ಮೀನು ಬೇಟೆಗೆ ಕನಿಷ್ಠ ಗಾತ್ರದ ನಿರ್ಬಂಧ
ಸಣ್ಣ ಗಾತ್ರದ 19 ಜಾತಿಯ ಮೀನುಗಳನ್ನು ಇನ್ನು ಹಿಡಿಯುವಂತಿಲ್ಲ !
Team Udayavani, Jul 30, 2019, 6:00 AM IST
ಮಂಗಳೂರು: ಮಳೆಗಾಲದ 60 ದಿನಗಳ ಸುದೀರ್ಘ ರಜೆ ಮುಗಿದು ಆ. 1ರಿಂದ ಕಡಲಿಗಿಳಿಯಲು ಮೀನುಗಾರಿಕೆ ದೋಣಿಗಳು ಸಿದ್ಧತೆ ನಡೆಸಿವೆ. ಆದರೆ ಮೀನುಗಳ ಸಂರಕ್ಷಣೆ ಮತ್ತು ಭವಿಷ್ಯದ ದೃಷ್ಟಿಯಿಂದ ಈ ಬಾರಿ 19 ಜಾತಿಯ ಮೀನುಗಳಿಗೆ ಮೀನುಗಾರಿಕೆ ನಡೆಸಬಹುದಾದ ಕನಿಷ್ಠ ಗಾತ್ರವನ್ನು ಮೀನುಗಾರಿಕೆ ಇಲಾಖೆ ನಿರ್ದೇಶಿಸಿದೆ. ಕೊಚ್ಚಿಯ ಕಡಲ ಮೀನು ಸಂಶೋಧನ ಸಂಸ್ಥೆ (ಸಿಎಂಎಫ್ಆರ್ಐ)ಯ ಶಿಫಾರಸಿನಂತೆ ಈ ನಿರ್ದೇಶನ ನೀಡಲಾಗಿದೆ.
ಪ್ರತಿ ಮೀನು ಪ್ರಭೇದಕ್ಕೆ ವಂಶಾಭಿವೃದ್ಧಿ ಅವಕಾಶ ದೊರೆತಾಗ ಮಾತ್ರ ಮೀನುಗಾರಿಕೆ ಸುಸ್ಥಿರ ಮತ್ತು ಸಮೃದ್ಧವಾಗುತ್ತದೆ. ಈ ಹಿನ್ನೆಲೆಯಲ್ಲಿ ಬಹುತೇಕ ಮೀನು ತಳಿಗಳಿಗೆ ಹಿಡಿಯಬಹುದಾದ ಕನಿಷ್ಠ ಗಾತ್ರ ವನ್ನು ನಿರ್ಧರಿಸಿ ಸಿಎಂಎಫ್ಆರ್ಐ ವಿಜ್ಞಾನಿಗಳು ಸರಕಾರಕ್ಕೆ ಸಲಹೆ ನೀಡಿದ್ದಾರೆ.
ಬೇರೆ ಬೇರೆ ಮೀನು ಹಿಡಿಯಲು ಬೇರೆ ಬೇರೆ ಗಾತ್ರದ ಕಣ್ಣಿನ ಬಲೆಗಳನ್ನು ಉಪಯೋಗಿಸುತ್ತಾರೆ. ಟ್ರಾಲ್ ಬಲೆ 35 ಎಂ.ಎಂ., ಪಸೀìನ್ ಬಲೆ 45 ಎಂ.ಎಂ. ಗಾತ್ರದ ಕಣ್ಣುಗಳನ್ನು ಹೊಂದಿರುತ್ತದೆ.
ಈ ಬಗ್ಗೆ ಮೀನುಗಾರ ಮುಖಂಡ ವಾಸುದೇವ ಬೋಳೂರು, ನಿತಿನ್ ಕುಮಾರ್ “ಉದಯವಾಣಿ’ ಜತೆಗೆ ಮಾತನಾಡಿ, ಮೀನುಗಾರಿಕೆಯ ಭವಿಷ್ಯದ ದೃಷ್ಟಿಯಿಂದ ಕಡಿಮೆ ಗಾತ್ರದ ಮೀನುಗಳನ್ನು ಹಿಡಿಯ ಬಾರದೆಂಬ ಕಾನೂನು ಹಲವು ದೇಶಗಳಲ್ಲಿ ಇದೆ. ನಮ್ಮಲ್ಲೂ ಜಾರಿಯಾಗಬೇಕು. ಆದರೆ ಇದರ ಅನು ಷ್ಠಾನಕ್ಕೆ ಇನ್ನಷ್ಟು ಅವಕಾಶ ನೀಡಬೇಕು ಎಂದಿದ್ದಾರೆ.
