿಸುವ ಬಗ್ಗೆ ಮನವಿ ಮಾಡಲಾಗಿದೆ.
– ಲಲಿತಾ ಎಂ. ರೈ,
ಅಧ್ಯಕ್ಷರು, ಮರ್ದಾಳ ಗ್ರಾ.ಪಂ.