ಆಸ್ತಿ, ನೀರಿನ ತೆರಿಗೆ ಬಾಕಿ ಎರಡು ತಿಂಗಳೊಳಗೆ ಪಾಲಿಕೆಗೆ ಪಾವತಿಸಿ
Team Udayavani, Jul 18, 2018, 12:28 PM IST
ಮಹಾನಗರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ಹಾಗೂ ನೀರಿನ ತೆರಿಗೆ ಸಹಿತ ಆದಾಯ ಸಂಗ್ರಹದಲ್ಲಿ ಪರಿಣಾಮಕಾರಿ ಅನುಷ್ಠಾನ ಕ್ರಮ ಕೈಗೊಳ್ಳದ ಪಾಲಿಕೆ ಅಧಿಕಾರಿಗಳನ್ನು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ಎರಡು ತಿಂಗಳೊಳಗೆ ಪಾಲಿಕೆಗೆ ಬರಬೇಕಾಗಿರುವ ಎಲ್ಲ ರೀತಿಯ ತೆರಿಗೆಗಳನ್ನು ಪಾವತಿಸುವ ಸಂಬಂಧ, ಅಧಿಕಾರಿಗಳು ಸಂಬಂಧಪಟ್ಟ ಬಾಕಿದಾರರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಮನಪಾ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಪಾಲಿಕೆಯಲ್ಲಿ ಮಂಗಳವಾರ ಆಯೋಜಿಸಲಾದ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಡವರು ನೀರಿನ ಬಿಲ್ ಪಾವತಿ ಮಾಡದಿದ್ದರೆ ಅವರ ಮನೆಗೆ ಹೋಗಿ ನೀರಿನ ಸಂಪರ್ಕವನ್ನೇ ಸ್ಥಗಿತಗೊಳಿಸಲಾಗುತ್ತದೆ. ಈ ಕ್ರಮ ಶ್ರೀಮಂತರಿಗೆ ಯಾಕೆ ನಡೆಯುವುದಿಲ್ಲ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಹಾಗೂ ಕ್ರಮ ಕೈಗೊಂಡ ಬಗ್ಗೆ ‘ಸಾಧನಾ ವರದಿ’ಯನ್ನು ಆಯುಕ್ತರು ಇಲಾಖೆಗೆ ನೀಡಬೇಕು ಎಂದು ಅವರು ಸೂಚಿಸಿದರು.
ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡಿ
ನಗ ರ ಪ್ರತಿಷ್ಠಿತ ಮಾಲ್ ಸೇರಿದಂತೆ ಹಲವು ಜನರಿಂದ ತೆರಿಗೆ ಪಾವತಿ ಬಾಕಿಯಿದೆ. ಬಹುತೇಕ ಜನರು ಡಬ್ಬಲ್ ಟ್ಯಾಕ್ಸ್ ಪಾವತಿ ಮಾಡುತ್ತಿಲ್ಲ. ಜಾಹೀರಾತು ತೆರಿಗೆ ಕೂಡ ಸಮರ್ಪಕವಾಗಿ ಪಾವತಿಯಾಗುತ್ತಿಲ್ಲ ಎಂಬ ಎಲ್ಲ ವಿವರಗಳನ್ನು ಆಲಿಸಿದ ಸಚಿವರು ತೆರಿಗೆ ಸಂಗ್ರಹಕ್ಕೆ ಅಧಿಕಾರಿಗಳು ಮೊದಲ ಆದ್ಯತೆ ನೀಡಬೇಕು. ನಿರ್ಲಕ್ಷ್ಯ
ಸಲ್ಲದು ಎಂದರು.
ಶಾಸಕರಾದ ವೇದವ್ಯಾಸ ಕಾಮತ್, ಡಾ| ವೈ. ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಮೇಯರ್ ಭಾಸ್ಕರ್ ಕೆ., ನಗರಾಭಿವೃದ್ಧಿ ಇಲಾಖೆ ಉಪ ಆಯುಕ್ತ ರವಿ, ಆಯುಕ್ತ ಮೊಹಮ್ಮದ್ ನಝೀರ್, ಉಪಮೇಯರ್ ಮೊಹ್ಮದ್ ಉಪಸ್ಥಿತರಿದ್ದರು.
144 ಜನರಿಂದ 1 ಲಕ್ಷ ರೂ.ಗೂ ಅಧಿಕ ಬಾಕಿ !
ಸಚಿವ ಖಾದರ್ ಮಾತನಾಡಿ, ಯಾರಿಂದ ನೀರಿನ ಬಿಲ್ ಬಾಕಿಯಾಗಿದೆ ಎಂಬುದರ ವಿವರ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅಧಿಕಾರಿಯೋರ್ವರು ಉತ್ತರಿಸಿ, 2017-18ರಲ್ಲಿ ನೀರಿನ ಬಿಲ್ 48 ಕೋ.ರೂ. ಗುರಿ ಇದ್ದು, 32 ಕೋ.ರೂ. ಸಂಗ್ರಹವಾಗಿದೆ. 16 ಕೋ. ರೂ. ಬಾಕಿಯಿದೆ. ಇದರಲ್ಲಿ ಕಣ್ಣೂರು, ಬಜಾಲ್ ಪಂಚಾಯತ್ನಿಂದ 2 ಕೋ.ರೂ., ಉಳ್ಳಾಲದಿಂದ 50 ಲಕ್ಷ ರೂ., ಮೂಲ್ಕಿಯಿಂದ 60 ಲಕ್ಷ ರೂ. ಪಾಲಿಕೆಗೆ ಪಾವತಿಸಲು ಬಾಕಿಯಿದೆ ಎಂದರು. ಖಾದರ್ ಮಾತನಾಡಿ, ‘ಉಳಿದ ಹಣ ಸಂಗ್ರಹ ಯಾಕೆ ಆಗಿಲ್ಲ. ಯಾರು ಪಾವತಿ ಮಾಡಿಲ್ಲ ಎಂಬ ವಿವರ ನೀಡುವಂತೆ ಸೂಚಿಸಿದರು. ‘ದಕ್ಷಿಣ ರೈಲ್ವೇಯಿಂದ 7 ಲಕ್ಷ ರೂ. ಸೇರಿದಂತೆ ಪ್ರಮುಖ 144 ಉದ್ಯಮಿಗಳಿಂದ 1 ಲಕ್ಷ ರೂ.ಗಳಿಗೂ ಅಧಿಕ ಬಿಲ್ ಬಾಕಿಯಿದೆ’ಎಂದರು. ಪ್ರತಿ ಕ್ರಿಯಿ ಸಿದ ಖಾದರ್, ಎಲ್ಲ ಬಾಕಿಯನ್ನು ಎರಡು ತಿಂಗಳ ಒಳಗೆ ಕಟ್ಟುನಿಟ್ಟಾಗಿ ಮರುಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.