61 ದಿನಗಳ ನಿಷೇಧ ಮುಕ್ತಾಯ
ಪಶ್ಚಿಮ ಕರಾವಳಿಯಲ್ಲಿ 2015ಕ್ಕಿಂತ ಹಿಂದೆ 57 ದಿನ (ಜೂ. 15ರಿಂದ ಆ. 10) ಮೀನುಗಾರಿಕೆ ನಿಷೇಧವಿತ್ತು. ಆದರೆ ಮತ್ಸ Âಕ್ಷಾಮ ನೀಗಿಸುವ ಉದ್ದೇಶದಿಂದ 2015ರಲ್ಲಿ ಕೇಂದ್ರ ಸರಕಾರ ಪಶ್ಚಿಮ ಕರಾವಳಿಗೆ ಏಕರೂಪದಲ್ಲಿ 61 ದಿನ ನಿಷೇಧ ವಿಧಿಸಿ ಆದೇಶ ಹೊರಡಿಸಿದೆ.
ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಕೇರಳಗಳಲ್ಲಿ ಒಂದೇ ಅವಧಿಯ ಮೀನುಗಾರಿಕೆ ನಿಷೇಧವಿದೆ. ಮೀನುಗಳಲ್ಲಿ ಸಂತಾನೋತ್ಪತ್ತಿ ಅವಧಿ ಮಳೆಗಾಲ. ಈ ವೇಳೆ ಯಾಂತ್ರಿಕ ದೋಣಿಗಳು ನೀರಿಗಿಳಿದರೆ ಅವುಗಳ ಸಂತಾನೋತ್ಪತ್ತಿಗೆ ತೊಂದರೆ, ವಿಪರೀತ ಗಾಳಿ-ಮಳೆಯಿಂದ ಮೀನುಗಾರರಿಗೂ ಸಮಸ್ಯೆ ಎಂಬ ಕಾರಣದಿಂದ ಮೀನುಗಾರಿಕೆ ನಿಷೇಧ ಜಾರಿಯಲ್ಲಿದೆ.
ಈ ಕನಿಷ್ಠ ಗಾತ್ರಕ್ಕಿಂತ ಚಿಕ್ಕ ಮೀನುಗಳನ್ನು ಹಿಡಿಯುವುದು ಕಾನೂನುಬಾಹಿರ ಮತ್ತು ಶಿಕ್ಷಾರ್ಹ. ಆದರೂ ಶೇ. 10ರಷ್ಟು ಪ್ರಮಾಣದಲ್ಲಿ ನಿಗದಿತ ಗಾತ್ರಕ್ಕಿಂತ ಚಿಕ್ಕ ಮೀನುಗಳನ್ನು ಹಿಡಿದರೆ ವಿನಾಯಿತಿ ಇದೆ ಎಂದು ರಾಜ್ಯ ಮೀನುಗಾರಿಕಾ ಇಲಾಖೆ ತಿಳಿಸಿದೆ.
2018 ಎಪ್ರಿಲ್ನಿಂದ 2019ರ ಮಾರ್ಚ್ವರೆಗೆ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಒಟ್ಟು ಸುಮಾರು 3,166 ಕೋ.ರೂ. ಮೌಲ್ಯದ 2,77,747 ಟನ್ ಮೀನು ಹಿಡಿಯಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಉಭಯ ಜಿಲ್ಲೆಗಳಲ್ಲಿ ಮೀನಿನ ಪ್ರಮಾಣ ಮತ್ತು ಮೌಲ್ಯದಲ್ಲಿ ಕುಸಿತವಾಗಿತ್ತು. ದ.ಕ., ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಟ್ಟು 8,456 ಮೋಟರೀಕೃತ ನಾಡದೋಣಿ, 447 ಯಾಂತ್ರೀಕೃತ ದೋಣಿ ಮತ್ತು 8,999 ನಾಡದೋಣಿ ಕಾರ್ಯಾಚರಿಸುತ್ತಿವೆ.
ತಪ್ಪಿದರೆ ಕಾನೂನು ಕ್ರಮ
ಆ. 1ರಿಂದ ಕರಾವಳಿಯಲ್ಲಿ ಮೀನುಗಾರಿಕೆ ಋತು ಆರಂಭಗೊಳ್ಳಲಿದ್ದು, ಮೀನು ಸಂತತಿಯನ್ನು ಭವಿಷ್ಯದ ದಿನಗಳಿಗೂ ಕಾಪಾ ಡುವ ಉದ್ದೇಶದಿಂದ ಕನಿಷ್ಠ ಗಾತ್ರಕ್ಕಿಂತ ಚಿಕ್ಕದಾದ ಮೀನುಗಳನ್ನು ಹಿಡಿಯುವುದನ್ನು ನಿಯಂತ್ರಿಸಲು ಸರಕಾರ ಉದ್ದೇಶಿಸಿದೆ. ಇದನ್ನು ಉಲ್ಲಂಘಿಸಿದರೆ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
– ಡಿ. ತಿಪ್ಪೇಸ್ವಾಮಿ, ಮೀನುಗಾರಿಕೆ ಉಪನಿರ್ದೇಶಕರು, ಮಂಗಳೂರು
- ದಿನೇಶ್ ಇರಾ